ಪ್ರಕಾಶಕರ ಮಾತು
ಸರ್ವಸ್ತುತಿಯು, ಸಕಲ ವಿಶ್ವದ ಪ್ರಭುವಾದ ಅಲ್ಲಾಹನಿಗೇ ಮೀಸಲು. ಮುಹಮ್ಮದ(ಸ) ಹಾಗು ಅವರ ಪರಿವಾರ ಹಾಗು ಅವರ ಸಂಗಡಿಗರು ಹಾಗು ಅಂತಿಮ ಕಾಲದವರೆಗೂ ಅವರನ್ನನುಸರಿಸುವ ಅವರ ಅನುಯಾಯಿಗಳ ಮೇಲೆ ಶಾಂತಿ ಮತ್ತು ಪ್ರಾರ್ಥನೆಗಳಿರಲಿ.
ನಿಮ್ಮ ಮುಂದಿರುವುದು ‘ಶೇಖ್ ಮುಹಮ್ಮದ ಇಬ್ನ್ ಸುಲೈಮಾನ್ ಅತ್ತಮೀಮಿ(ರ)’ಯವರ ‘ಸಲಾಸತುಲ್ ಉಸೂಲ್’(ಮೂರು ಮೂಲಭೂತ ತತ್ವಗಳು)ನ ಭಾವಾನುವಾದ. ಮರಣಾನಂತರ ಗೋರಿಯಲ್ಲಿ ಪ್ರತಿಯೊಬ್ಬನಿಗೂ ಕೇಳಲ್ಪಡುವ ಮೂರು ಪ್ರಶ್ನೆಗಳನ್ನು ಆಧರಿಸಿ ಈ ಕೃತಿಯನ್ನು ರಚಿಸಲಾಗಿದೆ. ಅಂತೆಯೇ ಇದರ ಭಾವಾನುವಾದವು ಕನ್ನಡ ಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿತಗೊಂಡಿದೆ. ತನ್ಮೂಲಕ ಈ ಭಾವಾನುವಾದವು ಸತ್ಯದ ಅನ್ವೇಷಣೆಯಲ್ಲಿರುವ ಮತ್ತು ಸತ್ಯವನ್ನು ಸ್ವೀಕರಿಸಿ, ಅಲ್ಲಾಹನನ್ನು ಸಂಧಿಸುವ ನಿರೀಕ್ಷೆಯಲ್ಲಿರುವ ಕನ್ನಡ ಜನತೆಗೆ ಉಪಯುಕ್ತವಾಗಲಿದೆ ಎಂದು ಆಶಿಸುತ್ತೇವೆ.
ಅಲ್ಲಾಹನು ಶೇಖ್ರನ್ನು ಒಳಿತಿನೊಂದಿಗೆ ಸನ್ಮಾನಿಸಲಿ ಮತ್ತು ಈ ಕಿರುಹೊತ್ತಿಗೆಯನ್ನು ಸಿದ್ಧಪಡಿಸುವಲ್ಲಿ ಹಾಗು ಪ್ರಕಟಿಸುವಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಕರಿಸಿರುವ ಎಲ್ಲ ಬಂಧು ಮಿತ್ರರನ್ನೂ ಅಲ್ಲಾಹ್ ಸನ್ಮಾನಿಸಲಿ ಎಂದು ಹಾರೈಸುತ್ತೇವೆ.
ಪರಮ ಕರುಣಾಮಯಿಯೂ, ಕರುಣೆಗಳನ್ನು ವರ್ಷಿಸುವವನೂ ಆದ ಅಲ್ಲಾಹನ ನಾಮದಿಂದ,
ಮುಹಮ್ಮದ ಇಬ್ನ್ ಸುಲೈಮಾನ್ ಅತ್-ತಮೀಮಿ”ಯವರ ಸಂಕ್ವಿಪ್ತ ಜೀವನ ಚರಿತ್ರೆ
ಬನೂ ತಮೀಮ್ ಜನಾಂಗದ ಒಂದು ಗುಂಪಿನವರಾದ ಶೇಖ್ ಮುಹಮ್ಮದ ಇಬ್ನ್ ಅಬ್ದುಲ್ ವಹ್ಹಾಬ್ ಇಬ್ನ್ ಸುಲೈಮಾನ್ ಇಬ್ನ್ ಅಲಿ ಇಬ್ನ್ ಮುಹಮ್ಮದ್ ಇಬ್ನ್ ಅಹ್ಮದ್ ಇಬ್ನ್ ರಾಶೀದ್ ಇಬ್ನ್ ಬುರೈದ್ ಇಬ್ನ್ ಮುಹಮ್ಮದ್ ಇಬ್ನ್ ಮುಶ್ರೀಫ್ ಇಬ್ನ್ ಉಮರ್, ಒಬ್ಬ ಇಮಾಮ ಆಗಿದ್ದರು.
