ಪರಮ ದಯಾಮಯ ಕರುಣಾನಿಧಿಯೂ ಆದ ದೇವನಾಮದಿಂದ
ಯೇಸುವಿನ ಅದ್ಭುತ ಜನನ
1.ಯೇಸು ಕ್ರಿಸ್ತ (ಅವರ ಮೇಲೆ ದೇವನ ಶಾಂತಿಯಿರಲಿ)
*ಪ್ರಪಂಚದ ಎರಡು ದೊಡ್ಡ ಧರ್ಮಗಳಾದ ಕ್ರೈಸ್ತವ ಮತ್ತು ಇಸ್ಲಾಂ ಧರ್ಮಕ್ಕೆ ಸೇರಿರುವ ಎಲ್ಲರೂ ಹೊಗಳಲ್ಪಡುವ ಮಹಾನ್ ವ್ಯಕ್ತಿ ಯೇಸುರವರು.
*ಈ ದೊಡ್ಡ ಧರ್ಮಗಳನ್ನು ಹಿಂಬಾಲಿಸುವವರನ್ನು ಒಂದು ಮಾಡುವ ಸೇತುವೆಯಾಗಿದ್ದಾರೆ. ಎರಡೂ ಧರ್ಮದವರೂ ಕಾತುರದಿಂದ ಇವರಿಗಾಗಿ ಪ್ರತೀಕ್ಷಿಸುತ್ತಿರುವ ವ್ಯಕ್ತಿ.
*ಎಲ್ಲರನ್ನು ಒಂದು ಗೂಡಿಸಲು ಪುನ: ಈ ಭೂಮಿಗೆ ಬರುವ ವ್ಯಕ್ತಿ.
*ಈ ವಿಷೇಶ ವ್ಯಕ್ತಿಯ ಆಗಮನದಲ್ಲಿ ಯಾರಿಗೆ ತಾನೆ ಸಂತೋಷವಾಗುವುದಿಲ್ಲ.
ಯೇಸುವಿನ ಜನನ …
ನಮ್ಮ ಮನುಕುಲವೆಂಬುದು ಒಂದೇ ಆಗಿದ್ದು ನಮ್ಮ ದೇವನು ಒಬ್ಬನೇ ಆಗಿದ್ದಾನೆ. ನಾವು ಯಾವುದೇ ಕಾಲದಲ್ಲಿ ಎಲ್ಲಿಯೇ ಹುಟ್ಟಿದರೂ ನಾವೆಲ್ಲರೂ ಒಂದೇ ಕುಟುಂಬದವರೆಂಬುದನ್ನು ನಾವು ಮರೆಯಬಾರದು. ನಮ್ಮ ಕುಟುಂಬಕ್ಕೆ ದಾರಿ ತೋರಿಸಲೆಂದೇ ದೇವನು ಆಗಾಗ ತನ್ನ ಸಂದೇಶವಾಹಕರನ್ನು ಕಳುಹಿಸಿದ್ದನು. ಅವರೆಲ್ಲರೂ ನಮ್ಮವರೇ ಎಂಬುದು ಸತ್ಯ. ಈ ವಿಶಾಲ ಮನೋಭಾವದೊಂದಿಗೆ ನಾವು ವರ್ತಿಸಿದರೆ ನಮ್ಮಿಂದ ಕಳೆದು ಹೋಗಿರುವ ಸಹೋದರತ್ವವನ್ನು ಪುನಃ ಸ್ಥಾಪಿಸಬಹುದು. ದೇವನ ಸಂದೇಶವಾಹಕರ ಮಧ್ಯದಲ್ಲಿ ಭೇದಭಾವ ಮಾಡಬಾರದೆಂಬುದು ದೇವನ ಪ್ರತ್ಯೇಕ ಆಜ್ಞೆ.
