ಸೌದ(ರ) ರವರ ವಂಶಾವಳಿಯು ಒಂಬತ್ತನೇ ಪಿತಾಮಹ ಲುಅಯ್ರಲ್ಲಿ ಪ್ರವಾದಿ(ಸ) ರೊಂದಿಗೆ ಸಂಧಿಸುತ್ತದೆ.
ಜನನ ಮತ್ತು ಬೆಳವಣಿಗೆ:
ಸೌದ(ರ) ಮಕ್ಕಾದಲ್ಲಿ ಕುರೈಶ್ ಗೋತ್ರದಲ್ಲಿ ಹುಟ್ಟಿದರು. ಅವರು ಹುಟ್ಟಿದ್ದು ಯಾವಾಗ ಎಂಬ ಬಗ್ಗೆ ನಿಖರ ದಾಖಲೆಗಳಿಲ್ಲ. ಅವರು ಆಮಿರೀ ಕುಟುಂಬದವರು. ಮಕ್ಕಾದಲ್ಲೇ ಬೆಳೆದು ದೊಡ್ಡವರಾದರು. ವಿವಾಹಪ್ರಾಯವಾದಾಗ ತನ್ನ ಸೋದರ ಸಂಬಂಧಿ ಸಕ್ರಾನ್ ಬಿನ್ ಅಮ್ರ್ರನ್ನು (ಇವರು ಹುದೈಬಿಯಾ ಸಂಧಿ ಬರೆದ ಸುಹೈಲ್ ಬಿನ್ ಅಮ್ರ್ರವರ ಸಹೋದರ) ವಿವಾಹವಾದರು. ಸಕ್ರಾನ್ರ ಸಹೋದರರಾದ ಸುಹೈಲ್, ಸಾಹಿಲ್, ಹಾತಿಬ್, ಸಲೀತ್ ಎಲ್ಲರೂ ಸಹಾಬಿಗಳಾಗುವ ಭಾಗ್ಯವನ್ನು ಪಡೆದಿದ್ದರು. ಈ ದಂಪತಿಗೆ ಅಬ್ದುಲ್ಲಾ ಎಂಬ ಗಂಡು ಮಗು ಹುಟ್ಟಿತು. ಪ್ರವಾದಿ(ಸ) ರವರು ಇಸ್ಲಾಮಿನ ಸಂದೇಶಪ್ರಚಾರವನ್ನು ಆರಂಭಿಸಿದ ಆದ್ಯ ಕಾಲದಲ್ಲೇ ಈ ದಂಪತಿ ಇಸ್ಲಾಂ ಸ್ವೀಕರಿಸಿದರು. ಮಕ್ಕಾದಲ್ಲಿ ಕುರೈಶರ ಕಾಟ ಮಿತಿ ಮೀರಿದಾಗ ಪ್ರವಾದಿ(ಸಿ) ರವರ ಆಜ್ಞೆಯಂತೆ ಇವರಿಬ್ಬರೂ ಇಥಿಯೋಪಿಯಾಗೆ ಹಿಜ್ರ ಮಾಡಿದರು. ಇಥಿಯೋಪಿಯಾದರಲ್ಲಿ ಸಕ್ರಾನ್ ನಿಧನರಾದರು. ಮಕ್ಕಾಗೆ ಮರಳಿದ ನಂತರ ನಿಧನರಾದರು ಎಂದು ಕೂಡ ಹೇಳಲಾಗುತ್ತದೆ.
ಪ್ರವಾದಿ(ಸ) ರೊಂದಿಗೆ ವಿವಾಹ:
ಇಥಿಯೋಪಿಯಾದಲ್ಲಿದ್ದಾಗ ಒಮ್ಮೆ ಪ್ರವಾದಿ(ಸ) ರವರು ಹಿಂದಿನಿಂದ ಬಂದು ತನ್ನ ಕುತ್ತಿಗೆಯನ್ನು ಹಿಡಿದಂತೆ ಸೌದ(ರ) ಕನಸು ಕಂಡರು. ಅವರು ಕನಸನ್ನು ಗಂಡ ಸಕ್ರಾನ್ಗೆ ತಿಳಿಸಿದಾಗ ಸಕ್ರಾನ್(ರ) ಹೇಳಿದರು- ನಿನ್ನ ಈ ಕನಸು ನಿಜವಾಗಿದ್ದರೆ ನನ್ನ ಮರಣಾನಂತರ ನೀನು ಪ್ರವಾದಿ(ಸ) ರನ್ನು ವಿವಾಹವಾಗುವೆ. ಸೌದ(ರ) ರಿಗೆ ನಂಬಿಕೆ ಬರಲಿಲ್ಲ. ಆದರೆ ಮತ್ತೊಮ್ಮೆ ಆಕೆ ಚಂದ್ರ ಆಕಾಶದಿಂದ ತನ್ನ ಮಡಿಲಿಗೆ ಬಿದ್ದಂತೆ ಕನಸು ಕಂಡರು. ಅದರ ಬಗ್ಗೆ ಗಂಡನಲ್ಲಿ ವಿಚಾರಿಸಿದಾಗ ನಿನ್ನ ಕಸನು ನಿಜವಾಗಿದ್ದರೆ ನಾನು ಶೀಘ್ರವೇ ಮರಣಹೊಂದುತ್ತೇನೆ ಮತ್ತು ನೀನು ಪ್ರವಾದಿ(ಸ) ರನ್ನು ವಿವಾಹವಾಗುವೆ ಎಂದು ಗಂಡ ಹೇಳಿದರು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಗಂಡ ಸಕ್ರಾನ್(ರ) ನಿಧನರಾದರೆಂದು ಹೇಳಲಾಗುತ್ತದೆ.
ಗಂಡನ ನಿಧನದ ಬಳಿಕ ಸೌದ(ರ) ಒಂಟಿಯಾದರು. ಅವರಿಗೆ ಆಸರೆಯಾಗಿ ಯಾರೂ ಇರಲಿಲ್ಲ. ಇತ್ತ ಖದೀಜಾ(ರ) ರವರ ಮರಣದಿಂದ ಪ್ರವಾದಿ(ಸ) ಬಹಳ ದುಃಖಿತರಾಗಿದ್ದರು. ಒಂದಿನ ಸೌದ(ರ) ರವರ ಗೆಳತಿ ಖೌಲ ಬಿಂತ್ ಹಕೀಮ್(ರ) (ಈಕೆ ಉಸ್ಮಾನ್ ಬಿನ್ ಮಝ್ಊನ್(ರ) ರವರ ಪತ್ನಿ) ಪ್ರವಾದಿ(ಸ) ರವರ ಬಳಿಗೆ ಹೋಗಿ ಕೇಳಿದರು- ಓ ಪ್ರವಾದಿಯವರೇ! ತಾವು ಬಹಳ ಖಿನ್ನರಾಗಿದ್ದೀರಿ. ಪ್ರವಾದಿ(ಸ) ಉತ್ತರಿಸಿದರು- ಹೌದು! ಖದೀಜಾರ ಮರಣದಿಂದ ನನಗೆ ಬಹಳ ದುಃಖವಾಗಿದೆ. ಆಕೆ ನನಗೆ ಎಲ್ಲವೂ ಆಗಿದ್ದಳು. ಖೌಲ ಕೇಳಿದರು- ಪ್ರವಾದಿಯವರೇ, ತಾವು ಒಪ್ಪಿದರೆ ನಾನು ತಮಗೆ ಒಬ್ಬ ಕನ್ಯೆಯನ್ನು ಮತ್ತು ಒಬ್ಬ ವಿಧವೆಯನ್ನು ತೋರಿಸಲೇ? ಪ್ರವಾದಿ(ಸ) ಯಾರೆಂದು ಕೇಳಿದಾಗ, ಅದು ಆಯಿಶ(ರ) ಮತ್ತು ಸೌದ(ರ) ಎಂದು ಖೌಲ(ರ) ಉತ್ತರಿಸಿದರು. ಪ್ರವಾದಿ(ಸ) ರವರು ಒಪ್ಪಿಕೊಂಡರು. ಹೀಗೆ ಖೌಲ(ರ) ಸೌದ(ರ) ರವರ ಬಳಿಗೆ ಹೋಗಿ ವಿಷಯ ತಿಳಿಸಿದರು. ಪ್ರವಾದಿ(ಸ) ರವರು ಒಪ್ಪಿಕೊಂಡರೆ ನಾನು ವಿವಾಹಕ್ಕೆ ಸಿದ್ಧ ಎಂದು ಅವರು ಹೇಳಿದರು. ಎರಡೂ ಕಡೆಯವರು ಒಪ್ಪಿದರು. ಸೌದ(ಸ) ರವರ ಚಿಕ್ಕಪ್ಪ ಹಾತಿಬ್ ಬಿನ್ ಅಮ್ರ್ ವಿವಾಹ ನೆರವೇರಿಸಿಕೊಟ್ಟರು. ಇದರ ನಂತರ ಪ್ರವಾದಿ(ಸ) ರವರು ಆಯಿಶ(ಸ) ರನ್ನು ವಿವಾಹವಾದರು.
ಮದೀನಕ್ಕೆ ಹಿಜ್ರ:
ಮಕ್ಕಾದಲ್ಲಿ ಕುರೈಶರ ಕಾಟ ಅತಿಯಾದಾಗ ಅಲ್ಲಾಹನ ಆದೇಶದಂತೆ ಪ್ರವಾದಿ(ಸ) ರವರು ಅಬೂಬಕರ್(ರ) ರವರ ಜೊತೆಗೆ ಮದೀನಕ್ಕೆ ಹಿಜ್ರ ಮಾಡಿದರು. ಅಲ್ಲಿ ಅವರು ಅಬೂ ಅಯ್ಯಬ್(ರ) ರವರ ಮನೆಯಲ್ಲಿ ತಂಗಿದರು. ಬಳಿಕ ಮಕ್ಕಾದಲ್ಲಿರುವ ತಮ್ಮ ಕುಟುಂಬದವರನ್ನು ಕರೆತರಲು ಝೈದ್ ಬಿನ್ ಹಾರಿಸ(ರ) ಮತ್ತು ಅಬೂ ರಾಫಿಅ್ ಅಲ್ಅನ್ಸಾರಿ(ರ) ಯವರನ್ನು ಮಕ್ಕಾಗೆ ಕಳುಹಿಸಿದರು. ಹೀಗೆ ಅವರ ಜೊತೆಗೆ ಸೌದ(ರ), ಪಾತಿಮ(ರ), ರುಕಯ್ಯ(ರ), ಉಮ್ಮು ಕುಲ್ಲೂಮ್(ರ) ಮತ್ತು ಝೈದ್(ರ) ರವರ ಪತ್ನಿ ಉಮ್ಮು ಐಮನ್(ರ) ಮತ್ತು ಮಗ ಉಸಾಮ(ರ) ಮದೀನಕ್ಕೆ ಪ್ರಯಾಣ ಮಾಡಿದರು.
ನಡವಳಿಕೆ ಮತ್ತು ಚಾರಿತ್ರ್ಯ:
ಮದೀನಕ್ಕೆ ಹಿಜ್ರ ಬಂದ ಬಳಿಕ ಪ್ರವಾದಿ(ಸ) ರವರು ಆಯಿಶ(ರ) ರನ್ನು ವಿವಾಹವಾದರು. ಸೌದ(ರ) ಮತ್ತು ಆಯಿಶ(ರ) ಬಹಳ ಅನ್ಯೋನ್ಯತೆಯಿಂದಿದ್ದರು. ಆಯಿಶ(ರ) ಸೌದ(ರ) ರನ್ನು ಬಹಳ ಇಷ್ಟಪಡುತ್ತಿದ್ದರು. ಏಕೆಂದರೆ ಅವರ ಸ್ವಭಾವ ಬಹಳ ಉದಾತ್ತವಾಗಿತ್ತು. ನಂತರ ಪ್ರವಾದಿ(ಸ) ರವರು ಹಫ್ಸ(ರ), ಝೈನಬ್(ರ), ಉಮ್ಮು ಸಲಮಾ(ರ) ಮುಂತಾದವನ್ನು ವಿವಾಹವಾದರು.
