ಪರಮ ದಯಾಮಯನು ಕರುಣಾನಿಧಿಯೂ ಅದ ದೇವನಾಮದಿಂದ.
ಬಕ್ರಿದ್
(ತ್ಯಾಗ ಬಲಿದಾನದ ಹಬ್ಬ)
ಮುಖ್ಯವಾದ ಶಬ್ದದಾರ್ಥಗಳು
ಅಲ್ಲಾಹ;- ಅರಬಿ ಭಾಶಾಪದವಾದ ಅಲ್ಲಾಹ ಪದವು ಪ್ರಪಂಚದ ಏಕೈಕ ಸೃಷ್ಠಿಕರ್ತನೆಂಬ ಅರ್ಥ ಕೊಡುತ್ತದೆ. ಇದರ ಮುಖ್ಯ ಹಾಗೂ ಸರಳ ಅರ್ಥವೆಂದರೆ ‘ಆರಾಧನೆಗೆ ಅರ್ಹನಾಗಿರುವ ಏಕೈಕ ದೇವ’ ಅವನೇ ಆಗಿದ್ದಾನೆ ಎಂಬುದಾಗಿದೆ. ವಿಶಿಷ್ಟವಾದ ಈ ಪದಕ್ಕೆ ಸರಿಸಮವಾದ ಪದ ಮತ್ತೊಂದಿರದೆ, ಲಿಂಗ ಹಾಗೂ ಬಹುವಚನವನ್ನು ಸೂಚಿಸದಿರುವಂತಹಾ ಪದವಾಗಿದೆ. ಸೃಷ್ಠಿಕರ್ತನು ತನ್ನ ಕುರಿತು ಖುರ್ಆನಿನಲ್ಲಿ ಹೇಳಿಕೊಳ್ಳುವನು.
“ಹೇಳಿರಿ ಅವನು ಅಲ್ಲಾಹನು ಏಕೈಕನು, ಅಲ್ಲಾಹನು ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು, ಅವನು ಯಾರಿಗೂ ಜನ್ಮ ನೀಡಿಲ್ಲ, ಮತ್ತು ಅವನು ಯಾರಿಂದಲೂ ಜನ್ಮ ಪಡೆದಿಲ್ಲ. ಮತ್ತು ಅವನಿಗೆ ಸರಿಸಾಟಿ ಯಾರೂ ಇಲ್ಲ”, 112:1-4..
ಇಸ್ಲಾಮ್
ಇಸ್ಲಾಮ್ ಎಂದರೆ ಶಾಂತಿ ಎಂದರ್ಥ, ಇನ್ನೊಂದು ಅರ್ಥದಲ್ಲಿ ವಿಧೆಯತೆ ಎಂಬುದಾಗಿದೆ, ದೈವಾಜ್ಞೆಯನ್ನು ವಿಧೆಯತೆಯಿಂದ ಅನುಸರಿಸುವುದು. ಅದು ನಮ್ಮ ಇಹ ಮತ್ತು ಪರಲೋಕದ ಪ್ರಗತಿಗೆಂದೇ ಆಗಿದೆ.
ಮುಸ್ಲಿಮ್
ಮುಸ್ಲಿಮ್ ಎಂದರೆ ದೇವನಿಗೆ ವಿಧೇಯನಾಗಿ ನಡೆಯುವವನೇ ಹೊರತು ವಂಶ-ಕುಲ, ಬಣ್ಣ-ಭಾಶೆ, ದೇಶ-ಪ್ರದೇಶದಿಂದ ಅವನನ್ನು ಗುರುತಿಸಿ ಕೊಳ್ಳಲಾಗುವುದಿಲ್ಲ, ಈಹೆಸರು ಅನುಸರಣೆಯಿಂದ ಬರುವುದೇ ಹೊರತು ಮುಸ್ಲಿಮ್ ತಂದೆ-ತಯಿಯರಿಗೆ ಜನಿಸುವುದರಿಂದಲ್ಲ. ಪ್ರತ್ಯೆಕ ಉಡುಪಿನ ಶೈಲಿ ಅಥವ ಉರ್ದು ಅರಬಿ ಹೆಸರುಗಳನ್ನು ಕಂಡು ಸಾಮಾನ್ಯರೂ ಸಹ ಗೊಂಲಕ್ಕಿಡಾಗುತ್ತಿದ್ದಾರೆ.
ಖುರ್ಆನ್
ಖುರ್ಆನ್ ಅಂತಿಮ ದೈವ ಗ್ರಂಥವಾಗಿದ್ದು ಅದು ಅಂತಿಮ ಸಂದೇಶವಾಹಕರಾದ ಮುಹಮ್ಮದ್{ಸ}ರವರ ಮೇಲೆ ಅವತೀರ್ಣಗೊಂಡಿದೆ. ಇದು ಕಿಂಚಿತ್ತೂ ಬದಲಾಗದೆ ದೇವನಿಂದ ನೇರವಾಗಿ ಬಂದಿರುವ ಶಬ್ದಭಂಡಾರವಾಗಿದೆ. ಇದು ಅಂತಿಮ ದಿನದಂದು ಬರುವ ಸತ್ಯ ಹಾಗೂ ಮಿತ್ಯಗಳ ನಡುವೆ ವ್ಯತ್ಯಾಸವನ್ನು ತಿಳಿಸುವ ಜೀವನದ ಶಿಷ್ಟಾಚಾರಗಳನ್ನು ತಿಳಿಸುವ ಮಾನದಂಡವಾಗಿದೆ.
ಮುಹಮ್ಮದ್(ಸ)
ಅಲ್ಲಾಹನು ತನ್ನ ಸಂದೇಶವನ್ನು ಮಾನವ ಜನಾಂಗಕ್ಕೆ ತಲುಪಿಸಲು ಮಾನವ ಜನಾಂಗದಲ್ಲೆ ಚೇತನವುಳ್ಳ ಅಥವ ಸತ್ಪುರುಷರನ್ನು ಸಂದೇಶವಾಹಕರನ್ನಾಗಿ ನೇಮಿಸಿದನು, ಅವರು ತಮ್ಮ ಜನಾಂಗಗಳಿಗೆ ದೇವನಿಂದ ನೀಡಲ್ಪಟ್ಟ ಉಪದೇಶಗಳನ್ನು ಮಾತ್ರ ಉಪದೇಶಿಸುತ್ತಿದ್ದರು. ಸಂದೇಶವಾಹಕರ ಸಾಲಿನಲ್ಲಿ ಅಂತಿವಾಗಿ ಬರುವ ಸಂದೇಶವಾಹಕರೇ ಮುಹಮ್ಮದ್{ಸ} ಇವರ ಮುಂಚಿನ ಸಂದೇಶವಾಹಕರು ನಿಗದಿತ ಜನಾಂಗಕ್ಕಾಗಿ ಮಾತ್ರ ಬಂದಿದ್ದರು ಆದರೆ ಮುಹಮ್ಮದ್{ಸ}ರವರು ಇಡೀ ಪ್ರಪಂಚದ ಸರ್ವ ಮನವ ಕುಲಕ್ಕಾಗಿ ಬಂದಿದ್ದಾರೆ.
ಬಕ್ರಿದ್(ತ್ಯಾಗ ಬಲಿದಾನದ ಹಬ್ಬ)
ತ್ಯಾಗ ಬಲಿದಾನದ ಹಬ್ಬ ಎಂದೇ ಪ್ರಖ್ಯಾತವಾಗಿರುವುದು ಬಕ್ರೀದ್, ಈ ಹಬ್ಬವನ್ನು ಸುಮಾರು 5000 ವರ್ಷಗಳ ಹಿಂದೆ ನೆಲೆಸಿದ್ದ ಒಬ್ಬ ಅತ್ತ್ಯುತ್ತಮ ವ್ಯಕ್ತಿ ಇಬ್ರಾಹೀಮ್(ಅ ಸ) ರವರ ಮಹಾತ್ಯಾಗ, ಬಲಿದಾನದ ಸ್ಮರಣಾರ್ಥಕವಾಗಿ ಆಚರಿಸಲಾಗುವುದು. ಸಂದೇಶವಾಹಕ ಇಬ್ರಾಹೀಮ್ರವರು ಒಬ್ಬ ಬುದ್ಧಿವಂತ, ನೇರನುಡಿಯ ಮತ್ತು ವಿಚಾರವಂತಿಕೆಯುಳ್ಳ ವ್ಯಕಿಯಾಗಿದ್ದರು. ಅವರು ತಾವು ಜನಿಸಿದ ಸಮುದಾಯದಲ್ಲಿರುವ ಮೂಢನಂಬಿಕೆಗಳನ್ನು ಸಹಿಸುತ್ತಿರಲಿಲ್ಲ, ಸ್ವತಃ ಅವರ ತಂದೆಯೇ ಪ್ರಧಾನ ಅರ್ಚಕರಾಗಿದ್ದು ವಿಗ್ರಹಗಳ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿದ್ದರೆಂದು ಖುರ್ಆನ್ನಲ್ಲಿ ಹೇಳಲಾಗುತ್ತದೆ.