ಶ್ರೀಯುತರ ಜನನವು, ಜ್ಞಾನ, ಉದಾತ್ತಮನೋಭಾವ ಹಾಗು ಧಾರ್ಮಿಕ ಒಲವಿಗೆ ಹೆಸರುವಾಸಿಯಾದ ಮನೆತನದಲ್ಲಿ, ‘ಉನೈಝಾ’ ನಗರದಲ್ಲಿ ಹಿ. 1115 ರಲ್ಲಿ ಆಯಿತು. ಇವರ ತಂದೆ ಒಬ್ಬ ಶ್ರೇಷ್ಠ ವಿದ್ವಾಂಸರಾಗಿದ್ದರು ಮತ್ತು ಇವರ ತಾತ ಕೂಡ, ತಮ್ಮ ಕಾಲದಲ್ಲಿ ನಜ್ದ್ನ ಶ್ರೇಷ್ಠ ವಿದ್ವಾಂಸರಾಗಿದ್ದರು. ಮಾನ್ಯ ಶೇಖ್ರವರು ಹತ್ತು ವರ್ಷ ವಯಸ್ಸಿಗೂ ಮುಂಚೆಯೇ ಸಂಪೂರ್ಣ ಕುರ್ಆನಅನ್ನು ಕಂಠಸ್ಥಗೊಳಿಸಿದ್ದರು ಮತ್ತು ಪಿಖ್ಃ (ಇಸ್ಲಾಮಿ ಕಾನೂನು ಮತ್ತು ಕಾರ್ಯರೂಪ)ಗೆ ಸಂಬಂಧಪಟ್ಟಂತೆ ಅಗಾಧ ಅಧ್ಯಯನ ನಡೆಸಿರುವರು. ವಾಸ್ತವದಲ್ಲಿ, ಇವರ ತಂದೆಯೂ ಇವರ ಜ್ಞಾಪಕ ಶಕ್ತಿಯನ್ನು ಕಂಡು ಚಕಿತರಾಗಿದ್ದರು.
ತಫ್ಸೀರ್ (ಕುರ್ಆನಿನ ವಿವರಣೆ) ಮತ್ತು ಹದೀಸ್ (ಪ್ರವಾದಿ(ಸ)ರ ನಡೆನುಡಿ)ಗಳ ಅಧ್ಯಯನಕ್ಕಾಗಿಯೇ ಅವರು ತಮ್ಮ ಅಗಾಧ ಸಮಯವನ್ನು ಮುಡಿಪಾಗಿಟ್ಟಿದ್ದರು. ಹಗಲು-ರಾತ್ರಿ ಜ್ಞಾನದ ಹುಡುಕಾಟದಲ್ಲಿರುತ್ತಿದ್ದರು. ಇಸ್ಲಾಮಿ ಜ್ಞಾನದ ಹೆಚ್ಚಿನ ಎಲ್ಲ ವಿಭಾಗಗಳಲ್ಲಿಯ ಗ್ರಂಥಗಳನ್ನು ಕಂಠಪಾಠ ಮಾಡುತ್ತಿದ್ದರು. ನಜ್ದ್ನ ಸುತ್ತಮುತ್ತ ಹಾಗು ಮಕ್ಕಾಗೆ ಪ್ರಯಾಣಿಸಿ ವಿದ್ವಾಂಸರುಗಳಿಂದ ಜ್ಞಾನಭರಿತ ಗ್ರಂಥಗಳನ್ನು ಅಧ್ಯಯಿಸಿರುವರು. ನಂತರ ಅವರು ಮದೀನಾಕ್ಕೆ ತೆರಳಿ ಅಲ್ಲಿನ ವಿದ್ವಾಂಸರ ಬಳಿ ಕಲಿತರು. ಅವರಲ್ಲಿ ‘ಶೇಖ್ ಅಬ್ದುಲ್ಲಾಹ್ ಇಬ್ನ್ ಇಬ್ರಾಹೀಮ್ ಅಶ್-ಶಮ್ಮರೀ’ರಂತಹ ಮಹಾ ವಿದ್ವಾಂಸರು ಕೂಡ ಒಬ್ಬರು. ಅಷ್ಟೇ ಅಲ್ಲದೇ, ‘ಅಲ್-ಅಬ್ದುಲ್ ಫಾಇದ್ಫೀ ಶರ್ಃ ಅಲ್ಪಿಯ್ಯಾತಿಲ್ ಫರಾಇದ್’ ಎಂಬ ಗ್ರಂಥದ ಲೇಖಕರಾದ ಅವರ ಪುತ್ರ ‘ಇಬ್ರಾಹೀಮ್ ಅಶ್-ಶಮ್ಮರೀ’ಯವರ ಬಳಿಯೂ ಕಲಿತರು. ಇಬ್ರಾಹೀಮ್ ಅಶ್-ಶಮ್ಮರೀ ಅನುವಂಶೀಯ ಬಾಧ್ಯತೆಗಳು ಹಾಗು ಅವುಗಳಿಗೆ ಸಂಬಂಧಪಟ್ಟಂತೆ ಅಗಾಧ ಜ್ಞಾನವನ್ನು ಹೊಂದಿದ್ದರು. ನಂತರದ ಕಾಲದಲ್ಲಿ ಇವರುಗಳೇ ಹದೀಸ್ನ ಪ್ರಸಿದ್ಧ ವಿದ್ವಾಂಸರಾದ ‘ಮುಹಮ್ಮದ್ ಹಯಾತ್ ಅಸ್-ಸಿಂಧೀ’ಯವರನ್ನು ಶೇಖ್ರಿಗೆ ಪರಿಚಯಿಸಿದರು. ಅವರ ಬಳಿ ಹದೀಸ್ನ ವಿಜ್ಞಾನ ಮತ್ತು ಅದರ ವರದಿಗಾರರ ಕುರಿತ ಸಂಪೂರ್ಣ ಅಧ್ಯಯನ ನಡೆಸಿದರು. ಮಾತ್ರವಲ್ಲದೇ, ಹದೀಸ್ನ ಮೂಲಗ್ರಂಥಗಳನ್ನು ವರದಿ ಮಾಡುವ ಅನುಮತಿಯನ್ನೂ ಅವರಿಗೆ ನೀಡಲಾಯಿತು. ಶೇಖ್ ಮುಹಮ್ಮದ್ ಇಬ್ನ್ ಸುಲೈಮಾನ್ ಅತ್-ತಮೀಮಿ, ಅಲ್ಲಾಹ್, ಅತ್ಯುನ್ನತನು ಅವರನ್ನು ಕರುಣಿಸಲಿ, ಅವರಿಗೆ ಅಲ್ಲಾಹನು ಗಾಢವಾದ ಜ್ಞಾನವನ್ನೂ ಶ್ರೇಷ್ಠಮಟ್ಟದ ಬುದ್ಧಿವಂತಿಕೆಯನ್ನೂ ದಯಪಾಲಿಸಿದ್ದನು. ಅವರು ತಮ್ಮ ಹೆಚ್ಚಿನ ಸಮಯವನ್ನು ಅನ್ವೇಷಣೆ, ಅಧ್ಯಯನ ಮತ್ತು ಬರವಣಿಗೆಗೆಂದೇ ಮುಡಿಪಾಗಿಟ್ಟಿದ್ದರು. ಹೀಗೆ ಅನ್ವೇಷಿಸುವಾಗ ಅಥವಾ ಅಧ್ಯಯನ ನಡೆಸುವಾಗ ಯಾವೆಲ್ಲ ಮಹತ್ವಪೂರ್ಣ ವಿಷಯಗಳನ್ನು ಗಮನಿಸುತ್ತಿದ್ದರೋ ತಕ್ಷಣ ಅವುಗಳನ್ನು ವರದಿ ಮಾಡುತ್ತಿದ್ದರು ಮತ್ತು ಕಂಠಸ್ಥಗೊಳಿಸುತ್ತಿದ್ದರು. ಬರೆಯುವ ವಿಷಯದಲ್ಲಿ ಅವರು ಎಂದಿಗೂ ದಣಿದಿಲ್ಲ. ಅಷ್ಟೇ ಅಲ್ಲದೇ ಇಬ್ನ್ ತಯ್ಮಿಯಾಹ್ ಹಾಗು ಇಬ್ನುಲ್ ಖಯ್ಯಿಮ್, ರಹೀಮಉಲ್ಲಾಹ್,ರ ಅನೇಕ ಕೃತಿಗಳನ್ನೂ ನಕಲು ಮಾಡಿರುವರು. ಅವರ ಬರವಣಿಗೆಯಲ್ಲಿಯೇ ಅನೇಕ ಕೃತಿಗಳು ವಿವಿಧ ಮ್ಯೂಸಿಯಂಗಳಲ್ಲಿ ಸುರಕ್ಷಿತವಾಗಿವೆ. ಅವರ ತಂದೆಯು ಮೃತರಾದ ಬಳಿಕ ಅವರು ಬಹಿರಂಗವಾಗಿ ‘ಸಲಫೀü ದಾವಾಃ’ನತ್ತ ಕರೆ ನೀಡಿದರು. ಅದುವೇ, ಎಲ್ಲ ರೀತಿಯ ಆರಾಧನೆಗಳಲ್ಲಿ ಮತ್ತು ಅವನ ಹಕ್ಕುಗಳಲ್ಲಿ ಅಲ್ಲಾಹನನ್ನು ಅನನ್ಯವಾಗಿಸುವುದು, ಎಲ್ಲ ಪಾಪಗಳ ತಿರಸ್ಕಾರ. ಅವರು, ಗೋರಿ ಪೂಜೆಯೆಡೆಗೆ ಆಹ್ವಾನಿಸುವ, ನವೀನಾಚಾರಗಳನ್ನು ಅಳವಡಿಸಿಕೊಂಡಿರುವವರನ್ನು ವಿರೋಧಿಸಿದರು. ಅಲ್ ಸ’ಊದ್ರ ಮೂಲಕ ಅವರಿಗೆ ಸಲಹೆ, ಸಾಮಥ್ರ್ಯ ಹಾಗು ಅವರ ಸತ್ಯದೆಡೆಗಿನ ಆಹ್ವಾನವನ್ನು ಎಲ್ಲೆಡೆ ಪಸರಿಸಲು ಬೆಂಬಲ ದೊರೆಯಿತು.
ಅವರು ಅನೇಕ ಮಹತ್ವಪೂರ್ಣ ಕೃತಿಗಳನ್ನೂ ಪ್ರಕಟಿಸಿದರು. ಅವುಗಳಲ್ಲಿ ಅತ್ಯಮೂಲ್ಯ ಮತ್ತು ಶ್ರೇಷ್ಠ ಶೀರ್ಷಿಕೆಗಳು ಈ ರೀತಿ ಇವೆ: ಕಿತಾಬುತ್-ತೌಹೀದ್, ಅನೇಕ ಬಾರಿ ಮುದ್ರಿತಗೊಂಡಿತು; ಪ್ರತಿಬಾರಿಯೂ ಮುದ್ರಣವು ಮಾರಾಟವಾದಂತೆ ಪುನಃ ಮುದ್ರಿತಗೊಂಡಿತು. ಕಷ್ಪುಷ್-ಷುಬುಹಾತ್, ಅಲ್-ಕಬಾಇರ್, ಮುಖ್ತಸರುಲ್-ಇನ್ಸಾಫ್, ಅಶ್-ಶರಹುಲ್-ಕಬೀರ್, ಮುಖ್ತಸರ್ ಝಾದೀಲ್-ಮಆದ್. ಅವರು ಅಗಾಧ ಸಂಖ್ಯೆಯ ಫತಾವಾ (ಧಾರ್ಮಿಕ ತೀರ್ಪು) ಹಾಗು ಪ್ರಬಂಧಗಳ ಸಂಗ್ರಹವನ್ನು ಹೊಂದಿದ್ದರು. ಅವುಗಳನ್ನು ‘ಮಜ್ಮೂಆಹ್ ಮುಅಲ್ಲಫಾತ್ ಅಲ್-ಇಮಾಮ್ ಮುಹಮ್ಮದ್ ಇಬ್ನ್ ಅಬ್ದಿಲ್ ವಹ್ಹಾಬ್’ ಎಂಬ ಶೀರ್ಷಿಕೆಯಡಿಯಲ್ಲಿ ಇಮಾಮ್ ಮುಹಮ್ಮದ್ ಇಬ್ನ್ ಸಊದ್ ವಿಶ್ವವಿದ್ಯಾಲಯದ ಉಸ್ತುವಾರಿಯಲ್ಲಿ ಸಂಗ್ರಹಿಸಲಾಗಿರುವುದು.