ಪವಿತ್ರ ಖುರ್ಆನ್, “ದೂತರು ತಮ್ಮ ಒಡೆಯನ ಕಡೆಯಿಂದ ತಮ್ಮೆಡೆಗೆ ಇಳಿಸಿಕೊಡಲಾಗಿರುವ ಸಂದೇಶದಲ್ಲಿ ನಂಬಿಕೆಯಿಟ್ಟಿದ್ದಾರೆ. ವಿಶ್ವಾಸಿಗಳೂ ಅಷ್ಟೇ ಅವರೆಲ್ಲ ದೇವನಲ್ಲಿ ಅವನ ಮಲಕ್ಗಳಲ್ಲಿ ಅವನ ಗ್ರಂಥಗಳಲ್ಲಿ ಮತ್ತು ಅವನ ದೂತರುಗಳಲ್ಲಿ ನಂಬಿಕೆ ಇಟ್ಟಿರುತ್ತಾರೆ. “ನಾವು ಅವನ ದೂತರ ನಡುವೆ ಯಾವುದೇ ತಾರತಮ್ಯ ಮಾಡುವುದಿಲ್ಲ” (ಎಂದು ಅವರು ಹೇಳುತ್ತಾರೆ) ಮತ್ತು ಅವರು “ನಾವು ಕೇಳಿದೆವು ಮತ್ತು ಅನುಸರಿಸಿದೆವು ನಮ್ಮೊಡೆಯನೇ ನಿನ್ನಲ್ಲಿ ನಾವು ಕ್ಷಮೆ ಕೋರುತ್ತೇವೆ ಮತ್ತು ಅಂತಿಮವಾಗಿ (ಎಲ್ಲರೂ) ನಿನ್ನೆಡೆಗೇ ಮರಳಬೇಕಾಗಿದೆ” ಎನ್ನುತ್ತಾರೆ. ಪವಿತ್ರ ಖುರ್ಆನ್ 2:285
ಆ ಸಂದೇಶವಾಹಕರ ಪರಂಪರೆಯಲ್ಲಿ ಬಂದಿರುವವರೇ ನಮ್ಮ ಯೇಸು (ಅಲೈಹಿಸ್ಸಲಾಂ = ಅವರ ಮೇಲೆ ದೇವನ ಶಾಂತಿಯಿರಲಿ) ಹೌದು ಸತ್ಯವನ್ನು ಈ ಭೂಮಿಯಲ್ಲಿ ಸ್ಥಾಪಿಸಲು ಬಂದಿರುವ ದೊಡ್ಡ ಸಂದೇಶವಾಹಕರಲೊಬ್ಬರು ಯೇಸು (ಅ.ಸ) ಹುಟ್ಟಿದ ದಿವಸದಿಂದಲೇ ತುಂಬಾ ಅಧ್ಬುತಗಳನ್ನು ಮಾಡಿರುವ ಮಹಾನ್ ವ್ಯಕ್ತಿ ಯೇಸು (ಅ.ಸ) ಮೇರಿ ಎಂಬ ತಾಯಿಗೆ ಹುಟ್ಟಿರುವ ಯೇಸು ಸತ್ಯವನ್ನು ಭೂಮಿಯಲ್ಲಿ ತಿಳಿಸಲು ನಿರಂತರ ಪ್ರಯತ್ನಿಸಿದ ವ್ಯಕ್ತಿ . ಯಾವುದಕ್ಕೂ ಅಂಜದೆ ಅಳುಕದೆ, ಅನ್ಯಾಯಿಗಳ ಮತ್ತು ಅಕ್ರಮಿಗಳ ವಿರುದ್ಧ ಹೋರಾಡಿದರು. ದೇವನ ಹೆಸರಿನಲ್ಲಿ ಸುಳ್ಳು ಹೇಳಿ ಜನರ ಮಧ್ಯದಲ್ಲಿ ಭಿನ್ನತೆಯನ್ನು ಹುಟ್ಟಿಸಿ ಜನರ ಹಣವನ್ನು ಕೊಳ್ಳೆ ಹೊಡೆಯುವ ಧರ್ಮ ಗುರುಗಳ ವಿರುದ್ಧ ಹೋರಾಡಿ ಅವರನ್ನು ಎದುರಿಸಿದರು.