“ಇವರಿಗೆ ಇಬ್ರಾಹೀಮ್ರವರ ವೃತ್ತಾಂತವನ್ನು ತಿಳಿಸಿರಿ. ಅವರು ತಮ್ಮ ತಂದೆ ಮತ್ತು ಜನಾಂಗದೊಡನೆ, “ನೀವು ಇದೆಂದತಹಾ ವಸ್ತುಗಳನ್ನು ಪೂಜಿಸುತ್ತಿರುವಿರಿ?” ಎಂದು ಕೇಳಿದಾಗ ಅವರು “ಇವು ಕೆಲವು ವಿಗ್ರಹಗಳು, ನಾವು ಇವುಗಳನ್ನು ಪೂಜಿಸುತ್ತೇವೆ. ಮತ್ತು ಇವುಗಳ ಸೇವೆಯಲ್ಲಿಯೇ ನಿರತರಾಗಿರುತ್ತೇವೆ ಎಂದರು. ಆಗ ಇವರು ಕೇಳಿದರು, “ನೀವು ಇವುಗಳನ್ನು ಕರೆದು ಪ್ರಾರ್ಥಿಸಿದಾಗ ಇವು ಕೇಳುತ್ತವೆಯೊ ? ಎಂದು ಕೇಳಿದರು. ಅದಕ್ಕೆ ಅವರು “ಇಲ್ಲಾದರೆ ನಮ್ಮ ಪೂರ್ವಿಕರು ಹೀಗೆಯೇ ಮಾಡುತ್ತಿರುವುದನ್ನು ನಾವು ಕಂಡಿದ್ದೇವೆ”ಎಂದರು (ಖುರ್ಆನ್ 26:69-75)
ಸಂದೇಶವಾಹಕ ಇಬ್ರಾಹಿಮ್ ರವರಿಗೆ ಅವರ ಉತ್ತರಗಳನ್ನು ಸ್ವೀಕರಿಸಲಾಗಲಿಲ್ಲ, ಅವರು ಬುದ್ಧಿವಂತಿಕೆಯಿಂದ ಅವರ ಸರಿಯಾದ ಉತ್ತರಗಳನ್ನು ಕೇಳಿಕೊಂಡರು. ಜನರಿಗೆ ನೈಜದೇವರನ್ನು ಅರ್ಥೈಸಲು ಒಂದು ಉಪಾಯವನ್ನು ಹೂಡಿದರು.
‘ಒಮ್ಮೆ ರಾತ್ರಿ ಕತ್ತಲು ಆವರಿಸಿದಾಗ ಅವರೊಂದು ನಕ್ಷತ್ರವನ್ನು ಕಂಡರು (ಜನಾಂಗದವರೊಂದಿಗೆ) “ಇದು ನನ್ನ ಪ್ರಭು” ಎಂದರು ಆದರೆ ಅದು ಅಸ್ತಮಿಸಿದಾಗ “ನಾನು ಅಸ್ತಮಿಸುವವರಿಗೆ ಮಾರು ಹೋಗುವುದಿಲ್ಲ” ಎಂದರು. ಆನಂತರ ಪ್ರಕಾಶಿಸಿತ್ತಿರುವ ಚಂದ್ರನ್ನು ಕಂಡಾಗ “ಇದು ನನ್ನ ಪ್ರಭು” ಎಂದರು. ಆದರೆ ಅದೂ ಮುಳುಗಿದಾಗ “ನನ್ನ ಪ್ರಭು ನನಗೆ ಮಾರ್ಗದರ್ಶನ ನೀಡದಿರುತ್ತಿದ್ದರೆ ನಾನೂ ಪಥ ಭ್ರಷ್ಟರಲ್ಲಾಗುತ್ತಿದ್ದೆ” ಎಂದರು. ಆನಂತರ ಪ್ರಕಾಶಮಾನವಾದ ಸೂರ್ಯನನ್ನು ಕಂಡು “ಇದೇ ನನ್ನ ಪ್ರಭು, ಇದು ಎಲ್ಲಕ್ಕಿಂತಲೂ ದೊಡ್ಡದಾಗಿದೆ” ಎಂದರು ಆದರೆ ಅದೂ ಅಸ್ತಮಿಸಿದಾಗ ಇಬ್ರಾಹೀಮರು ಉದ್ಗರಿಸಿದರು : “ ಓ ನನ್ನ ಜನಾಂಗ ಭಾಂದವರೇ, ನೀವು ದೇವನ ಸಹಭಾಗಿಯಾಗಿಸುವ ಎಲ್ಲವುಗಳಿಂದ ನಾನು ವಿರಕ್ತನು. (ಖುರ್ಆನ್ 6: 76-78)
ಅಲ್ಲಾಹನು ಮುಸ್ಲಿಮರ ಹಾಗೂ ಅರೇಬಿಯಾದವರ ಖಾಸಗೀ ಕುಲದೇವರು ಎಂಬುದು ತಪ್ಪು ಕಲ್ಪನೆಯಾಗಿದೆ. ಯಾರು ಈ ಲೋಕವನ್ನು ಸೃಷ್ಠಿಮಾಡಿ ಪರಿಪಾಲಿಸುತ್ತಿರುವನೋ ಅವನಿಗೆ ಅರಬಿ ಭಾಷೆಯಲ್ಲಿ ‘ಒಬ್ಬನೇ ದೇವ’ (ಅಲ್ಲಾಹ) ಎಂದು ಕರೆಯಲಾಗುತ್ತದೆ, ಇದೇ ಇದರ ನೈಜ ಅರ್ಥವಾಗಿದೆ.
ಇಬ್ರಾಹೀಮ್(ಅ)ರು ವಿಗ್ರಹ ಹಾಗೂ ಮೃತ ಮಹಾತ್ಮರ ಆರಾಧಕರಿಗೆ ಮತ್ತು ಮಿಥ್ಯ ದೈವಾರಾಧಕರಿಗೆ ತಾವು ಅವರೊಂದಿಗಿಲ್ಲವೆಂದು ಬಹಿರಂಗವಾಗಿ ಘೋಷಿಸಿದರು.
“ನಾನು ಏಕ ನಿಷ್ಠೆಯಿಂದ ನನ್ನ ಮುಖವನ್ನು ಭೂಮಿ-ಆಕಾಶಗಳನ್ನು ಸೃಷ್ಠಿಸಿದವನ ಕಡೆಗೆ ತಿರುಗಿಸಿದೆನು. ನಾನು ಸರ್ವಥಾ ಅಲ್ಲಾಹನೊಂದಿಗೆ ಸಹಭಾಗಿಗಳನ್ನಾಗಿ ಮಾಡುವವರಲ್ಲಿ ಸೇರಿದವನಲ್ಲ.”(ಖುರ್ಆನ್ 6:79)
ಇಬ್ರಾಹೀಮ್(ಅ)ರು ಕೇಳಿದರು “ನೀವು ಮತ್ತು ನಿಮ್ಮ ಪೂರ್ವಿಕರು ಪೂಜಿಸುತ್ತಾ ಬಂದಿರುವ ವಸ್ತುಗಳನ್ನು ನೀವೆಂದಾದರು(ಕಣ್ತೆರೆದು)ನೋಡಿದ್ದುಂಟೆ? ಇವೆಲ್ಲವೂ ನನ್ನ ಶತ್ರುಗಳು. ಸರ್ವಲೋಕಗಳ ಪಾಲಕ ಪ್ರಭುವೊಬ್ಬನ ಹೊರತು ಅವನು ನನ್ನನ್ನು ಸೃಷ್ಠಿಸಿದನು ಮತ್ತು ಅವನೇ ನನಗೆ ಮಾರ್ಗದರ್ಶನ ನೀಡುತ್ತಾನೆ. ಅವನು ನನಗೆ ಉಣಿಸುತ್ತಾನೆ ಮತ್ತು ಕುಡಿಸುತ್ತಾನೆ, ನಾನು ಖಾಯಿಲೆ ಬಿದ್ದಾಗ ಅವನೇ ನನ್ನನ್ನು ಗುಣಪಡಿಸುತ್ತಾನೆ”.(ಖುರ್ಆನ್26:76-81)
ಇಬ್ರಾಹೀಮ್(ಅ)ರು ಸರ್ವಶಕ್ತ ಪ್ರಭುವಿನಿಂದ ಆತನ ಸಂದೇಶವಾಹಕರಾಗಿ ಆಯ್ಕೆಗೊಂಡಿದ್ದರು. ಪ್ರಭುವಿನ ಎಲ್ಲಾ ಸಂದೇಶವಾಹಕರಂತೆ ಅವರೂ ಕೂಡಾ ಧರ್ಮದ ಪುನರ್ ಸ್ಥಾಪನೆಗಾಗಿ ತುಂಬಾ ಪರಿಶ್ರಮ ಪಟ್ಟರು. ಅರ್ಥಾತ್ ಇಡೀ ವಿಶ್ವದ ಸೃಷ್ಠಿಕರ್ತ, ಸಂರಕ್ಷಕ ಪ್ರಭುವಿನ ಆರಾಧನೆಯೆಡೆಗೆ ಜನರನ್ನು ಆಹ್ವಾನಿಸುತ್ತಿದ್ದರು. ಆತನ ಹೊರತು ಬೇರೆ ಏನನ್ನಾದರೂ ಆರಾಧಿಸುವುದೇ ಅತೀದೊಡ್ಡ ಅಧರ್ಮವಾಗಿದ್ದು, ಸರ್ವಶಕ್ತ ಪ್ರಭುವಿಗೆ ದೃಷ್ಟಿಯಲ್ಲಿ ಆತನಿಗೆ ಸಹಭಾಗಿಗಳನ್ನು ಸೃಷ್ಟಿಸುವುದು ಅಥವಾ ಅವನ ಗುಣಲಕ್ಷಣಗಳಲ್ಲಿ ಇತರನ್ನು ಸಹಭಾಗಿಯಾಗಿಸುವುದು ಅಥವಾ ಆತನ ಸೃಷ್ಠಿಗಳಲ್ಲಿ ಏನನ್ನಾದರೂ ಆರಾಧಿಸುವುದು ಮಹಾಪಾಪವಾಗಿದೆ.