ಹಿ. 1206ರಲ್ಲಿ ಅವರ ನಿಧನವಾಯಿತು. ಅಲ್ಲಾಹ್ ಅವರನ್ನು ತನ್ನ ಕರುಣೆಯಲ್ಲಿ ಆಲಂಗಿಸಿಕೊಳ್ಳಲಿ. ಇಸ್ಲಾಮ್ ಹಾಗು ಮುಸ್ಲಿಮರಿಗೆ ಅವರು ಸಲ್ಲಿಸಿರುವ ಸೇವೆಗಳಿಗಾಗಿ ಅಲ್ಲಾಹ್ ಅವರನ್ನು ಸನ್ಮಾನಿಸಲಿ. ನಿಶ್ಚಯವಾಗಿಯೂ, ಅಲ್ಲಾಹ್ ಪ್ರಾರ್ಥನೆಗಳನ್ನು ಆಲಿಸುವವನೂ, ಅವುಗಳನ್ನು ಸ್ವೀಕರಿಸುವವನು ಆಗಿರುವನು. ಸರ್ವಸ್ತುತಿಯೂ, ಧನ್ಯತೆಯೂ ಅಲ್ಲಾಹ್ನಿಗೆ ಮೀಸಲು ಹಾಗು ಪ್ರವಾದಿ ಮುಹಮ್ಮದ(ಸ), ಅವರ ಪರಿವಾರ, ಅವರ ನೈಜ ಅನುಯಾಯಿಗಳು ಮತ್ತು ಅವರ ಸಂಗಡಿಗರ ಮೇಲೆ ಅಲ್ಲಾಹ್ ಅನುಗ್ರಹಗಳನ್ನಿಳಿಸಲಿ.
-ಫಾಹ್ದ್ ಇಬ್ನ್ ನಾಸೀರ್ ಅಸ್-ಸುಲೈಮಾನ್
“ಸಲಾಸತುಲ್ ಉಸೂಲ್”ನ ಕನ್ನಡ ಭಾವಾನುವಾದ ಅರಿತುಕೊಳ್ಳಿ, ಅಲ್ಲಾಹನ ಕರುಣೆಯು ನಿಮ್ಮ ಮೇಲಿರಲಿ, ಈ ಕೆಳಗಿನ ನಾಲ್ಕು ವಿಷಯಗಳ ಜ್ಞಾನವನ್ನು ಪಡೆದುಕೊಳ್ಳುವುದು ನಿಮ್ಮ ಮೇಲೆ ಕಡ್ಡಾಯವಾಗಿರುವುದು.
- ಜ್ಞಾನ (ಅಲ್-ಇಲ್ಮ್) : ಅಲ್ಲಾಹನ ಬಗೆಗಿನ ಅರಿವು ಹಾಗು ಜ್ಞಾನ, ಮತ್ತು ಆತನ ಸಂದೇಶವಾಹಕರ ಬಗೆಗಿನ ಜ್ಞಾನ, ಮತ್ತು ಆಧಾರ-ಸಹೀತ ಇಸ್ಲಾಮ್ ಧರ್ಮದ ಜ್ಞಾನ.
- ಅದರಂತೆ ನಡೆದುಕೊಳ್ಳುವುದು.
- ಅದರೆಡೆಗೆ ಜನರನ್ನು ಆಹ್ವಾನಿಸುವುದು.