ಇದರ ಫಲವೇನಾಯಿತೆಂದರೆ … ಜನರ ಕುತಂತ್ರ ಅನ್ಯಾಯಕ್ಕೆ ವಿಧೇಯರಾದರು ಯೇಸು (ಅ.ಸ) ಅವರನ್ನು ಕೊಂದು ಸತ್ಯದ ಬೆಳವಣಿಗೆಯನ್ನು ತಡೆಯಲು ಅನೇಕ ಕುತಂತ್ರಗಳನ್ನು ವಿರೋಧಿಗಳು ನಡೆಸಿದರು. ಆದರೆ ಈ ಕುತಂತ್ರಗಳ ನಡುವೆಯೂ ದೇವನಿದ್ದು ಅದ್ಭುತ ರೀತಿಯಲ್ಲಿ ಕಾಪಾಡಲ್ಪಟ್ಟರು
“ವಾಸ್ತವದಲ್ಲಿ ಅವರನ್ನು ದೇವನು ತನ್ನೆಡೆಗೆ ಎತ್ತಿಕೊಂಡನು” ( ಖುರ್ಆನ್ 4:158)
ಅವರ ನಂತರ ಅದೇ ರೀತಿಯಲ್ಲಿ ಸುಮಾರು 550 ವರ್ಷಗಳ ನಂತರ ಸತ್ಯವನ್ನು ಪುನಃ ಸ್ಥಾಪಿಸಲು ಬಂದಿರುವವರೇ ಮುಹಮ್ಮದ್ ಸ. ಅವರ ಮೂಲಕ ಕಳುಹಿಸಲ್ಪಟ್ಟಿರುವ ದಿವ್ಯವಾಣಿಯೇ ಖುರಆನ್ ಎಂಬುದಾಗಿದೆ. ಈ ಅಂತಿಮ ವೇದ ಗ್ರಂಥದಲ್ಲಿ ನಾವೆಲ್ಲರೂ ಪ್ರೀತಿಸುವ ಯೇಸುವಿನ (ಅ.ಸ) ಜನನದ ಕುರಿತು ತಮ್ಮೊಂದಿಗೆ ಹಂಚಿಕೊಳ್ಳಲು ನಮಗೆ ಸಂತೋಷವಾಗುತ್ತದೆ.
2. ಮರಿಯಮ್
ಖುರಆನಿನಲ್ಲಿ ಮರಿಯಮ್ ಎಂಬ ಹೆಸರಿನಿಂದ ಒಂದು ಅಧ್ಯಾಯವೇ ಇದೆ. ಅದರಲ್ಲಿ ಈ ಅದ್ಭುತವಾದ ಸಂದೇಶ ಸಿಗುತ್ತದೆ.
ದೇವನು ಪವಿತ್ರಾತ್ಮವನ್ನು ಮೇರಿ ಮಾತೆಯ ಹತ್ತಿರ ಕಳುಹಿಸಿ ಗರ್ಭ ಧರಿಸುವ ಸಂದೇಶ ಪವಿತ್ರ ಖುರಆನಿನಲ್ಲಿ ಈ ರೀತಿ ತಿಳಿಸಲಾಗಿದೆ.
“ಮತ್ತು ನೀವು ಈ ಗ್ರಂಥದಲ್ಲಿ ಮರಿಯಮ್ರನ್ನು ಪ್ರಸ್ತಾಪಿಸಿರಿ- ಆಕೆ ತನ್ನ ಮನೆಯವರಿಂದ ಬೇರ್ಪಟ್ಟು ಪೂರ್ವ ದಿಕ್ಕಿಗಿದ್ದ ಸ್ಥಳವೊಂದರಲ್ಲಿ ತಂಗಿದ್ದರು”.
“ಆಕೆ ತನ್ನನ್ನು ಅವರಿಂದ ಮರೆಯಾಗಿಟ್ಟಿದ್ದರು. ನಾವು ಆಕೆಯ ಬಳಿಗೆ ನಮ್ಮ ಒಬ್ಬ ರೂಹ ಅನ್ನು (ವಿಶೇಷ ಮಲಕ್ ಅನ್ನು) ಕಳುಹಿಸಿದೆವು. ಅವನು ಒಬ್ಬ ಪರಿಪೂರ್ಣ ಮಾನವನ ರೂಪದಲ್ಲಿ ಆಕೆಯ ಮುಂದೆ ಕಾಣಿಸಿಕೊಂಡನು”.
“ಆಕೆ ಹೇಳಿದರು; ನೀನು ಭಯ ಭಕ್ತಿ ಉಳ್ಳವನಾಗಿದ್ದರೆ, ನಾನು ನಿನ್ನ ವಿರುದ್ಧ ಪರಮ ದಯಾಳುವಿನ ರಕ್ಷಣೆ ಕೋರುತ್ತೇನೆ”.