ಸೌದ(ರ) ಪ್ರವಾದಿ(ಸ) ರವರನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಇಹಲೋಕದಲ್ಲೂ ಪರಲೋಕದಲ್ಲೂ ಪ್ರವಾದಿ(ಸ) ರವರ ಪತ್ನಿಯಾಗಿಯೇ ಇರಲು ಅವರು ಅತೀವ ಆಸೆಯನ್ನು ಹೊಂದಿದ್ದರು. ಪ್ರವಾದಿ(ಸ) ರವರು ತನಗಿಂತಲೂ ಹೆಚ್ಚು ಆಯಿಶ(ರ) ರನ್ನು ಪ್ರೀತಿಸುತ್ತಾರೆ ಎಂದು ಅವರಿಗೆ ತಿಳಿದಿತ್ತು. ಪ್ರವಾದಿ(ಸ) ರವರ ಇಷ್ಟಕ್ಕಾಗಿ ಅವರು ಏನನ್ನೂ ತ್ಯಾಗ ಮಾಡಲು ಸನ್ನದ್ಧರಾಗಿದ್ದರು. ಆದ್ದರಿಂದ ಅವರು ತಮ್ಮ ಸರದಿಯನ್ನು ಆಯಿಶ(ರ) ರಿಗೆ ಬಿಟ್ಟುಕೊಟ್ಟರು.
ಆಯಿಶ(ರ) ಹೇಳುತ್ತಾರೆ, ಸೌದ(ರ) ಗಿಂತ ಹೆಚ್ಚು ಪ್ರೀತಿಯುಳ್ಳ ಒಬ್ಬ ಮಹಿಳೆಯನ್ನು ನಾನು ಕಂಡಿಲ್ಲ. ಆಕೆ ಬಹಳ ಭಾವೋದ್ರೇಕವುಳ್ಳವರು. ನಾನು ಆಕೆಯೆಂತೆಯೇ ಆಗಲು ಬಯಸುತ್ತಿದ್ದೆ. ವಯಸ್ಸಾದಾಗ ಆಕೆ ಪ್ರವಾದಿ(ಸ) ರೊಂದಿಗಿನ ತನ್ನ ಸರದಿಯನ್ನು ನನಗೆ ನೀಡಿದಳು. ಆಕೆ ಹೇಳಿದಳು, ಪ್ರವಾದಿಯವರೇ, ನಾನು ನನ್ನ ಸರದಿಯನ್ನು ಆಯಿಶ(ರ) ಳಿಗೆ ನೀಡುತ್ತೇನೆ. ಇದರಿಂದ ನನಗೆ ಪ್ರವಾದಿ(ಸ) ರೊಂದಿಗೆ ಎರಡು ಸರದಿಗಳಿದ್ದವು.
ಸೌದ(ರ) ಬಹಳ ಧರ್ಮಿಷ್ಠೆಯಾಗಿದ್ದರು. ಪ್ರವಾದಿ(ಸ) ರವರ ಮರಣಾನಂತರ ಒಮ್ಮೆ ಉಮರ್ ಬಿನ್ ಖತ್ತಾಬ್(ರ) ರವರು ಅವರಿಗೆ ಒಂದು ಚೀಲ ಚಿನ್ನದ ನಾಣ್ಯಗಳನ್ನು ಕಳುಹಿಸಿಕೊಟ್ಟರು. ಸೌದ(ರ) ಅದರಲ್ಲಿ ಒಂದು ನಾಣ್ಯವನ್ನೂ ಇಟ್ಟುಕೊಳ್ಳದೆ ಎಲ್ಲವನ್ನೂ ದಾನ ಮಾಡಿದರು. ಸೌದ(ರ) ಅತೀವ ದೇವಭಕ್ತಿಯನ್ನೂ ಹೊಂದಿದ್ದರು.
ಸೌದ(ರ) ಹಾಸ್ಯಪ್ರಿಯೆಯಾಗಿದ್ದರು. ಅವರು ತಮ್ಮ ಮಾತಿನ ಮೂಲಕ ಪ್ರವಾದಿ(ಸ) ರನ್ನು ನಗಿಸುತ್ತಿದ್ದರು. ಒಂದು ರಾತ್ರಿ ಅವರು ಪ್ರವಾದಿ(ಸ) ರವರ ಹಿಂದೆ ದೀರ್ಘ ಹೊತ್ತು ನಮಾಝ್ ಮಾಡಿದರು. ಮರುದಿನ ಅವರು ಹೇಳಿದರು- ಪ್ರವಾದಿಯವರೇ, ನಿನ್ನೆ ರಾತ್ರಿ ನಾನು ನಿಮ್ಮ ಜೊತೆಗೆ ನಮಾಝ್ ಮಾಡಿದೆನಲ್ಲವೇ! ಆಗ ನೀವು ಎಷ್ಟು ದೀರ್ಘವಾಗಿ ರುಕೂ ಮಾಡಿದಿರಿ ಎಂದರೆ ನಾನು ನನ್ನ ಮೂಗನ್ನು ರಕ್ತ ಸೋರದಂತೆ ಗಟ್ಟಿಯಾಗಿ ಹಿಡಿದುಕೊಂಡಿದ್ದೆ. ಇದನ್ನು ಕೇಳಿ ಪ್ರವಾದಿ(ಸ) ರವರು ಬಹಳ ಹೊತ್ತು ನಗುತ್ತಿದ್ದರು.