- ಈ ದಿಶೆಯಲ್ಲಿ ಎದುರಾಗುವ ಎಲ್ಲ ತೊಂದರೆಗಳನ್ನೂ ಸಹಿಸಿಕೊಳ್ಳುವುದು ಮತ್ತು ತಾಳ್ಮೆಯೊಂದಿಗೆ ಅವುಗಳನ್ನು ನಿಷ್ಠೆಯಿಂದ ಎದುರಿಸುವುದು.
ಇವುಗಳಿಗೆ ಆಧಾರವಾಗಿ ಅಲ್ಲಾಹ್, ಅತ್ಯುನ್ನತನ ಹೇಳಿಕೆ ಈ ರೀತಿ ಇರುವುದು,
‘ಕಾಲದಾಣೆ, ನಿಜವಾಗಿಯೂ ಮಾನವನು ನಷ್ಟದಲ್ಲಿರುವನು. ಆದರೆ ಅಲ್ಲಾಹನಲ್ಲಿ ಸತ್ಯವಿಶ್ವಾಸವಿರಿಸಿ ಅವನನ್ನು ಮಾತ್ರ ಆರಾಧಿಸುವವನ, ಮತ್ತು ತನ್ನ ಮೇಲೆ ಕಡ್ಡಾಯಗೊಳಿಸಲಾದ ಕರ್ಮಗಳನ್ನು ನೆರವೇರಿಸುವ ಮೂಲಕ ಹಾಗು ನಿಶಿದ್ಧಗೊಳಿಸಲಾದ ಕರ್ಮಗಳಿಂದ ದೂರವಿರುವ ಮೂಲಕ ಸತ್ಕರ್ಮಗಳನ್ನು ಮಾಡುವವನ, ಮತ್ತು ಪರಸ್ಪರ ಸತ್ಯದ (ಅಲ್ಲಾಹನ ದಾಸ್ಯಾನುಸರಣೆ) ಕಡೆಗೆ ಹಾಗು ಈ ದಿಶೆಯಲ್ಲಿ ತಲೆದೋರುವ ಎಲ್ಲ ರೀತಿಯ ತೊಂದರೆಗಳನ್ನು ಸಹನೆಯೊಂದಿಗೆ ಎದುರಿಸುವೆಡೆಗೆ ಆಹ್ವಾನಿಸುವವನ ಹೊರತು.’ [ಸೂರಃ ಅಲ್-ಅಸ್ರ್ 103:1-3]
ಅಶ್-ಶಾಫಿಈ, ಅಲ್ಲಾಹ್, ಅತ್ಯುನ್ನತನು ಅವರ ಮೇಲೆ ಕೃಪೆಯಿರಿಸಿಲಿ, ಹೇಳಿರುವರು : “ ಅಲ್ಲಾಹನು ತನ್ನ ಸೃಷ್ಟಿಗಾಗಿ ಈ ಸೂರಃದ ಹೊರತು ಇನ್ನಾವುದೇ ಆಧಾರವನ್ನು ಇಳಿಸಿರದಿದ್ದರೂ ಅವರಿಗೆ ಅದುವೇ ಸಾಕಾಗಿತ್ತು.”
ಅಲ್-ಬುಖಾರಿ, ಅಲ್ಲಾಹ್, ಅತ್ಯುನ್ನತನು ಅವರ ಮೇಲೆ ಕೃಪೆಯಿರಿಸಲಿ, ಹೇಳಿರುವರು, ಅಧ್ಯಾಯ: ಜ್ಞಾನವು ಉಪದೇಶ ಮತ್ತು ನಡುವಳಿಕೆಗೂ ಆದಿಯಲ್ಲಿರುವುದು ಮತ್ತು ಆಧಾರವೆಂದರೆ, ಅಲ್ಲಾಹ್, ಅತ್ಯುನ್ನತನ ಹೇಳಿಕೆ :
“ಅಲ್ಲಾಹನ ಹೊರತು ಇನ್ನಾರೂ ಆರಾಧನೆಗೆ ಅರ್ಹರಿಲ್ಲವೆಂಬುದನ್ನು ಅರಿತುಕೊಳ್ಳಿರಿ ಮತ್ತು ನಿಮ್ಮ ಪಾಪಗಳಿಗಾಗಿ ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ”.[ಸೂರಃ ಮುಹಮ್ಮದ್, 47:19]
ಹೀಗೆ, ಅಲ್ಲಾಹನು ಉಪದೇಶ ಹಾಗು ನಡುವಳಿಕೆಗೂ ಮುಂಚಿತವಾಗಿ ಜ್ಞಾನವನ್ನು (ಅರಿವನ್ನು) ಪ್ರಸ್ತಾಪಿಸುವ ಮೂಲಕ ಆರಂಭಿಸಿರುವನು.”