“ಅವನು ಹೇಳಿದನು; ನಾನು ನಿನ್ನ ಒಡೆಯನ ದೂತ ಮತ್ತು ನಾನು ನಿನಗೆ ಒಬ್ಬ ಪಾವನ ಪುತ್ರನನ್ನು ನೀಡಲು ಬಂದಿದ್ದೇನೆ”.
“ಆಕೆ ಹೇಳಿದರು; ನನಗೆ ಪುತ್ರನಾಗುವುದಾದರೂ ಹೇಗೆ? ನನ್ನನ್ನು ಯಾವ ಮನುಷ್ಯನೂ ಮುಟ್ಟಿದ್ದಿಲ್ಲ ಮತ್ತು ನಾನು ಅನಾಚಾರ ಎಸಗುವವಳೂ ಅಲ್ಲ”.
“ಅವನು ಹೇಳಿದನು; ಹಾಗೆಯೇ ಆಗುವುದು ಇದು ನನಗೆ ತೀರಾ ಸುಲಭವೆಂದು ಹಾಗೂ ನಾವು ಆತನನ್ನು ಮಾನವರ ಪಾಲಿಗೆ ಪುರಾವೆಯಾಗಿಸುವೆವು ಮತ್ತು ನನ್ನ ಕಡೆಯಿಂದ ಬಂದ ಅನುಗ್ರಹವಾಗಿಸುವೆವು ಎಂದು ನಿನ್ನ ಒಡೆಯನೇ ಹೇಳುತ್ತಾನೆ. ಇದೊಂದು ಪೂರ್ವ ನಿಶ್ಚಿತ ತೀರ್ಮಾನವಾಗಿದೆ.” (ಪವಿತ್ರ ಖುರ್ಆನ್ ಅಧ್ಯಾಯ ಮರಿಯಮ್ 17,18,19.20,21.)
3. ಮೇರಿಮಾತೆಯು ಮದುವೆಯಾಗದೇ ಗರ್ಭಿಣಿಯಾದಳೆಂದು ಮಾನಸಿಕವಾದ ಸಂಕಷ್ಟಗಳಿಗೀಡಾಗುತ್ತಾರೆ. ಸಮಾಜದಲ್ಲಿ ಪರಿಹಾಸ್ಯ ಮತ್ತು ನಿಂದನೆಗೊಳಗಾಗುತ್ತಾರೆ.
ಮದುವೆ ಯಾಗದವಳೊಬ್ಬಳು ಗರ್ಭಿಣಿಯಾದರೆ ಜನ ಸುಮ್ಮನೆ ಬಿಡುತ್ತಾರೆಯೇ. ಅವರು ಅನುಭವಿಸಿರುವ ನಿಂದನೆಯನ್ನು ಖುರಆನ ಈ ರೀತಿ ಹೇಳುತ್ತದೆ.
“ಮುಂದೆ ಆಕೆ ಗರ್ಭಿಣಿಯಾದರು. ಆಕೆ ಅದನ್ನು ಹೊತ್ತು ದೂರದ ಒಂದೆಡೆಗೆ ಹೋದರು”.
“ಹೆರಿಗೆಯ ನೋವು ಆಕೆಯನ್ನು ಖರ್ಜೂರದ ಗಿಡದ ಬುಡದೆಡೆಗೆ ಕೊಂಡೊಯ್ಯಿತು. ಆಕೆ ಹೇಳಿದರು; ನಾನು ಇದಕ್ಕೆ ಮುನ್ನವೇ ಸತ್ತಿದ್ದರೆ ಅಥವಾ ಸಂಪೂರ್ಣ ಮರೆಯಲ್ಪಟ್ಟವಳಾಗಿದ್ದರೆ ಎಷ್ಟು ಚೆನ್ನಾಗಿತ್ತು! ಕೊನೆಗೆ ಅವನು (ಮಲಕ) ಅದರ (ಖರ್ಜೂರ ಗಿಡದ) ಒಳಗಿನಿಂದ ಆಕೆಯನ್ನು ಕರೆದು ಹೇಳಿದನು; ನೀನು ದುಖಿಃಸಬೇಡ, ನಿನ್ನ ಒಡೆಯನು ನಿನ್ನ ಕಾಲ ತಳದಲ್ಲಿ ಒಂದು ಚಿಲುಮೆಯನ್ನು ಹೊರಡಿಸಿರುವನು”.