“ನಿಜವಾಗಿಯೂ ಅಲ್ಲಾಹನೊಂದಿಗೆ ಸಹಭಾಗಿಯನ್ನಾಗಿ ಮಾಡುವುದು ಮಹಾಪಾಪವಾಗಿದೆ”.(ಖುರ್ಆನ್31:13)
ಸೃಷ್ಠಿಕರ್ತನೊಂದಿಗೆ ಸಹಭಾಗಿಯನ್ನಾಗಿ ಮಾಡುವುದು ಒಂದು ಕ್ಷಮಿಸಲಾರದಂತಹ ಪಾಪವೆಂದೂ ಮತ್ತು ಇದನ್ನು ಮಾಡಿರುವ ಪಾಪಿಗಳು ಶಾಶ್ವತವಾಗಿ ನರಕಾಗ್ನಿಯಲ್ಲಿರುವವರೆಂದು ಖುರ್ಆನ್ ಎಚ್ಚರಿಸುತ್ತದೆ. ಈ ಪಾಪವು ಸಮಾಜವನ್ನು ಅವರು ಆರಾಧಿಸುತ್ತಿರುವ ಆರಾಧ್ಯ ದೈವನ ಆಧಾರದ ಮೇರೆಗೆ ಪರಸ್ಪರ ವಿಭಜಿಸುತ್ತದೆ. ಈ ಪಾಪವೇ ಜಾತಿ ಪದ್ಧತಿ ಅಸ್ಪ್ರಶ್ಯತೆ, ಅಸಮಾನತೆ , ಸ್ವಾರ್ಥಸಾಧನೆ, ಪುರೋಹಿ ಸಮಾಜದ ಮತ್ತು ಇತರ ಸಾಮಾಜಿಕ ಕೆಡುಕುಗಳಿಗೆ ಮೂಲ ಕಾರಣ. ಸ್ವತಃ ತನ್ನ ತಂದೆ ಹಾಗೂ ಸಮಾಜದ ವಿರುದ್ಧವಾಗಿದ್ದರೂ ಅವರು ವೈಯಕ್ತಿಕವಾಗಿ ಸಮಾಜದ ಅಂಧವಿಶ್ವಾಸದ ಧೊರಣೆಯವಿರುದ್ಧ ಹೋರಾಡಿದರು. ಮತ್ತು ಸೃಷ್ಠಿಕರ್ತನ ಆರಾಧನೆಯೆಡೆಗೆ ಜನರನ್ನು ಆಹ್ವಾನಿಸಿದರು, ಈ ದೆಶೆಯಲ್ಲಿ ಅವರು ಅನೇಕ ಪರಿಕ್ಷೆ ಮತ್ತು ತೊಂದರೆಗಳನ್ನು ಎದುರಿಸಬೇಕಾಯಿತು. ಅವರ ತಂದೆ ಅವರನ್ನು ಮನೆಯಿಂದ ಹೊರಗಟ್ಟಿದರು. ಇಬ್ರಾಹೀಮ್(ಅ)ರವರು ವಿಗ್ರಹ ಆರಾಧನೆಯ ವಿರುದ್ಧ ದೃಢವಾಗಿ ನಿಂತಿದ್ದರಿಂದ ಅವರ ತಂದೆ ಮತ್ತು ಜನರಿಂದ ಅತಿ ದೊಡ್ಡ ಅಗ್ನಿಯಗಾರದಲ್ಲಿ ತಳ್ಳುವ ಮೂಲಕ ಶಿಕ್ಷಿಸಲ್ಪಟ್ಟರು. ಆದರೆ ಸರ್ವಸಮರ್ಥ ದೇವನು ತನ್ನ ಅದ್ಭುತಗಳ ಮೂಲಕ ಅವರನ್ನು ರಕ್ಷಿಸಿದನು ಮತ್ತು ದೇವನು ಆಜ್ಞೆಯಿತ್ತನು.
“ಓ ಅಗ್ನಿಯೇ ತಣ್ಣಗಾಗಿಬಿಡು, ಮತ್ತು ಇಬ್ರಾಹೀಮ್(ಅ)ರ ಪಾಲಿಗೆ ಸುರಕ್ಷೆಯಾಗು. (ಖುರ್ಆನ್ 21:69)
ದೈವತ್ವವು ತನ್ನದೇ (ತಾನೇ ದೇವರು) ಎಂದು ವಾದಿಸುತ್ತಿದ್ದ ಅಲ್ಲಿನ ನಾಯಕ ನಮ್ರೂದ್ ಇಬ್ರಾಹೀಮ್ರಿಂದ ತನ್ನ ಅಧಿಕಾರಕ್ಕೆ ಕುಂದುಟಾಗಬಹುದೆಂದು ಗಾಬರಿಗೊಂಡು ಅವರನ್ನು ಬರ ಹೇಳಿದನು. ಇದನ್ನು ಖುರ್ಆನ್ ಹೀಗೆ ಪ್ರಾಸ್ತಾಪಿಸುತ್ತದೆ.
“ನೀವೇನು ಇಬ್ರಾಹೀಮ್ರೊಂದಿಗೆ ಜಗಳ ಮಾಡಿದ ವ್ಯಕ್ತಿಯ ಕುರಿತು ಗಮನಿಸುವುದಿಲ್ಲವೇ? ಜಗಳವು ಇಬ್ರಾಹೀಮ್(ಅ)ರ ಪ್ರಭು ಯಾರು ಎಂಬುದರ ಕುರಿತು ಮತ್ತು ಅಲ್ಲಾಹನು ಆ ವ್ಯಕ್ತಿಗೆ ಅಧಿಕಾರವನ್ನು ಕೊಟ್ಟಿದ್ದುದರ ಆಧಾರದಲ್ಲಾಗಿತ್ತು. ಜೀವನ ಮತ್ತು ಮರಣ ಯಾರ ಅಂಕೆಯಲ್ಲಿದೆಯೋ ಅವನು ನನ್ನ ಪ್ರಭು ಎಂದು ಇಬ್ರಾಹೀಮ್ರು ಹೇಳಿದಾಗ ಅವನು ಜೀವನ ಮತ್ತು ಮರಣ ನನ್ನ ಅಧಿಕಾರದಲ್ಲೂ ಇದೆ ಎಂದನು. ಇಬ್ರಾಹೀಮ್ “ಸರಿ ಹಾಗಾದರೆ ಅಲ್ಲಾಹನು ಸೂರ್ಯನನ್ನು ಪೂರ್ವದಿಕ್ಕಿನಿಂದ ಮೂಡಿಸುತ್ತಾನೆ, ನೀನು ಅದನ್ನು ಪಶ್ಚಿಮ ದಿಕ್ಕಿನಿಂದ ಮೂಡಿಸು ಎಂದರು. ಇದನ್ನು ಕೇಳಿ ಆ ಸತ್ಯ ನಿಷೇಧಿ ದಿಗ್ಭ್ರಮೆಗೊಂಡನು. ಆದರೆ ಅಕ್ರಮಿಗಳಿಗೆ ಅಲ್ಲಾಹನು ಸನ್ಮಾರ್ಗವನ್ನು ತೋರುವುದಿಲ್ಲ.(ಖುರ್ಆನ್ 2:258)
ಈ ಎಲ್ಲಾ ಘಟನೆಗಳ ನಂತರವೂ, ಸೃಷ್ಠಿಕರ್ತನ ಆರಾಧನೆಯೆಡೆಗಿನ ಇಬ್ರಾಹೀಮ್(ಅ)ರ ಕರೆಗೆ ಸ್ಪಷ್ಟ ಪ್ರತಿಕ್ರಿಯೆ ಸಿಗಲಿಲ್ಲ. ಅವರು ತಮ್ಮ ಅನುಯಾಯಿಗಳೋಂದಿಗೆ ವಲಸೆ ಹೋಗಬೇಕಾಯಿತು. ನಂತರದ ದಿನಗಳಲ್ಲಿ ಇಬ್ರಾಹೀಮ್(ಅ) ಮತ್ತು ಅವರ ಪರಿವಾರದವರಿಗೆ ಸರ್ವ ಸಮರ್ಥ ಪ್ರಭುವಿನಿಂದ ಇನ್ನು ಹಲವಾರು ಪರಿಕ್ಷೆಗಳನ್ನು ಎದುರಿಸಬೇಕಾಯಿತು. ಏಕೆಂದರೆ ಆ ದೈವನು ತನ್ನ ಆಜ್ಞೆಯ ಆಜ್ಞಾಪಾಲನೆಯನ್ನು ಇಬ್ರಾಹೀಮ್(ಅ) ಎಷ್ಟರ ಮಟ್ಟಿಗೆ ಸಹನೆಯಿಂದ ನಿಬಾಯಿಸುವವರು ಎಂಬುದನ್ನು ಪರೀಕ್ಷಿಸ ಬಯಸಿದನು.
ಇಬ್ರಾಹೀಮ್(ಅ)ರಿಗೆ ತಮ್ಮ ಹೆಂಡತಿ ಹಾಜಿರಾ ಮತ್ತು ಎಳೆಯ ಮಗು ಇಸ್ಮಾಯೀಲ್ರನ್ನು ಮಕ್ಕಾದ ಬರಡು ಕಣಿವೆಯಲ್ಲಿ ಬಿಟ್ಟು ಹೋಗಲು ದೇವನ ಆಜ್ಞೆಯಾಯಿತು ಇಲ್ಲಿಯೇ ಇಂದಿನ ಕಾಬಾ ಭವನವಿದೆ. ಅವರಿಗೆ ಈ ಆದೇಶವಾದಾಗ ಮಕ್ಕಾ ಒಂದು ನಿರ್ಜನ ಪ್ರದೇಶವಾಗಿತ್ತಲ್ಲದೇ ನೀರೂ ಸಿಗದ ಬರಡು ಭೂಮಿಯಾಗಿತ್ತು. ಅವರ ತಾಳ್ಮೆಯ ಪರೀಕ್ಷೆಯ ನಂತರ ದೇವನು ಅವರಿಗೆ ಜಂಜಂ ಎನ್ನುವ ನೀರಿನ ಚಿಲುಮೆಯನ್ನು ನೀಡಿದನು. ಈ ಚಿಲುಮೆಯಿಂದ ಇಂದಿಗೂ ನೀರು ಹರಿಯುತ್ತಿದೆ. ನಂತರ ತಮ್ಮ ಮಗನನ್ನು ದೇವನಿಗೆ ಬಲಿ ಅರ್ಪಿಸಬೇಕೆಂಬ ಆಜ್ಞೆಯಾಯಿತು. ಇದರ ಕುರಿತು ದೇವನು ಖುರ್ಆನಿನಲ್ಲಿ ಹೇಳುತ್ತಾನೆ.
‘ಆ ಬಾಲಕನು ಅವರ ಜೊತೆ ದುಡಿಯುವ ಪ್ರಾಯಕ್ಕೆ ತಲುಪಿದಾಗ (ಒಂದುದಿನ) ಇಬ್ರಾಹೀಮರು ಅವನೊಡನೆ “ಮಗೂ ನಾನು (ಬಲಿಯರ್ಪಿಸಲಿಕ್ಕಾಗಿ)ನಿನ್ನ ಕೊರಳು ಕೊಯ್ಯುತ್ತಿರುವುದನ್ನು ಕನಸಿನಲ್ಲಿ ಕಂಡೆನು. ಈಗ ನಿನ್ನ ಅಭಿಪ್ರಾಯವೇನೆಂದು ಹೇಳು” ಎಂದರು. ಆಗ ಅವನು ಅಪ್ಪಾ ತಮಗೆ ಆಜ್ಞಾಪಿಸಲಾಗಿರುವುದನ್ನು ಮಾಡಿಬಿಡಿರಿ, ಅಲ್ಲಾಹನು ಇಚ್ಛಿಸಿದರೆ ತಾವು ನನ್ನನ್ನು ಸಹನೆಯುಳ್ಳವನಾಗಿ ಕಾಣುವಿರಿ” ಎಂದನು.