ಅರಿತುಕೊಳ್ಳಿರಿ, ನಿಮ್ಮ ಮೇಲೆ ಅಲ್ಲಾಹನು ಕೃಪೆಯಿರಿಸಲಿ, ಸ್ತ್ರೀಯಿರಲಿ ಅಥವಾ ಪುರುಷನಿರಲಿ ಪ್ರತಿಯೊಬ್ಬ ಮುಸ್ಲಿಮನ ಮೇಲೆ ಈ ಕೆಳಕಂಡ ಮೂರು ವಿಷಯಗಳನ್ನು ಕಲಿಯುವುದು ಮತ್ತು ಅದರಂತೆ ನಡೆದುಕೊಳ್ಳುವುದು ಕಡ್ಡಾಯವಾಗಿರುವುದು :
ಮೊದಲನೆಯದಾಗಿ : ಅಲ್ಲಾಹನು ನಮ್ಮನ್ನು ಸೃಷ್ಟಿಸಿರುವನು ಮತ್ತು ಅವನೇ ನಮಗೆ ಜೀವನಾಧಾರವನ್ನು ದಯಪಾಲಿಸಿರುವನು ಮತ್ತು ನಮ್ಮನ್ನು ವ್ಯರ್ಥ ಉದ್ದೇಶರಹಿತರಾಗಿರಲು ಬಿಡಲಿಲ್ಲ. ಬದಲಾಗಿ ನಮ್ಮ ಬಳಿಗೆ ಸಂದೇಶವಾಹಕರನ್ನು ಕಳುಹಿಸಿರುವನು. ಆದ್ದರಿಂದ, ಯಾರು ಆ ಸಂದೇಶವಾಹಕರ ಆಜ್ಞಾನುಸರಣೆ ಮಾಡುವರೋ ಅವರು ಸ್ವರ್ಗವನ್ನು ಪ್ರವೇಶಿಸುವರು ಮತ್ತು ಯಾರು ಅವರನ್ನು ತಿರಸ್ಕರಿಸುವರೋ ಮತ್ತು ನಿರ್ಲಕ್ಷಿಸುವರೋ ಅವರು ನರಕಾಗ್ನಿಯನ್ನು ಪ್ರವೇಶಿಸುವರು, ಮತ್ತು ಅದಕ್ಕೆ ಆಧಾರವೆಂದರೆ, ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಹೇ ಜನರೇ, ನಾವು ಫಿರ್ಔನ್ನೆಡೆಗೆ ಸಂದೇಶವಾಹಕರನ್ನು ಕಳುಹಿಸಿದ್ದಂತೆಯೇ ನಿಮ್ಮ ಬಳಿಗೂ ಸಂದೇಶವಾಹಕರನ್ನು ಕಳುಹಿಸಿರುವೆವು, ಪುನರುತ್ಥಾನದ ದಿನದಂದು ನಿಮ್ಮ ಪರವಾಗಿ ಅಥವಾ ನಿಮ್ಮ ವಿರುದ್ಧ ಸಾಕ್ಷಿಯಾಗಿ. ಆದರೆ ಫಿರ್ಔನ್ ಸಂದೇಶವಾಹಕರನ್ನು ನಿರಾಕರಿಸಿದನು ಮತ್ತು ತಿರಸ್ಕರಿಸಿದನು. ಅದಕ್ಕಾಗಿ ನಾವು ಅವನನ್ನು ಉಗ್ರಶಿಕ್ಷೆಯೊಂದಿಗೆ ಹಿಡಿದುಬಿಟ್ಟೆವು. [ಸೂರಃ ಅಲ್-ಮುಝ್ಝಮ್ಮಿಲ್ 73:16]