“ನೀನು ಖರ್ಜೂರದ ಕಾಂಡವನ್ನು ನಿನ್ನೆಡೆಗೆ ಎಳೆ, ಖರ್ಜೂರದ ತಾಜಾ ಹಣ್ಣುಗಳು ನಿನ್ನ ಮೇಲೆ ಉದುರಿ ಬೀಳುವವು”.
“ನೀನು ತಿನ್ನು, ಕುಡಿ ಮತ್ತು ನಿನ್ನ ಕಣ್ಣುಗಳನ್ನು ತಣಿಸಿಕೋ, ಇನ್ನು ನೀನು ಯಾರಾದರೊಬ್ಬರು ವ್ಯಕ್ತಿಯನ್ನು ಕಂಡರೆ ನಾನು ಆ ಪರಮ ದಯಾಮಯನಿಗಾಗಿ ಉಪವಾಸ ಆಚರಿಸುವ ಹರಕೆ ಹೊತ್ತಿದ್ದೇನೆ. ಇಂದು ನಾನು ಯಾವ ವ್ಯಕ್ತಿಯ ಜೊತೆಗೂ ಖಂಡಿತ ಮಾತನಾಡಲಾರೆ ಎಂದು ಹೇಳು”. (ಪವಿತ್ರ ಖುರ್ಆನ್ ಅಧ್ಯಾಯ ಮರಿಯಮ್ 19:22,23,24,25,26.)
ಈ ರೀತಿಯಾಗಿ ಅದ್ಭುತವಾದ ರೀತಿಯಲ್ಲಿ ವಿವಾಹವಿಲ್ಲದೇ ಯಾವುದೇ ಗಂಡಿನ ಸ್ಪರ್ಶ ಸಂಪರ್ಕವಿಲ್ಲದೆ ಯೇಸು ಎಂಬ ಅದ್ಭುತ ಪುತ್ರನನ್ನು ಗರ್ಭಧರಿಸಿ ಜನ್ಮ ನೀಡಿದಳು ಮೇರಿಮಾತೆ. ಹೀಗೆ ಆ ಮಗುವನ್ನು ಇತ್ತಿಕೊಂಡು ಜನರ ಮುಂದೆ ಬರಬೇಕೆಂದರೆ ಅವರ ಮನಸ್ಥಿತಿ ಹೇಗಾಗಿರಬಹುದೆಂದು ಯೋಚಿಸಿನೋಡಿ, ಹೇಗೆ ನಾನು ಜನರ ಪರಿಹಾಸ್ಯ ಮತ್ತು ಚುಚ್ಚು ಮಾತುಗಳನ್ನು ಸಹಿಸಬೇಕೆಂದು ಯೋಚಿಸಿದಾಗ, ಯಾವ ಮುಖದಿಂದ ನಾನು ಅವರನ್ನು ಭೇಟಿ ಮಾಡಬೇಕೆಂದಾಗ, ಮಗುವನ್ನೆತ್ತಿಕೊಂಡು ಈ ಜನರಿಂದ ಹೇಗೆ ತಪ್ಪಿಸಿಕೊಳ್ಳುವುದು ಸಾಧ್ಯ?
ಹೌದು ಮೇರಿ ಮಾತೆ ಅಂದು ಕೊಂಡಂತೆಯೇ ಜನರು ಅವರನ್ನು ನಿಂದಿಸಿದರು ಪವಿತ್ರ ಖುರ್ಆನ್
“ಮುಂದೆ ಆಕೆ ಅದನ್ನು (ಮಗುವನ್ನು) ಹೊತ್ತು ತನ್ನ ಜನಾಂಗದವರ ಬಳಿಗೆ ಬಂದರು. ಅವರು (ಜನಾಂಗದವರು) ಹೇಳಿದರು; ಓ ಮರಿಯಮ್ ನೀನು ಬಹಳ ಕೆಟ್ಟ ವಸ್ತುವನ್ನು ತಂದಿರುವೆ”.
“ಓ ಹಾರೂನನ ಸಹೋದರಿಯೇ ನಿನ್ನ ತಂದೆ ದುಷ್ಟನಾಗಿರಲಿಲ್ಲ ಮತ್ತು ನಿನ್ನ ತಾಯಿಯೂ ದುರಾಚಾರಿಯಾಗಿರಲಿಲ್ಲ.” ಅಧ್ಯಾಯ ಮರಿಯಮ್: 27,28
4. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಮೇರಿ ಮಾತೆ ಏನು ಮಾಡಿದರು?