ಆಗ ನಾವು ಹೀಗೆ ಕೂಗಿ ಹೇಳಿದೆವು “ಇಬ್ರಾಹೀಮ್, ನೀವು ಸ್ವಪ್ನವನ್ನು ಸತ್ಯಗೊಳಿಸಿದಿರಿ. ನಾವು ಪುಣ್ಯಕಾರ್ಯವೆಸಗುವವರಿಗೆ ಹೀಗೆಯೇ ಸತ್ಫಲ ನೀಡುತ್ತೇವೆ”. (ಖುರ್ಆನ್ 37:102,105)
ಅವರು ಈ ಪರಿಕ್ಷೆಯಲ್ಲಿ ಯಶಸ್ವಿಯಾಗಿದ್ದರಿಂದ, ತಮ್ಮ ಮಗನ ಬದಲಾಗಿ ಒಂದು ಟಗರನ್ನು ಬಲಿಯರ್ಪಿಸಬೇಕಾಗಿ ದೇವನ ಆಜ್ಞೆಯಾಯಿತು, ಸ್ವತಃ ತಂದೆಯೇ ತನ್ನ ಮಗನನ್ನು ಬಲಿಯರ್ಪಿಸುವ ಈ ಮಹಾತ್ಯಾಗವನ್ನು ಜ್ಞಾಪಕದಲ್ಲಿಟ್ಟು ಕೊಂಡು ಆಚರಿಸುವ ಹಬ್ಬವೇ ಬಕ್ರೀದ್ ಅಥವ ತ್ಯಾಗ ಬಲಿದಾನಗಳ ಹಬ್ಬ.
ಈ ದಿನದ ಬಲಿದಾನದಲ್ಲಿ ಇಡೀ ಮಾನವ ಕುಲಕ್ಕೆ ಒಂದು ಉತ್ತಮ ನೀತಿ ಪಾಠವಿದೆ. ಭೂಮಿಯ ಮೇಲೆ ನಮ್ಮ ಈ ವರ್ತಮಾನ ಜೀವನವು ತಾತ್ಕಾಲಿಕವಾದುದೆಂದು ನಾವೆಲ್ಲರೂ ಅರಿತಿರುವೆವು, ಒಂದುದಿನ ಇಡೀ ಜಗತ್ತು ಸರ್ವಶಕ್ತ ದೇವನಿಂದ ನಶಿಸಲ್ಪಡುವುದು. ಈ ಭೂಮಿಯಲ್ಲಿ ವಾಸಿಸಿದಂತಹಾ ಎಲ್ಲ ಮಾನವರನ್ನು (ಆದಿಯಿಂದ ಅಂತ್ಯದವರೆಗೂ) ಅವನು ಪುನಃ ಎಬ್ಬಿಸುವನು. ನಂತರ ಅವರೆಲ್ಲರೂ ಭೂಮಿಯಲ್ಲಿ ಅವರು ಮಾಡಿದಂತಹಾ ಕರ್ಮಗಳ ವಿಚಾರಣೆಗಾಗಿ ಸರ್ವಶಕ್ತ ದೇವನ ಬಳಿ ತರಲ್ಪಡುವರು ಮತ್ತು ಪ್ರತಿಯೊಬ್ಬರಿಗೂ ಮಾಡಿರುವ ಒಳ್ಳೆಯ ಮತ್ತು ಕೆಟ್ಟ ಕರ್ಮಗಳನ್ನು ತೋರಿಸಿಕೊಡಲಾಗುವುದು. ಅವರು ಮಾಡುತ್ತಿದ್ದ ಕರ್ಮಗಳಿಗನುಸಾರವಾಗಿ ಅವರನ್ನು ಶಾಶ್ವತವಾಗಿ ಸುಖವನ್ನನುಭವಿಸಲು ಸ್ವರ್ಗಕ್ಕೆ ಕಳುಹಿಲಾಗುವುದು, ಇಲ್ಲವೇ ಶಾಶ್ವತವಾಗಿ ಶಿಕ್ಷೆಯನ್ನನುಭವಿಸಲು ನರಕಕ್ಕೆ ಕಳುಹಿಲಾಗುವುದು. ಆದ್ದರಿಂದ ಭೂಮಿಯ ಮೇಲೆ ಇರುವ ನಮ್ಮ ಜೀವನ ಭವಿಷ್ಯದ ಶಾಶ್ವತ ವಾಸಸ್ಥಾನವನ್ನು ನಿರ್ಧರಿಸುವ ಒಂದು ಪರಿಕ್ಷೆ, ಇದರಲ್ಲಿ ಪ್ರತಿಯೊಬ್ಬನನ್ನು ಭಿನ್ನವಾದ (ಬೇರೆ ಬೇರೆ) ಸ್ಥಿತಿಗಳಲ್ಲಿ ಪರೀಕ್ಷಿಸಲಗುವುದು. ಉದಾಹರಣೆಗೆ ಕೆಲವರು ಹುಟ್ಟುಕುರುಡರಾಗಿದ್ದಾರೆ, ಕೆಲವರು ಒಳ್ಳೆಯ ಸ್ಥಿತಿವಂತರಾಗಿದ್ದಾರೆ, ಕೆಲವರು ಕಡುಬಡವರಾಗಿದ್ದಾರೆ, ಇನ್ನೂ ಕೆಲವರು ಐಷಾರಾಮಿ ಜೀವನ ನಡೆಸುತ್ತಾರೆ, ನಮ್ಮ ಶರೀರ, ಸಂಪತ್ತು, ಆರೋಗ್ಯ, ಸಂಭಂದಿಕರು, ಮತ್ತು ಇತರ ಸ್ವತ್ತುಗಳನ್ನು ತಾತ್ಕಾಲಿಕವಾಗಿ ಒಂದು ನಿರ್ದಿಷ್ಟ ಅವಧಿಯವರೆಗೆ ನಮಗೆ ನೀಡಲಾಗಿದೆ. ನಾವು ಅದರ ನೈಜ ಒಡೆಯರಲ್ಲ, ಸರ್ವಶಕ್ತ ದೇವನೇ ನೈಜ ಒಡೆಯ ಮತ್ತು ಅವನು ಯಾವುದೇ ಕ್ಷಣದಲ್ಲಾದರೂ ಇದನ್ನೇಲ್ಲ ಕಿತ್ತುಕೊಳ್ಳುವ ಅಧಿಕಾರವುಳ್ಳವನು. ಈ ಸ್ವತ್ತುಗಳ ಮೇಲೆ ನಮಗೆ ಎಷ್ಟೇ ವ್ಯಾಮೋಹವಿದ್ದರೂ ಅದನ್ನು ಅವನು ಇಚ್ಚೆಪಟ್ಟಾಗ ಬಿಟ್ಟು ಕೊಡಲು ಸಿದ್ಧರಿರಬೇಕು. ನಿಶ್ಚಯವಾಗಿಯೂ ಈ ಸ್ವತ್ತುಗಳನ್ನು ಹಠಾತ್ತನೆ ಕಿತ್ತುಕೊಂಡು ನಮ್ಮನ್ನು ಪರೀಕ್ಷೆಗೆ ಒಳಪಡಿಸಬಹುದು. ಈ ಸಂದರ್ಭದಲ್ಲಿ ನಾವೆಲ್ಲರೂ ಒಂದುಗೂಡಿ ಬಕ್ರೀದ್ನ ನಿಜವಾದ ಸಂದೇಶ ಮತ್ತು ಆಚರಣೆಯನ್ನು ತಿಳಿದು ಕೊಳ್ಳಬೇಕಾಗಿದೆ. ಅದೇನೆಂದರೆ ನಮ್ಮ ಸಂಪೂರ್ಣ ಅಧೀನತೆ ತ್ಯಾಗ ಬಲಿದಾನ, ಸಹನಶೀಲತೆ , ವಿಧೇಯ ಎಲ್ಲವೂ ಸೃಷ್ಠಿಕರ್ತನಿಗಾಗಿದೆ.