ಸೌದ(ರ) ರಿಗೆ ಹೆದರಿಕೆ ಸ್ವಲ್ಪ ಹೆಚ್ಚು. ಪ್ರವಾದಿ(ಸ) ರವರು ಮೊದಲ ಬಾರಿ ದಜ್ಜಾಲ್ನ ಕುರಿತು ಹೇಳಿದಾಗ ಅವರು ಬಹಳ ಹೆದರಿದ್ದರು. ಇದರ ನಂತರ ಪ್ರವಾದಿ(ಸ) ರವರ ಇತರ ಪತ್ನಿಯರು ದಜ್ಜಾಲ್ನ ಬಗ್ಗೆ ಹೇಳಿ ಅವರನ್ನು ಹೆದರಿಸುತ್ತಿದ್ದರು. ಒಮ್ಮೆ ಸೌದ(ರ) ರವರ ಮುಂದೆ ಆಯಿಶ(ರ) ಮತ್ತು ಹಪ್ಪ(ರ) ದಜ್ಜಾಲ್ನ ಕುರಿತು ಮಾತನಾಡತೊಡಗಿದರು. ಆಗ ಸೌದ (ರ) ಹೆದರಿಕೆಯಿಂದ ಕೋಣೆಯೊಳಗೆ ಹೋಗಿ ಕುಳಿತರು. ಬಹಳ ಹೊತ್ತಿನ ತನಕ ಅವರು ಹೊರ ಬರಲೇ ಇಲ್ಲ. ಪ್ರವಾದಿ(ಸ) ರವರು ಬಂದು ಅವರನ್ನು ಕರೆದ ನಂತರವೇ ಅವರು ಹೊರಗೆ ಬಂದರು.
ಹಿಜಾಬ್ನ ಆಯತ್
ಪ್ರವಾದಿ(ಸ) ರವರ ಪತ್ನಿಯರು ರಾತ್ರಿ ಹೊತ್ತು ಬಹಿರ್ದೆಸೆಗಾಗಿ ಬಕೀಅ್ ನ ಸಮೀಪವಿರುವ ಮನಾಸಿ ಎಂಬ ಸ್ಥಳಕ್ಕೆ ಹೋಗುತ್ತಿದ್ದರು. ಇದೊಂದು ಬಯಲು ಪ್ರದೇಶ. ಅವರು ರಾತ್ರಿ ಹೊತ್ತಿನಲ್ಲಿ ಮಾತ್ರ ಅಲ್ಲಿಗೆ ಹೋಗುತ್ತಿದ್ದ ರು. ಉಮರ್(ರ) ರವರು ಪ್ರವಾದಿ(ಸ) ರೊಡನೆ ತಮ್ಮ ಪತ್ನಿಯರಿಗೆ ಪರದೆ ಹಾಕುವಂತೆ ಪದೇ ಪದೇ ಒತ್ತಾಯಿ ಸುತ್ತಿದ್ದರು. ಆದರೆ ಪ್ರವಾದಿ(ಸ) ರವರು ಅತ್ತ ಗಮನಕೊಟ್ಟಿರಲಿಲ್ಲ. ಏಕೆಂದರೆ ಅವರಿಗೆ ಈ ವಿಷಯದಲ್ಲಿ ಯಾವುದೇ ಆಜ್ಞೆ ಬಂದಿರಲಿಲ್ಲ. ಒಂದು ರಾತ್ರಿ ಸೌದ(೩) ಬಹಿರ್ದೆಸೆಗಾಗಿ ಬಯಲಿಗೆ ಹೋದರು. ಸೌದ್() ಬಹಳ ಎತ್ತರವಾಗಿದ್ದು ದಪ್ಪ ಶರೀರವನ್ನು ಹೊಂದಿದ್ದರು. ಮಹಿಳೆಯರ ಮಧ್ಯೆ ಅವರನ್ನು