ಮೇರಿ ಮಾತೆಯನ್ನು ಯೇಸು (ಅ.ಸ.) ಮಗುವನ್ನು ಪುಣ್ಯ ಪುತ್ರನಾಗಿ ಒಪ್ಪಿಕೊಂಡರೆ? ಆ ಕಾಲದಲ್ಲಿ ವೈಭಿಚಾರದ ಕೃತ್ಯಕ್ಕೆ ಕಲ್ಲಿನಿಂದ ಹೊಡೆದು ಸಂಹರಿಸುವ ಶಿಕ್ಷೆಯಿಂದ ಹೇಗೆ ಉಳಿದರು? ಯಾವುದೋ ಒಂದು ಅದ್ಭುತವೇ ನಡೆದಿರಬೇಕಲ್ಲವೇ? ಈ ಪ್ರಶ್ನೆಗಳಿಗೆ ಉತ್ತರಬೇಕಾದಲ್ಲಿಮುಂದೆ ಓದಿ, ಪವಿತ್ರ ಖುರ್ಆನ್,
“ಆಕೆ ಅದರೆಡೆಗೆ (ಮಗುವಿನೆಡೆಗೆ) ಸನ್ನೆ ಮಾಡಿದರು. ಆಗ ಅವರು ತೊಟ್ಟಿಲಲ್ಲಿರುವ ಪುಟ್ಟ ಮಗುವಿನ ಜೊತೆಗೆ ನಾವು ಮಾತನಾಡುವುದಾದರೂ ಹೇಗೆ? ಎಂದರು”
“ಆಗ ಅದು (ಮಗು) ಹೇಳಿತು ನಾನು ಖಂಡಿತ ಅಲ್ಲಾಹನ ದಾಸನು ಅವನು ನನಗೆ ಗ್ರಂಥವನ್ನು ನೀಡಿರುವನು ಹಾಗೂ ನನ್ನನ್ನು ಸಂದೇಶವಾಹಕನಾಗಿ ನೇಮಿಸಿರುವನು”
“ಮತ್ತು ನಾನೆಲ್ಲೆ ಇರಲಿ, ಅವನು ನನ್ನನ್ನು ಸಮೃದ್ಧನಾಗಿಸಿರುವವನು ಮತ್ತು ನಾನು ಬದುಕಿರುವಷ್ಟು ಕಾಲ ನಮಾಜ್ ಸಲ್ಲಿಸುತ್ತಿರಬೇಕು ಹಾಗೂ ಝಕಾತ್ ಪಾವತಿಸುತ್ತಿರಬೇಕು ಎಂದು ಅವನು ಆದೇಶಿಸಿರುವನು”
“ಹಾಗೆಯೇ ಅವನು ನನ್ನನ್ನು ನನ್ನ ತಾಯಿಗೆ ವಿಧೇಯನಾಗಿಸಿರುವನು ಮತ್ತು ನನ್ನನ್ನು ಅವನು ಅಹಂಕಾರಿ ಹಾಗೂ ದುಷ್ಟನಾಗಿ ಮಾಡಿಲ್ಲ”
“ನಾನು ಜನಿಸಿದ ದಿನ ನಾನು ಸಾಯುವ ದಿನ ಮತ್ತು ನನ್ನನ್ನು ಪುನಃ ಜೀವಂತಗೊಳಿಸಲಾಗುವ ದಿನ ನನಗೆ ಶಾಂತಿ ಇದೆ”. (ಅಧ್ಯಾಯ ಮರಿಯಮ್, 29,30,31,32,33)
ಹೌದು ಸ್ನೇಹಿತರೆ ಇದನ್ನೆ ನಾವು ಚಿಂತಿಸ ಬೇಕಾಗಿದೆ ಮೇರಿ ಮಾತೆಯನ್ನು ಪರಿಹಾಸ್ಯ ಮಾಡಿದ ನಿಂದಿಸಿದ ಜನರು ಮಗು ಯೇಸು ಮಾತನಾಡಿದ ಅದ್ಭುತವನ್ನು ಕಣ್ಣಿನಿಂದನೋಡಿದರು. ಈ ಪರಿಶುದ್ಧ ಅದ್ಭುತವೆ ಕನ್ಯೆ (ವರ್ಜಿನ್) ಮೇರಿ ಮಾತೆಯನ್ನು ಕಾಪಾಡಿತು. ಅವರೆಗೂ ಮೇರಿ ಮಾತೆಯನ್ನು ಆರೋಪಿಸಿದ ಜನರು ತನ್ನ ತಪ್ಪನ್ನು ಅರಿತು ಮೇರಿ ಮಾತೆಗೆ ಕ್ಷಮೆ ಕೇಳಿ ಅವರ ಪರಿಶುಧ್ಧತೆಯನ್ನು ಮೆಚ್ಚಲು ಆರಂಭಿಸಿದರು. ಈ ಒಂದು ಅದ್ಭುತವೇ ಚರಿತ್ರೆಯಲ್ಲಿ ಪುಷ್ಟಿದಾಯಕವಾಯಿತು. ಚಿಕ್ಕ ಮಗುವು ಮಾತನಾಡಿರುವುದರ ಕಡೆಗೆ ನಾವು ಗಮನ ಕೊಡಬೇಕು.