“ನಾವು ನಿಮ್ಮನ್ನು ಭಯಾ ಶಂಕೆ, ಹಸಿವು, ಧನಹಾನಿ, ಜೀವಹಾನಿ ಮತ್ತು ಉತ್ಪನ್ನಗಳನ್ನು ನಾಶಕ್ಕೊಳಪಡಿಸಿ ಅವಶ್ಯವಾಗಿಯೂ ಪರೀಕ್ಷಿಸುವೆವು. ಇಂತಹಾ ಸನ್ನಿವೇಶಗಳಲ್ಲಿ ತಾಳ್ಮೆ ವಹಿಸಿದವರಿಗೆ ಸುವಾರ್ತೆ ನೀಡಿರಿ. ಅಂತಹವರ ಮೇಲೆ ವಿಪತ್ತೇನಾದರೂ ಎರಗಿದಾಗ ಅವರು “ನಿಶ್ಚಯವಾಗಿಯೂ ನಾವು ಅಲ್ಲಾಹನವರು ಮತ್ತು ಅಲ್ಲಾಹನೆಡೆಗೆ ಮರಳಲಿಕ್ಕಿದೆ” ಎನ್ನುವರು. ಅವರ ಮೇಲೆ ಅವರ ಪ್ರಭುವಿನ ಕಡೆಯಿಂದ ಮಹಾ ಅನುಗ್ರಹಗಳಿರುವುವು, ಅವನ ಕಾರುಣ್ಯವು ಅವರನ್ನು ಅಚ್ಚಾದಿಸುವುದು ಮತ್ತು ಇಂತಹವರೇ ಸನ್ಮಾರ್ಗ ಹೊಂದಿದವರಾಗಿರುತ್ತಾರೆ’.(ಖುರ್ಆನ್ 2:155-157)
ಸಂದೇಶವಾಹಕ ಇಬ್ರಾಹೀಮ್(ಅ)ರು ಹೆಚ್ಚಾಗಿ ಇಂತಹ ಪರೀಕ್ಷೆಗೊಳಪಟ್ಟಿದ್ದರು. ಇದನ್ನೆಲ್ಲಾ ತಿಳಿದು ನಮ್ಮನ್ನು ಅವರ ಸ್ಥಾನದಲ್ಲಿಟ್ಟು ಊಹಿಸಿದರೆ ನಮಗೆ ಸರ್ವಶಕ್ತ ದೇವನಿಂದ ಇಂತಹ ಆಜ್ಞೆ ಬಂದಿದ್ದರೆ ನಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು? ಅಥವಾ ನಿಮ್ಮ ಮಗುವನ್ನು ಯಾರಾದರು ಅಪಹರಿಸಿದರೆ ನಿಮ್ಮ ತಾಯಿಗೆ ಹಠಾತ್ತನೆ ಮರಣ ಸಂಭವಿಸಿದರೆ ನಿಮಗೆ ಸಹಿಸಲು ಕಷ್ಟವಾಗುತ್ತದೆ ಅಲ್ಲವೇ? ಆದರೆ ಇಲ್ಲಿ ಇಬ್ರಾಹೀಮ್(ಅ) ತಮ್ಮ ಸ್ವಂತ ಮಗನನ್ನೇ ತಮ್ಮ ಕೈಯಿಂದಲೇ ಬಲಿಯರ್ಪಿಸಲು ಮುಂದಾದರು. ಎಂತಹಾ ತ್ಯಾಗ, ಸೃಷ್ಟಿಕರ್ತನ ಪೂರ್ಣ ಅಜ್ಞಾ ಪಾಲನೆಗೆ ಎಂತಹ ಮಾದರಿಯಾದ (ಅನುಕರಣೀಯವಾದ) ಕಾರ್ಯ. ಸಾಮಾನ್ಯವಾಗಿ ಪ್ರೀತಿ, ಸಂಭಂಧ, ಮತ್ತು ಭಾವನೆಗಳು ಎಲ್ಲಾ ವಿಧದಲ್ಲೂ ಮನುಷ್ಯನ ಮೇಲೆ ಅಧಿಕಾರ ಹೊಂದಿರುತ್ತವೆ. ಆದರೆ ಸೃಷ್ಟಿಕರ್ತನಿಗೆ ವಿಧೇಯರಾಗಿರುವುದು ಎಲ್ಲಾ ಕಾರ್ಯಗಳಿಗಿಂತ ಮಿಗಿಲಾದದ್ದೆಂದು ಇಬ್ರಾಹೀಮ್(ಅ)ರು ತೋರಿಸಿದರು.
ಪ್ರತೀ ವರ್ಷ ಬಕ್ರೀದ್ ಸಂದರ್ಭದಲ್ಲಿ ನಾವು ಈ ಪಾಠವನ್ನು ನೆನಪಿಸಿಕೊಳ್ಳುತ್ತೇವೆ. ಸೃಷ್ಠಿ ಕರ್ತನು ಕೇಳಿದ ಒಂದು ಚಿಕ್ಕ ಬಲಿದಾನಕ್ಕೋಸ್ಕರ ನಾವು ನಮ್ಮ ಆರ್ಥಿಕ ಶಕ್ತ್ಯಾನುಸಾರ ಒಂದು ಪ್ರಾಣಿಯನ್ನು ಬಲಿ ಕೊಡುತ್ತೇವೆ. ಆ ಬಲಿಯ ಮಾಂಸವನ್ನು ಸಂಭಂದಿಕರು ಮತ್ತು ಸಮಾಜದ ಬಡಜನರ ನಡುವೆ ಹಂಚಲಾಗುತ್ತದೆ. ಇಲ್ಲಿ ಮತ್ತೇ ಸೃಷ್ಟಿಕರ್ತ ಮತ್ತು ಸಂರಕ್ಷಕನಿಗೆ ಬಲಿಯರ್ಪಿಸುವ ಪೂರ್ವ ಸಿದ್ಧತೆಯೂ ಪರೀಕ್ಷಿಸಲ್ಪಡುತ್ತದೆ. ಹೀಗೆ ಸೃಷ್ಟಿಕರ್ತ ಖುರ್ಆನ್ನಲ್ಲಿ ಹೇಳುತ್ತಾನೆ.
‘ಅವುಗಳ ಮಾಂಸವಾಗಲಿ, ರಕ್ತವಾಗಲಿ, ಅಲ್ಲಾಹನಿಗೆ ತಲುಪುವುದಿಲ್ಲ. ಆದರೆ ಅವನಿಗೆ ಧರ್ಮನಿಷ್ಠೆ ತಲುಪುತ್ತದೆ. (ಖುರ್ಆನ್ 2:37)
ಕೆಲವು ಸಂದೇಹಗಳು ಮತ್ತು ಸ್ಪಷ್ಟೀಕರಣ
1 ) ಬಲಿದಾನ ಎಲ್ಲೆಡೆ ಪ್ರತೀವರ್ಷ ಏಕೆ ಪುನರಾವರ್ತಿಸಲ್ಪಡುತ್ತದೆ? ಒಂದು ಜೀವವನ್ನು ಬಲಿಕೊಡುವುದು ಪಾಪವಲ್ಲವೇ?
ಉ: ಇಸ್ಲಾಮ್ ಪದದ ಅರ್ಥವು ಸೃಷ್ಟಿಕರ್ತನಿಗೆ ವಿಧೇಯನಾಗಿರುವುದು. ಮತ್ತು ಮುಸ್ಲಿಮ್ ಪದದ ಅರ್ಥವು ಒಬ್ಬನು ಮನಃಸ್ಪೂರ್ತಿಯಾಗಿ ದೇವನಿಗೆ ವಿಧೇಯಕನಾಗುವುದು. ನಮ್ಮ ಈ ಜೀವನವು ಒಂದು ಪರೀಕ್ಷೆಯಾಗಿದ್ದು ಇದರಲ್ಲಿ ಮನುಷ್ಯನ ವಿಧೇಯತೆಯನ್ನು ಪರೀಕ್ಷಿಸಲ್ಪಡುತ್ತದೆ. ಪುನರುತ್ಥಾನ ದಿನದಂದು ಇದರಲ್ಲಿ ತೇರ್ಗಡೆಯಾದವರು ಸ್ವರ್ಗ ಪ್ರವೇಶಿಸುವರು ಮತ್ತು ವಿಫಲರಾದವರು ಶಾಶ್ವತವಾಗಿ ನರಕಕ್ಕೆ ತಳ್ಳಲ್ಪಡುವರು. ಆದ್ದರಿಂದ ನಾವು ಮೋಕ್ಷ(ಮುಕ್ತಿ)ಪಡೆಯಲು ಇಚ್ಚಿಸುವವರಾದರೆ ನಮಗೆ ನಮ್ಮ ಸೃಷ್ಟಿಕರ್ತನ ಆಜ್ಞೆಗಳನ್ನು ಈ ಜೀವನದಲ್ಲಿ ಚಾಚೂ ತಪ್ಪದೆ ಪಾಲಿಸಬೇಕಾಗಿದೆ, ನಮ್ಮ ಪ್ರಭು ಆಜ್ಞಾಪಿಸಿದ್ದನ್ನು ಮಾಡಬೇಕು ಮತ್ತು ಅವನು ಏನೆಲ್ಲಾ ನಿಷಿದ್ಧಗೊಳಿಸಿದ್ದಾನೆಯೋ ಅದರಿಂದ ದೂರವಿರಬೇಕು.
ಪ್ರಾಣಿಯ ಬಲಿದಾನ ನೀಡಲು ಸೃಷ್ಟಿಕರ್ತನ ಆಜ್ಞೆಯೇ ಮುಖ್ಯ ಕಾರಣ. ಇಲ್ಲಿ ಇದನ್ನು ಮಾಡುವುದು ಒಂದು ಪುಣ್ಯವಾಗಿದೆ, ಮತ್ತು ಮಾಡದಿದ್ದರೆ ಒಂದು ಪಾಪವನ್ನು ಮಾಡಿದಂತಾಗುತ್ತದೆ. ಮನುಷ್ಯನ ಧರ್ಮನಿಷ್ಟೆಯನ್ನು ಪರೀಕ್ಷಿಸುವುದೇ ಬಲಿದಾನ ನೀಡುವುದರ ಹಿಂದಿನ ಉದ್ದೇಶವಾಗಿದೆ. ಇದನ್ನು ಈಗಾಗಲೇ ಖುರ್ಆನ್ ಸೂಕ್ತದಲ್ಲಿ (22:37) ಉಲ್ಲೇಖಿಸಲಾಗಿದೆ. ಈ ಕಾರ್ಯವು ನಮ್ಮಲ್ಲಿರುವ ತ್ಯಾಗ ಮನೋಭಾವವನ್ನು ವರ್ಧಿಸುತ್ತದೆ. ಮತ್ತು ಜೀವನದಲ್ಲಿ ವ್ಯಾಪಾರದಲ್ಲಿ ಹಠಾತ್ತನೆ ಸಂಭವಿಸುವ ಹಾನಿಗಳನ್ನು ಸಹಿಸಲು ಸಿದ್ಧರನ್ನಾಗಿಸುತ್ತದೆ. ಪ್ರಾಣಿಗಳನ್ನು ಬಲಿನೀಡುವುದು ಹೊಸ ರೂಢಿಯೇನಲ್ಲ, ಆದರೆ ಇದು ಸೃಷ್ಟಿಕರ್ತನು ಸಂದೇಶವಾಹಕ ಮುಹಮ್ಮದ್{ಸ}ರಿಗಿಂತ ಹಿಂದಿನ ಸಂದೇಶವಾಹಕರ ಮತ್ತು ಗ್ರಂಥಗಳ ಮೂಲಕ ನೀಡಿದ ಆಜ್ಞೆಯಾಗಿದೆಯೆಂದು ಹೇಳಲಾಗುತ್ತದೆ.