ಸುಲಭವಾಗಿ ಗುರುತು ಹಚ್ಚಬಹುದಾಗಿತ್ತು. ಸೌದ(ರ) ರನ್ನು ನೋಡಿ ಉಮರ್(ರ) ಗಟ್ಟಿಯಾಗಿ ಕೂಗಿ ಹೇಳಿದರು- ಓ ಸೌದರವ ರೇ! ನನಗೆ ನಿಮ್ಮ ಗುರುತು ಸಿಕ್ಕಿದೆ. ಉಮರ್(ರ) ಹೀಗೆ ಹೇಳಿದ್ದು ಈ ಕಾರಣದಿಂದಲಾದರೂ ಹಿಜಾಬ್ ಜಾರಿಗೆ ಬರಲಿ ಎಂದಾಗಿತ್ತು. ಇದರ ನಂತರ ಹಿಜಾಬ್ನ ಆಯತ್ ಅವತೀರ್ಣವಾಯಿತು. ಆಯಿಶ(ರ) ಹೇಳುವಂತೆ ಇದರ ನಂತರ ಬಹಿರ್ದೆಸೆಗಾಗಿ ಪ್ರವಾದಿ(ಸ) ರವರ ಮನೆಯ ಸಮೀಪವೇ ಶೌಚಾಲಯವನ್ನು ನಿರ್ಮಿಸಲಾಯಿತು.
ಪ್ರವಾದಿ(ಸ) ರವರ ಜೊತೆಗೆ ಪ್ರಯಾಣ
ಸೌದ(ರ) ಪ್ರವಾದಿ(ಸ) ರವರ ಜೊತೆ ಖೈಬರ್ ಯುದ್ಧದಲ್ಲಿ ಭಾಗವಹಿಸಿದ್ದರು. ಅವರಿಗೆ ಯುದ್ಧಾರ್ಜಿತ ಸೊತ್ತಿನಲ್ಲಿ ಪಾಲೂ ಸಿಕ್ಕಿತ್ತು. ಪ್ರವಾದಿ(ಸ) ರವರು ವಿದಾಯದ ಹಜ್ ನಿರ್ವಹಿಸಿದಾಗ ಸೌದ(ರ) ಕೂಡ ಅವರ ಜೊತೆಗಿದ್ದರು. ಅರಫದಿಂದ ಹಿಂದಿರುಗಿ ಮಗ್ರಿಬ್, ಇಶಾ ಮತ್ತು ಫಜ್ರ್ ನಮಾಝ್ಗಳನ್ನು ಮುಝ್ದಲಿಫದಲ್ಲಿ ನಿರ್ವಹಿಸಬೇಕಾಗಿದೆ. ಆದರೆ ಸೌದ(ರ) ಮಿನಾಗೆ ತೆರಳಿ ಅಲ್ಲಿ ಫಜ್ರ್ ನಮಾಝ್ ನಿರ್ವಹಿಸಲು ಪ್ರವಾದಿ(ಸ) ರೊಡನೆ ಅನುಮತಿ ಕೇಳಿದರು. ಏಕೆಂದರೆ ಅವರಿಗೆ ವೇಗವಾಗಿ ನಡೆಯಲಾಗುತ್ತಿರಲಿಲ್ಲ. ಪ್ರವಾದಿ(ಸ) ಅನುಮತಿ ಕೊಟ್ಟರು. ಆಯಿಶ(ರ) ಹೇಳುತ್ತಾರೆ- ಪ್ರವಾದಿ(ಸ) ರವರು ನನಗೂ ಅನುಮತಿ ಕೊಟ್ಟಿದ್ದರೆ ಎಷ್ಟು ಚೆನ್ನಾಗಿತ್ತು. ಏಕೆಂದರೆ ನನಗೆ ಸೌದ(ರ) ರವರ ಜೊತೆಗಿರುವುದು ಎಂದರೆ ಬಹಳ ಇಷ್ಟ.