* ಇದೇ ಯೇಸು ಮಾಡಿರುವ ಮೊದಲನೆ ಅಧ್ಬುತ.
* ಇವುಗಳೇ ಯೇಸುವಿನ ಮೊದಲನೇ ಸುವಾರ್ತೆಗಳು
* ಈ ರೀತಿಯಾಗಿ ದೇವನ ಹಿಂದಿನ ವೇದ ಗ್ರಂಥ ಬೈಬಲ್ ಬಿಟ್ಟು ಹೋಗಿರುವ ಒಗಟು ಅಥವ ಸಮಸ್ಯೆಯನ್ನು ಖುರಆನ್ ನಿವಾರಿಸುತ್ತದೆ.
“ಇದು ಮರ್ಯಮರ ಪುತ್ರ ಯೇಸು (ಅ.ಸ) ಅವರ ಕುರಿತಂತೆ ಜನರು ಜಗಳಾಡುತ್ತಿರುವ ವಿಷಯಗಳ ಸತ್ಯಾಂಶ” (ಖುರ್ಆನ್ ಅಧ್ಯಾಯ ಮರಿಯಮ್: 34, (19:16 ರಿಂದ 34 ರವರೆಗೆ)
ಪುರುಷ ಸಂಪರ್ಕವಿಲ್ಲದೆಯೇ ಯೇಸುವಿನ ಜನನ ಸಾಧ್ಯವಿಲ್ಲವೆಂದು ಬಹಳಷ್ಟು ಜನರು ನಂಬಿದ್ದಾರೆ. ಅವರಿಗೆ ಖುರ್ಆನ್ ಈ ರೀತಿಯಾಗಿ ಒಂದು ಒಳ್ಳೆಯ ವಾದವನ್ನು ಮುಂದಿಡುತ್ತಿದೆ. ಪವಿತ್ರ ಖುರ್ಆನ್,
“ದೇವನ ಬಳಿ ಈಸಾರ ಉದಹರಣೆಯು ಆದಮ್ ರಂತಿದೆ. ಅವನು ಅವರನ್ನು ಮಣ್ಣಿನಿಂದ ಸೃಷ್ಟಿಸಿದನು ಮತ್ತು ಅವರೊಡನೆ ‘ಆಗು’ ಎಂದಷ್ಟೇ ಹೇಳಿದ್ದನು. ಅವರು ಆಗಿಬಿಟ್ಟದ್ದರು. ಇದು (ಖುರ್ಆನ) ನಿಮ್ಮೊಡೆಯನ ಕಡೆಯಿಂದ ಬಂದಿರುವ ಸತ್ಯ ನೀವು ಈ ಕುರಿತು ಸಂಶಯಿಸುವವರ ಸಾಲಿಗೆ ಸೇರಬೇಡಿರಿ” (ಪವಿತ್ರ ಖುರ್ಆನ್ ಅಧ್ಯಾಯ ಆಲಿ ಇಮ್ರಾನ್ : 59,60.)
5. ಹಾಗೆ ಮೊದಲ ಮನುಷ್ಯ ಆದಮರು ತಂದೆ ತಾಯಿ ಇಲ್ಲದೆ ಮಣ್ಣಿನಿಂದ ಸೃಷ್ಟಿ ಮಾಡಿರುವವರನ್ನು ನೀವು ನಂಬುತ್ತೀರಾ?