ಅ) “ನಾವು ಪ್ರತಿಯೊಂದು ಸಮುದಾಯಕ್ಕೆ ಬಲಿದಾನದ ಒಂದು ಕಾಯಿದೆಯನ್ನು ನಿಶ್ಚಯಿಸಿ ಕೊಟ್ಟಿದ್ದೇವೆ. ಇದು(ಆ ಸಮುದಾಯದ) ಜನರು ತಮಗೆ ಅಲ್ಲಾಹನು ದಯಪಾಲಿಸಿರುವ ಪ್ರಾಣಿಗಳ ಮೇಲೆ ಅಲ್ಲಾಹನ ನಾಮವನ್ನು ಉಚ್ಚರಿಸಲೆಂದು (ಈ ವಿವಿಧ ಕ್ರಮಗಳಲ್ಲಿರುವ ಉದ್ದೇಶವು ಒಂದೇ) ನಿಮ್ಮ ದೇವನಂತೂ ಏಕ ಮಾತ್ರ ದೇವನು ಆದುದರಿಂದ ನೀವು ಅವನ ಆಜ್ಞಾಪಾಲಕರಾಗಿಯೇ ಇರಿ. ಪೈಗಂಬರರೇ, ವಿನಯಶೀಲರಿಗೆ ಶುಭವಾರ್ತೆ ನೀಡಿರಿ” (ಕುರ್ಆನ್ 22:34)
ಆ) ಈ ಹೇಳಿಕೆಯಂತೆ ಬಲಿ ತೆಗೆದುಕೊಳ್ಳುವುದು ಪಾಪವಲ್ಲವೇ?
ಈ ಅಂಶಗಳಿಂದ ನಿಮ್ಮ ಸಂದೇಹಗಳಿಗೆ ಸ್ಪಷ್ಟಿಕರಣ ಸಿಗಬಹುದು. ಯಾವುದು ಪಾಪಕಾರ್ಯವಾಗಿದೆ? ಯಾವುದು ಪಾಪ ಕಾರ್ಯವಲ್ಲ ? ಮನುಷ್ಯರು ಅಥವಾ ಮಾನವನ ಯಾವುದಾದರೊಂದು ಗುಂಪು, ಸರಿ ತಪ್ಪುಗಳನ್ನು ತಮ್ಮಷ್ಟಕ್ಕೆ ತಾವೇ ನಿರ್ಧರಿಸಲು ಸಾಧ್ಯವಿಲ್ಲ.
2 ) ಪ್ರಸಕ್ತವಾಗಿರುವ ತಾತ್ಕಾಲಿಕ ಸೀಮಿತ ಜೀವನದಲ್ಲಿ ನಾವು ಜೀವಿಸುತ್ತಿದ್ದೇವೆ. ಈ ಜೀವನವು ನಮ್ಮ ಸೃಷ್ಠಿಕರ್ತನ ಕಡೆಯಿಂದ ಒಂದುದಿನ ಕೊನೆಗೊಳ್ಳಲಿದೆ.
ಈ ನಡುವೆ ನಮ್ಮೆಲ್ಲರಲ್ಲಿ ಬಾವೊದ್ವೆಗಳು, ಭಾವನೆಗಳು, ಬಯಕೆಗಳು, ಆಸೆ-ಆಕಾಂಕ್ಷೆಗಳು, ನಿರೀಕ್ಷೆಗಳು, ಹಸಿವು, ದುಖಃ-ಸಂತೋಷ , ನ್ಯಾಯ-ಅನ್ಯಾಯ, ಸರಿ-ತಪ್ಪು, ಮುಂತಾದವುಗಳೆಲ್ಲವನ್ನು ನಾವು ನಮ್ಮ ಜೀವನಾವಧಿಯಲ್ಲಿ ಅನಭವಿಸುತ್ತಿದ್ದೇವೆ. ಅವನಿಚ್ಛೆಯಂತೆಯೇ ನಾವು ಅನುಸರಿಸಿದರೆ ಮರಣಾನಂತರ ಜೀವನದಲ್ಲಿ ನಮಗೆ ಉತ್ತಮ ಪ್ರತಿಫಲ ಸ್ವರ್ಗ ಸುಖದೊಂದಿಗೆ ಸಿಗಲಿದೆ. ಅನುಸರಿಸದೇ ಇದ್ದರೆ ನರಕಾಗ್ನಿಯಲ್ಲಿ ಶಿಕ್ಷೆಗೆ ಗುರಿಯಗಲಿದ್ದೇವೆ. ಹಾಗಾಗಿ ದೇವನಿಂದ ಬಂದ ಒಳಿತುಗಳನ್ನು ಒಪ್ಪಿಕೊಂಡು ಜೀವಿತಾವಧಿಯಲ್ಲೇ ಸರಿ-ತಪ್ಪುಗಳಾವುವು ಎಂಬುದನ್ನು ನಿರ್ಣಯಿಸಿಕೊಳ್ಳಬೇಕಾಗಿದೆ.
3 ) ಸರ್ವಶೃತ ದೇವನು ಕಾಲಕಾಲಕ್ಕೆ ಬಂದ ತನ್ನ ಸಂದೇಶವಾಹಕರ ಮೂಲಕ ಗ್ರಂಥಗಳ ಮೂಲಕ ಸರಿ ಮತ್ತು ತಪ್ಪುಗಳನ್ನು ಪ್ರಕಟಿಸಿದ್ದಾನೆ.
ಅವನ ಎಲ್ಲಾ ಗ್ರಂಥಗಲ್ಲಿಯೂ ಯಾವುದೇ ಜೀವಿಯನ್ನ ಅನ್ಯಯವಾಗಿ ಹತ್ಯೆ ಮಾಡುವುದನ್ನು ನಿಷೇಧಿಸಿದ್ದಾನೆ. ಅವನ ಕೊನೆಯ ಮತ್ತು ಅಂತಿಮ ಗ್ರಂಥ ಖುರ್ಆನ್ನಲ್ಲಿ ಹೇಳುತ್ತಾನೆ. “ಅಲ್ಲಾಹನು ಸನ್ಮಾನಿಸಿರುವ ಜೀವವನ್ನು ನ್ಯಾಯದಿಂದಲ್ಲದೆ ಹರಣ ಮಾಡಬೇಡಿರಿ”.(ಖುರ್ಆನ್ 17:33) ಆದರೆ ಆಹಾರಕ್ಕಾಗಿ ಪ್ರಾಣಿಗಳ ಬಲಿಕೊಡುವುದನ್ನು ಅವನ ಎಲ್ಲಾ ಗ್ರಂಥಗಳಲ್ಲಿ ಸಮ್ಮತಿಸಿದ್ದಾರೆ.
4 ) ಮನುಸೃತಿ
ಇದೊಂದು ಹಿಂದೂ ಬಾಂಧವರ ಪವಿತ್ರ ಗ್ರಂಥ, ಹಿಂದೂ ಸಹೋದರರಿಂದ ಪವಿತ್ರ ಗ್ರಂಥವೆಂದು ಪರಿಗಣಿಸಲಾಗಿರುವ ‘ಮನುಸೃತಿ’ ಹೇಳುತ್ತದೆ ‘ಉಣ್ಣುವವನು ಮಾಂಸ ಭಕ್ಷಿಸುವುದಿದ್ದರೆ, ಅವನು ಮಾಂಸವನ್ನು ದಿನನಿತ್ಯ ಬಳಸಿದರೂ ಅದು ಅವನಿಗೆ ಯಾವ ಹಾನಿಯನ್ನೂ ಮಾಡಲಾರದು. ಏಕೆಂದರೆ, ದೇವರು ಕೆಲವು ಸೃಷ್ಠಿಗಳನ್ನು ಭಕ್ಷಕವನ್ನಾಗಿಯು ಮತ್ತು ಕೆಲವನ್ನು ಆಹಾರವನ್ನಾಗಿಯೂ ಸೃಷ್ಠಿಸಿರುವನು’. (ಮನುಸ್ಮೃತಿ 5:30)
’ಮಾಂಸ ಭಕ್ಷಿಸುವುದನ್ನು ಬಲಿದಾನವೆಂದು ಪರಿಗಣಿಸಲಾಗುವುದು. ಇದು ಸಾಂಪ್ರದಾಯಿಕವಾಗಿ ದೇವರ ಆದೇಶವಾಗಿರುವುದು’.(ಮನುಸ್ಮೃತಿ 5:31)
ಇಂತಹಾ ಇನ್ನೂ ಅನೇಕ ಉದಾಹರಣೆಗಳನ್ನು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಕಾಣಬಹುದು. ಕೆಲವೊಂದನ್ನು ಇಲ್ಲಿ ಕೊಡಲಾಗಿದೆ, ಋಗ್ವೇದ:24:1 ; 91:14:6; 1:114:101; 5:29-7; ಅಥರ್ವವೇದ 11.1.48.
ಭಾರತದ ಮಾಜೀ ಅಧ್ಯಕ್ಷ ಡಾ|| ರಾಧಾಕೃಷ್ಣನ್ ಹಿಂದುತ್ವದ ಮೇಲೆ ವ್ಯಾಪಕ ಸಂಶೋಧನೆ ನಡೆಸಿರುವ ಮಹಾನ್ ವಿದ್ವಾಂಸರು, ಹಾಳುತ್ತಾರೆ, “ವೇದಗಳಕಾಲದಲ್ಲಿ ಬ್ರಾಹ್ಮಣರು ಮಾಂಸವನ್ನು ಭಕ್ಷಿಸುತ್ತಿದ್ದರು. ವೇದಗಳಲ್ಲಿ ಕುರಿ,ಆಡು, ಹಸು, ಎತ್ತು, ಮತ್ತು ಕುದುರೆಗಳನ್ನು ಬಲಿಗಾಗಿ ವಧಿಸುತ್ತಿದ್ದ ಅನೇಕ ಆಧಾರ ಪ್ರಮಾಣಗಳು ಸಿಗುತ್ತವೆ. ನಂತರದ ಕಾಲದಲ್ಲಿ ಬೌದ್ಧರ ಹಾಗೂ ಜೈನರ ಪ್ರಭಾವದಿಂದ ಈ ರೂಢಿಯು ಕಳೆಗುಂದಿತು”. (ಧರ್ಮ ಮತ್ತು ಸಮಾಜ Religion & Society ಪು 133)
5 ) ನಾವು ಎಲ್ಲ ಜೀವಿಗಳನ್ನು ಸಮಾನವಾಗಿ ಕಾಣಬೇಕು.