ಸೌದ(ರ) ಪ್ರವಾದಿ(ಸ) ರವರ ಜೊತೆಗೆ ಹಜ್ಜ್ ನಿರ್ವಹಿಸಿದ್ದರು. ಅದರ ನಂತರ ಅವರು ಹೆಜ್ಜ್ ನಿರ್ವಹಿಸಲಿಲ್ಲ. ಸೌದ(ರ) ಮತ್ತು ಮೈನಬ್ ಬಿಂತ್ ಜಹ್(ರ) ರನ್ನು ಬಿಟ್ಟು ಉಳಿದ ಎಲ್ಲಾ ಪತ್ನಿಯರು ಪ್ರವಾದಿ(ಸ) ರವರ ಮರಣಾನಂತರ ಅನೇಕ ಬಾರಿ ಹಜ್ಜ್ ನಿರ್ವಹಿಸಿದ್ದರು. ಆದರೆ ಸೌದ(ರ) ಪ್ರವಾದಿ(ಸ) ರವರು ನಿಧನರಾದ ಬಳಿಕ ತಮ್ಮ ಮರಣದ ತನಕ ಮದೀನದ ತಮ್ಮ ಮನೆಯಿಂದ ಕದಲಲಿಲ್ಲ. ಅವರು ಹೇಳುತ್ತಾರೆ- ಪ್ರವಾದಿ(ಸ) ರವರ ಮರಣಾನಂತರ ನಾನು ವಾಹವನ್ನೇರಿಯೇ ಇಲ್ಲ.
ಹದೀಸ್ ವರದಿ
ಸೌದ(ರ) ಐದು ಹದೀಸ್ಗಳನ್ನು ವರದಿ ಮಾಡಿದ್ದಾರೆ. ಅದರಲ್ಲಿ ಒಂದು ಹದೀಸ್ ಸಹೀಹುಲ್ ಬುಖಾರಿಯಲ್ಲಿದೆ. ಅವರು ವರದಿ ಮಾಡಿದ ಒಂದು ಪ್ರಮುಖ ಹದೀಸ್ ಹೀಗಿದೆ: ಒಮ್ಮೆ ಒಬ್ಬ ವ್ಯಕ್ತಿ ಪ್ರವಾದಿ(ಸ) ರವರ ಬಳಿಗೆ ಬಂದು ಕೇಳಿದರು- ಓ ಅಲ್ಲಾಹನ ಸಂದೇಶವಾಹಕರೇ! ನನ್ನ ತಂದೆ ವಯೋವೃದ್ಧರು. ಅವರಿಗೆ ಹಜ್ಜ್ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅವರ ಪರವಾಗಿ ನಾನು ಹಜ್ಜ್ ನಿರ್ವಹಿಸಿದರೆ ಅದು ಸರಿಯಾಗುವುದೇ? ಪ್ರವಾದಿ(ಸ) ರವರು ಆ ವ್ಯಕ್ತಿಯೊಡನೆ ತಿರುಗಿ ಒಂದು ಪ್ರಶ್ನೆ ಕೇಳಿದರು ನಿನ್ನ ತಂದೆಗೆ ಸಾಲವಿದ್ದು ಅವರ ಪರವಾಗಿ ನೀನು ಆ ಸಾಲವನ್ನು ತೀರಿಸಿದರೆ ಅದು ನಿನ್ನಿಂದ ಸ್ವೀಕೃತವಾಗುವುದಿಲ್ಲವೇ? ಆ ವ್ಯಕ್ತಿ ಹೌದೆಂದು ಉತ್ತರಿಸಿದಾಗ ಪ್ರವಾದಿ(ಸ) ರವರು ಹೇಳಿದರು- ಅಲ್ಲಾಹು ಅತ್ಯಂತ ದಯಾಳು ಮತ್ತು ಕರುಣೆಯುಳ್ಳವನು. ನೀನು ನಿನ್ನ ತಂದೆಯ ಪರವಾಗಿ ಹಜ್ಜ್ ನಿರ್ವಹಿಸು.
ಮರಣ:
ಸೌದ(ರ) ಹಿಜರಿ ಶಕೆ 54 ಶವ್ವಾಲ್ ತಿಂಗಳಲ್ಲಿ ಮದೀನದಲ್ಲಿ ನಿಧನರಾದರು. ಆಗ ಮುಆವಿಯ(ರ) ಖಲೀಫ ರಾಗಿದ್ದರು. ಆಗ ಅವರಿಗೆ 80 ವರ್ಷ ಪ್ರಾಯವಾಗಿತ್ತು. ಬಕೀಅ್ ಕಬರಸ್ಥಾನದಲ್ಲಿ ಅವರನ್ನು ದಫನ ಮಾಡಲಾಯಿತು.