ಅದನ್ನು ಮಾಡಿರುವ ದೇವನಿಗೆ ಒಬ್ಬ ಮನುಷ್ಯನನ್ನು ಸೃಷ್ಟಿಮಾಡಲು ಸಾಧ್ಯವಿಲ್ಲವೆ? ಆದಮ್ (ಅ.ಸ) ರವರ ಸೃಷ್ಟಿಯನ್ನೆ ನಂಬುವ ನೀವು ಯೇಸುವಿನ ಸೃಷ್ಟಿಯನ್ನು ನಂಬುವುದಿಲ್ಲವೆ? ಎಂದು ದೇವನು ಚಿಂತಿಸಲು ಹೇಳುತ್ತಾನೆ.
ಯೇಸು (ಅ.ಸ.) ರವರಿಗೆ ಮುಂದೆ ಬರಲಿರುವ ಮುಹಮ್ಮದ್ (ಸ್) ರವರ ಬಗ್ಗೆ ಯೋಹಾನಾ: 16 ರಲ್ಲಿ ಬರುವ ವಚನಗಳನ್ನು ಕೂಡಾ ನಾವು ಗಮನಿಸಬಹುದು.
“ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ; ನಾನು ಹೋಗುವದು ನಿಮಗೆ ಹಿತಕರವಾಗಿದೆ; ಯಾಕಂದರೆ ನಾನು ಹೋಗದಿದ್ದರೆ ಆದರಿಕನು ನಿಮ್ಮ ಬಳಿಗೆ ಬರುವದಿಲ್ಲ; ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸುವೆನು.”
“ಆತನು ಬಂದಾಗ ಪಾಪ ನೀತಿ ನ್ಯಾಯ ತೀರ್ವಿಕೆಯ ವಿಷಯಗಳಲ್ಲಿಯೂ”
“ಅವರು ನನ್ನನ್ನು ನಂಬದೆ ಇರುವದರಿಂದ ಪಾಪದ ವಿಷಯವಾಗಿಯೂ”
“ನಾನು ನನ್ನ ತಂದೆಯ ಬಳಿಗೆ ಹೋಗುವದರಿಂದ ನೀವು ನನ್ನನ್ನು ಎಂದಿಗೂ ನೋಡದ ಕಾರಣ ನೀತಿಯ ವಿಷಯವಾಗಿಯೂ”
“ಇಹಲೋಕಾಧಿಪತಿಯು ನ್ಯಾಯತೀರ್ಪನ್ನು ಹೊಂದಿರುವದರಿಂದ ನ್ಯಾಯ ತೀರ್ವಿಕೆಯ ವಿಷಯವಾಗಿಯೂ ಲೋಕವನ್ನು ಗದರಿಸುವನು.”
“ನಾನು ನಿಮಗೆ ಹೇಳಬೇಕಾದ ವಿಷಯಗಳು ಇನ್ನೂ ಬಹಳ ಇವೆ; ಆದರೆ ನೀವು ಈಗ ಅವುಗಳನ್ನು ಹೊರಲಾರಿರಿ;”
“ಆದರೆ ಆತನು ಅಂದರೆ ಸತ್ಯದ ಆತ್ಮನು ಬಂದಾಗ ಆತನು ನಿಮ್ಮನ್ನು ಎಲ್ಲಾ ಸತ್ಯಕ್ಕೆ ನಡಿಸುವನು. ಆತನು ತನ್ನಷ್ಟಕ್ಕೆ ತಾನೇ ಮಾತನಾಡದೆ ತಾನು ಕೇಳಿದವುಗಳನ್ನೇ ಮಾತನಾಡುತ್ತಾನೆ; ಮುಂದೆ ಬರುವದಕ್ಕಿರುವ ವಿಷಯಗಳನ್ನು ಆತನು ನಿಮಗೆ ತೋರಿಸುವನು.”
“ಆತನು ನನ್ನನ್ನು ಮಹಿಮೆಪಡಿ ಸುವನು; ಆತನು ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ತಿಳಿಯಪಡಿಸುವನು.” (ಯೋಹಾನ 16: 07 ರಿಂದ 14 ವಚನಗಳು.)