ಅವು ಚಿಕ್ಕದಾಗಿರಲಿ, ದೊಡ್ಡದಾಗಿರಲಿ, ನಮ್ಮ ಕಣ್ಣಿಗೆ ಕಾಣಿಸುವಂತಹವುಗಳಾಗಲಿ ಕಾಣದೇ ಇರುವಂತಹವುಗಳಾಗಲಿ, ಆನೆ, ಆಕಳು, ಕೀಟಗಳು, ಅಣುಜೀವಿಗಳು, ಮತ್ತು ಇತರಜೀವಿಗಳು, ಇವೆಲ್ಲವೂ ಬದುಕನ್ನು (ಜೀವನವನ್ನು)ಹೋದಿರುತ್ತವೆ. ದೊಡ್ಡದಾದ ಮತ್ತು ಕಣ್ಣಿಗೆಕಾಣಿಸುವಂತಹಾ ಜೀವಿಗಳನ್ನು ರಕ್ಷಿಸುವಂತಾದರೆ, ಚಿಕ್ಕದಾದ ಮತ್ತು ಕಣ್ಣಿಗೆ ಕಾಣದಿರುವ ಜೀವಿಗಳನ್ನು ಕಡೆಗಣಿಸುವುದು ಅನ್ಯಾಯವೇ ಸರಿ. ನಾವು ನೀರನ್ನು ಕುಡಿಯುವಾಗಲೂ ಸಹ ಸರಿಯಾಗಿ ಯೋಚಿಸಬೇಕು. ಏಕೆಂದರೆ ನೀರಿನಲ್ಲಿ ಮಿಲಿಯನ್ಗಡ್ಡಲೆ ಬ್ಯಾಕ್ಟೀರಿಯಾಗಳಿರುತ್ತವೆ, ರೇಷ್ಮೇ ಉದ್ಯಮದಲ್ಲಿ ಲಕ್ಷಾಂತರ ಹುಳುಗಳನ್ನು ಕೊಲ್ಲಲಾಗುತ್ತದೆ, ಇವೆಲ್ಲವನ್ನು ನಿಲ್ಲಿಸಲು ಸಾಧ್ಯವೇ?.
6 ) ಇಂದು ಗಿಡಮರಗಳು ಜೀವವನ್ನು ಹೋಂದಿವೆ ಮತ್ತು ಅವೂ ಕೂಡ ನೋಡುತ್ತವೆ ಕೇಳುತ್ತವೆ, ವಾಸನೆಯನ್ನು ಗ್ರಹಿಸುತ್ತವೆಂದು ವೈಜ್ಞಾನಿಕವಾಗಿ ಪ್ರಾಮಾಣೀಕರಿಸಲಾಗಿದೆ.
ನಾವು ಜೀವಿಯನ್ನು ಕೊಲ್ಲುವುದು ಪಾಪವೆಂದು ಪರಿಗಣಿಸಿದರೆ,ಆಹಾರಕ್ಕಾಗಿ ನಾವು ಏನು ಮಾಡಬೇಕು?
7 ) ದೇವನು ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಯನ್ನು ಸೃಷ್ಠಿಸಿ, ಪರಸ್ಪರ ವಿಂಗಡಿಸಿ ನಿರ್ಧಾರಿತ ಸಮತೋಲನದಲ್ಲಿ ಪರಿಪೂರ್ಣಗೊಳಿಸಿದ್ದಾನೆ.
ಖುರ್ಆನ್ ಹೇಳುತ್ತದೆ, “ನಿಮ್ಮ ಪ್ರಭುವಿನ ಅತ್ಯುನ್ನತ ನಾಮಗಳನ್ನು ಸ್ತುತಿಸಿರಿ.ಅವನೇ ಸೃಷ್ಠಿಸಿದನು ಹಾಗೂ ಸಂತುಲಿತಗೊಳಿಸಿದನು ಮತ್ತು ವಿಧಿಯನ್ನು ನಿರ್ಣಯಿಸಿದನು ಹಾಗೂ ಮಾರ್ಗದರ್ಶನವನ್ನುನೀಡಿದನು” ಖುರ್ಆನ್ 87:1-3)
ಮನು ಹೇಳುತ್ತದೆ: “ಬಲಿಷ್ಠ ಜೀವಿಗಳು ದುರ್ಬಲ ಜೀವಿಗಳನ್ನು ಭಕ್ಷಿಸುವುದು ನಿಸರ್ಗದ ನಿಯಮ. ಆದ್ದರಿಂದ ಮಾಂಸವನ್ನು ಭಕ್ಷಿಸುವುದು ನೈಸರ್ಗಿಕ ಕಾರ್ಯವಾಗಿದೆ.”
‘ದೇವರು ಚಲಿಸುವ ಹಾಗೂ ಚಲಿಸಲಾರದ ಜೀವಿಗಳನ್ನು ಆಹಾರಕ್ಕಾಗಿಯೇ ಸೃಷ್ಠಸಿರುವನು. ಚಲಿಸಲಾರದ ಜೀವಿಗಳು ಚಲಿಸುವ ಜೀವಿಗಳಿಗೆ ಹಾಗೂ ಹಲ್ಲಿರುವ ಜೀವಿಗಳಿಗೆ ಅಹಾರವಾಗಿರುವುವು. ಶಸ್ತ್ರ ರಹಿತ ಜೀವಿಗಳು ಶಸ್ತ್ರ ಸಜ್ಜಿತ ಜೀವಿಗಳಿಗೆ ಆಹಾರವಾಗಿರುವುವು, ಮುಗ್ಧ ಜೀವಿಗಳು ಕ್ರೂರ ಜೀವಿಗಳಿಗೆ ಆಹಾರವಾಗಿರುವುವು’. (ಮನುಸ್ಮೃತಿ:15)
8) ಸರ್ವಜ್ಞಾನಿಯಾದ ದೇವನು ಸೃಷ್ಟಿಸಿದ ಪ್ರಕೃತಿ ಸಮತೊಲನದಲ್ಲಿ ನಾವು ನಮ್ಮ ಮಂದದೃಷ್ಠಿ ಮತ್ತು ಭಾವನೆಗಳ ವ್ಯಾಮೊಹದಿಂದ ಅದನ್ನು ಹಾಳು ಮಾಡುವ ಗೋಜಿಗೆ ಹೋದರೆ ಅದರ ಪರಿಣಾಮವು ಅತ್ಯಂತ ಘೋರವಾಗುವುದು.
ಕೆಲವು ಉದಾಹರಣೆಗಳನ್ನು ನೊಡೊಣ,
ಅ) ಅತೀ ಶೀಘ್ರ ವೃದ್ಧಿಯಾಗುವ ಇಲಿಗಳ ಸಂಖ್ಯೆಯು ಹಾವು ಮತ್ತು ಇತರ ಜೀವಿಗಳಿಂದ ನಿಯಂತ್ರಿಸಲ್ಪಡದಿರುತ್ತಿದ್ದರೆ ಇದು ಆಹಾರ ಧಾನ್ಯಗಳ ಕೊರತೆಗೆ ಮತ್ತು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿತ್ತು.
ಆ) ಕಾಡುಗಳಲ್ಲಿ ಜಿಂಕೆಗಳು ಆಹಾರಕ್ಕಾಗಿ ಕಾಡು ಪ್ರಾಣಿಗಳ ಬೇಟೆಗಳಾಗದಿದ್ದರೆ, ಅವುಗಳ ಸಂಖ್ಯೆಯಲ್ಲಿ ಸಾಕಷ್ಟು ವೃದ್ಧಿಯಾಗಿ ಗಿಡ ಮರಗಳು ಬೇಗನೇ ಕಡಿಮೆಯಾಗುತ್ತಿದ್ದವು. ಕ್ರಮೇಣ ಕಾಡುಗಳು ನಶಿಸಿಮಳೆಯಿಲ್ಲದೇ ಬರಗಾಲ ಬರುತ್ತಿತ್ತು.
ಇ) ಇಡೀ ವಿಶ್ವದಲ್ಲಿ ಪ್ರತಿಯೊದು ದಿನಲ್ಲೆ ಅತೀ ಕಡಿಮೆಯೆಂದರೂ 3,84,000 ಪ್ರಾಣಿಗಳನ್ನು ಆಹಾರಕ್ಕಾಗಿ ಬಲಿ ಕೊಡಲಾಗುತ್ತದೆ. ಇದನ್ನು ತಿಂಗಳವರೆಗೆ ನಿಲ್ಲಿಸಿದರೆ ನಾವು ಆಹಾರ ಕೊಡಬೇಕಾದ ಪ್ರಾಣಿಗಳ ಸಂಖ್ಯೆಯು 1,15,20,000 ಆಗುತ್ತದೆ. ಮತ್ತು ಈ ಪ್ರಾಣಿಗಳಿಗೆ ಒಂದು ತಿಂಗಳಿನ ಮಟ್ಟಿಗೆ ನೀಡಬೇಕಾದ ಆಹಾರ ಅವಶ್ಯಕತೆಯು 34,50,00,000 ಕಿಲೋ ಗ್ರಾಂ, ಇಷ್ಟೋಂದು ಪ್ರಮಾಣದ ಆಹಾರವನ್ನು ಪೂರೈಸುವ ಕ್ರಮ, ಗಿಡ ಮರಗಳ (ಕಾಡುಗಳ) ಶೀಘ್ರನಾಶಕ್ಕೆ ಕಾರಣವಾಗುತ್ತದೆ. ಕಾಡುಗಳಿಲ್ಲದೇ ಮಳೆಯೂನಿಂತು ಹೋಗಿ ಇಡೀ ಭೂಮಿಯು ಆರು ತಿಂಗಳಲ್ಲಿ ನಾಶವಾಗಿ ಮರುಭೂಮಿಯಾಗುತ್ತರದೆ.
9) ಆಹಾರಕ್ಕಾಗಿ ಪ್ರಾಣಿಗಳ ಬಲಿಯನ್ನು ನಿಲ್ಲಿಸಿದರೆ, ನಾವು ಇವುಗಳನ್ನು ಕಳೆದುಕೊಳ್ಳಲು ಸಿದ್ಧರಿದ್ದೇವೆಯೇ?
ಅ. ದನದ ಮಾಂಸ ರಫ್ತು ಮಾಡುವಲ್ಲಿ ಭಾರತವು ಇಡೀ ವಿಶ್ವದಲ್ಲಿಯೇ 8 ನೇ ಸ್ಥಾನದಲ್ಲಿದೆ.
ಆ. ಚರ್ಮಗಳ ರಫ್ತಿನಲ್ಲಿ ವಿದೇಶಿ ವಿನಿಮಯದ ಆದಾಯ 3,160. ಕೋಟಿ ರೂಪಾಯಿಗಳು ಮತ್ತು 13.5, ಲಕ್ಷ ಜನ ಈ ಉದ್ಯೋಗವನ್ನು ಅವಲಂಬಿಸಿದ್ದಾರೆ
ಇ. ಮೀನು ಮತ್ತು ಮೀನಿನ ಇತರ ಉತ್ಪನ್ನಗಳ ವಿನಿಮಯದ ಆದಾಯ 6.308 ಕೋಟಿ ರೂ ಗಳು .
ಈ . ರೇಷ್ಮೆ ತಯಾರಿಕೆಯಲ್ಲಿ ವಿಶ್ವದಲ್ಲಿ 3 ನೇ ಸ್ಥಾನದಲ್ಲಿದೆ, 50 ಲಕ್ಷ ಜನ ಈ ಉದ್ಯಮವನ್ನು ಅವಲಂಬಿಸಿದ್ದಾರೆ. ಈ ಉದ್ಯಮದಲ್ಲಿರುವ ಲಾಭ ಮತ್ತು ಇದರಿಂದ ಸೃಷ್ಠಿಯಾಗುವ ಬಹಳಷ್ಟು ಉದ್ಯೊಗಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಬೆಲ್ಟ್ಗಳು, ಬೂಟುಗಳು, ಪರ್ಸ್ಗಳು, ಡಿಟರ್ಜಟ್, ಔಷಧಿಗಳು, ಇನ್ಸುಲಿನ್ ಮಾತ್ರೆಗಳು, ಗೊಬ್ಬರಗಳು, ಇತ್ಯಾದಿಗಳನ್ನು ನಾವು ನಿಜವಾಗಿಯೂ ಉಪಯೋಗಿಸುವುದಿಲ್ಲವೇ?.
10) ಮನುಷ್ಯನ ಶರೀರದ ಶಕ್ತಿ ಮತ್ತು ಪರಿಣಾಮಕಾರಿ ಕೆಲಸಕ್ಕೆ ಬೇಕಾದ ಜೀವಸತ್ವಗಳು(ವಿಟಮಿನ್ಗಳು)
ವಿಶೇಷವಾಗಿ ಬಿ 12, ಸಸಾರಜನಕ (ಪ್ರೋಟಿನ್)ಮತ್ತು ಖನಿಜಾಂಶಗಳು ಸಸ್ಯಾಹಾರದಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿರುತ್ತವೆ. ಬರೀ ಸಸ್ಯಹಾರವನ್ನು ಸೇವಿಸುವುದರಿಂದ ಕೂಲಿ ಕಾರ್ಮಿಕರು, ರೈತರು, ಸೈನಿಕರು, ಮತ್ತಿತರ ಶಾರೀರಿಕವಾಗಿ ಶ್ರಮಪಡುವವರು ಹೆಚ್ಚು ಕಾಲ ಕೆಲಸಮಾಡಲು ಸಾಧ್ಯವಿಲ್ಲ.
11 ) ಮಾನವ ಶರೀರವು ದೇವನಿಂದ ಬುದ್ಧಿಪೂರ್ವಕವಾಗಿ ಸೃಷ್ಠಿಸಲ್ಪಟ್ಟಿದೆ.
ಇದು ಸಸ್ಯಹಾರವನ್ನು ಮತ್ತು ಮಾಂಸಹಾರ ಎರಡನ್ನು ತಿನ್ನುವುದಕ್ಕೂ ಜೀರ್ಣಿಸಿಕೊಳ್ಳುವುದಕ್ಕೂ ಮತ್ತು ಸಸ್ಯಾಹಾರಿ ಪ್ರಾಣಿಗಳಿಗಿರುವಂತೆ ದವಡೆ ಹಲ್ಲು ಮತ್ತು ಮಾಂಸಹಾರಿ ಪ್ರಾಣಿಗಳಿಗಿರುವಂತೆ ಕೋರೆ ಹಲ್ಲುಗಳನ್ನೂ ದೇವನು ಕೊಟ್ಟಿದ್ದಾನೆ. ಮನುಷ್ಯನ ಜೀರ್ಣ ಕ್ರಿಯೆಯು ಸಸ್ಯಹಾರ ಮತ್ತು ಮಾಂಸಹಾರ ಎರಡನ್ನೂ ಜೀರ್ಣಿಸಿ ಕೊಳ್ಳಬಲ್ಲದು.
ಅ) ಅತೀ ಜ್ಞಾನವನ್ನು ಹೊಂದಿರುವ ಸೃಷ್ಠಿಕರ್ತನ ಪ್ರಾಕೃತಿಕ ನಿಯಮಗಳಲ್ಲಿ ಯಾರು ತಪ್ಪುಗಳನ್ನು ಹುಡುಕುವ ಗೋಜಿಗೆ ಹೋಗುತ್ತಾರೋ ಅವರಿಗೆ ಸೃಷ್ಠಿಕರ್ತನೇ ಎಚ್ಚರಿಕೆ ನೀಡುತ್ತಾನೆ.
ಆ) ‘ಭೂಮಿಯಲ್ಲಿ ಸುಧಾರಣೆಯಾಗಿರುವಾಗ ಕ್ಷೋಭೆಯನ್ನುಂಟು ಮಾಡಬೇಡಿರಿ’. ಖುರ್ಆನ್ 7:56. ಸೃಷ್ಠಿಕರ್ತ ಮತ್ತು ಇಡೀ ವಿಶ್ವದ ಅಧಿಪತಿಯು ಧರ್ಮ ಸಮ್ಮತಗೊಳಿಸಿದ ಕಾರ್ಯಗಳನ್ನು ನಿಷೇಧಿಸುವವರನ್ನು ಎಚ್ಚರಿಸುತ್ತಾನೆ. ‘ಭೂಮಿಯ ಮೇಲೆ ಗೊಂದಲ ಹಬ್ಬಿಸುತ್ತಿರುವವರೂ ಶಾಪಕ್ಕೆ ಅರ್ಹರು, ಅವರಿಗೆ ಪರಲೋಕದಲ್ಲಿ ಅತ್ಯಂತ ಕೆಟ್ಟ ನಿವಾಸವಿದೆ’. ಖುರ್ಆನ್ 13:25
ಇ) ‘ಇದು ಧರ್ಮಸಮ್ಮತ, ಇದು ನಿಷಿದ್ಧ ಎಂದು ನಿಮ್ಮ ನಾಲಿಗೆಗಳು ಸುಳ್ಳು ವಿಧಿಯನ್ನು ಹೇಳುತ್ತಿವೆ. ಇಂತಹ ವಿಧಿಗಳನ್ನು ಹೇಳಿ ಅಲ್ಲಾಹನ ಮೇಲೆ ಸುಳ್ಳು ಸೃಷ್ಠಿಸಬೇಡಿರಿ,ಅಲ್ಲಾಹನ ಮೇಲೆ ಸುಳ್ಳನ್ನು ಹೊರಿಸುವವರು ಎಂದಿಗೂ ಯಶಸ್ವಿಗಳಾಗುವುದಿಲ್ಲ. ಲೌಕಿಕ ಸುಖಭೋಗ ಕೇವಲ ಅಲ್ಪಾವಧಿಯದು ಕೊನೆಗೆ ಅವರಿಗೆ ವೇದನಾತ್ಮಕ ಯಾತನೆ ಇರುವುದು’. ಖುರ್ಆನ್ 16:116-117.
ಇಂತಹದೊಂದು ವಿಶಿಷ್ಠ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಬಕ್ರೀದ್ ಸಂದೇಶವನ್ನು ಪಾಲಿಸೋಣ. ಅದುವೆ ಸಂಪೂರ್ಣ ಶರಣಾಗತಿ, ತ್ಯಾಗ ಬಲಿದಾನ, ಸಹನೆ ಮತ್ತು ನಮ್ಮ ಸೃಷ್ಠಕರ್ತನ ಆಜ್ಞಾಪಾಲನೆಯ ಸಂದೇಶ.
ಜೀವಿ ಜೀವಿಯನ್ನು ತಿಂದು ಜೀವಿಪದು ನಾಕಂಡೆನಯ್ಯ,
ಜೀವಿ ನಿರ್ಜೀವಿಯ ತಿಂದು ಜೀವಿಪದು ನಾಕಾಣೆನಯ್ಯ (ಸರ್ವಜ್ಞ)
ಇಸ್ಲಾಮನ್ನು ಅನ್ವೇಷಿಸಿ





ಅಲ್ಲಾಹ್
ನಂಬಿಕೆ




ಪವಿತ್ರೀಕರಣ
ಅಹದೀತ್ ಹೇಳಿಕೆಗಳು
ಇಸ್ಲಾಮ್ ಮತ್ತು ಶಾಸ್ತ್ರಗಳು





ಪ್ರವಾದಿಗಳು


ಜೀವನ ಚರಿತ್ರೆಗಳು








ಇಸ್ಲಾಮಿನ ಇತಿಹಾಸ
ಇಸ್ಲಾಮಿನ ಕಾನೂನು






ಇಸ್ಲಾಮ್ ಜೀವನಶೈಲಿ-ಸಂಸ್ಕೃತಿ


ಇಸ್ಲಾಮಿನಲ್ಲಿ ಮೂಲಭೂತ ಹಕ್ಕುಗಳು
ಪ್ರಚಲಿತ ವಿದ್ಯಮಾನ
ಮಾಸ ಪತ್ರಿಕೆಗಳು
ಅರೇಬಿಕ್