ಎರಡನೆಯದಾಗಿ : ಅಲ್ಲಾಹನು, ಆರಾಧನೆಯಲ್ಲಿ ಯಾರನ್ನಾದರೂ ಅವನೊಂದಿಗೆ ಸಹಭಾಗಿಯಾಗಿಸುವುದನ್ನು ಮೆಚ್ಚುವುದಿಲ್ಲ, ಅವರ ದೇವಚರರೇ ಆಗಿರಲಿ ಅಥವಾ ದೇವ ಸಂದೇಶವಾಹಕರಾಗಿ ಕಳುಹಿಸಲ್ಪಟ್ಟಂಥ ಪೈಗಂಬರರೇ ಆಗಿರಲಿ, ಮತ್ತು ಅದಕ್ಕೆ ಆಧಾರವೆಂದರೆ, ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಮತ್ತು ಆರಾಧನಾ ಸ್ಥಳಗಳು ಕೇವಲ ಅಲ್ಲಾಹನಿಗೆ ಮೀಸಲು. ಆದ್ದರಿಂದ ಅವನ ಹೊರತು ಇನ್ನಾರನ್ನೂ ಪ್ರಾರ್ಥಿಸಬೇಡಿರಿ. [ಸೂರಃ ಅಲ್-ಜಿನ್ನ್ 72:18]
ಮೂರನೆಯದಾಗಿ : ಯಾರು ಸಂದೇಶವಾಹಕರಿಗೆ ವಿಧೇಯರಾಗಿರುವರೋ ಮತ್ತು ಆರಾಧನೆಯಲ್ಲಿ ಅಲ್ಲಾಹನನ್ನು ಅನನ್ಯವಾಗಿಸುವರೋ, ಅರ್ಥಾತ್ ತೌಹೀದ್ (ಏಕದೇವತ್ವ)ನಲ್ಲಿರುವರೋ ಅವರು, ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸುವವರೊಂದಿಗೆ ಗೆಳೆತನವನ್ನಿರಿಕೊಳ್ಳುವುದು ಹಾಗು ಯಾವುದೇ ರೀತಿಯ ಮೈತ್ರಿಯನ್ನಿರಿಸಿಕೊಳ್ಳುವುದು ಇವು ಸಮ್ಮತಿಸಲ್ಪಟ್ಟಿಲ್ಲ. ಅವರು ತೀರಾ ನಿಕಟ ಸಂಬಂಧಿಗಳಾಗಿದ್ದರೂ ಸರಿಯೇ. ಅಲ್ಲಾಹ್, ಅತ್ಯುನ್ನತನ ಹೇಳಿಕೆಯೇ ಇದಕ್ಕೆ ಆಧಾರ:
“ಅಲ್ಲಾಹ್ ಮತ್ತು ಅಂತಿಮ ದಿನದಲ್ಲಿ ವಿಶ್ವಾಸವಿರಿಸುವವರು ಅಲ್ಲಾಹ್ ಮತ್ತು ಸಂದೇಶವಾಹಕರನ್ನು ವಿರೋಧಿಸುವವರನ್ನು, ಪ್ರೀತಿಸುವುದನ್ನು ನೀವು ಕಾಣಲಾರಿರಿ. ಅವರು ಅವರ ತಂದೆ ಅಥವಾ ಪುತ್ರರು ಅಥವಾ ಸಹೋದರರು ಅಥವಾ ಆಪ್ತ ಸಂಬಂಧಿಗಳಾಗಿದ್ದರೂ ಸರಿಯೇ. ವಾಸ್ತವದಲ್ಲಿ, ಅಂಥವರ ಹೃದಯಗಳಿಗೆ ಅಲ್ಲಾಹನು ಸತ್ಯವಿಶ್ವಾಸವನ್ನು ನಿಶ್ಚಯಗೊಳಿಸಿರುತ್ತಾನೆ ಮತ್ತು ತನ್ನ ನಿದರ್ಶನಗಳ, ಪ್ರಕಾಶದ ಹಾಗು ಮಾರ್ಗದರ್ಶನದ ಮೂಲಕ ಅವರನ್ನು ಬಲಪಡಿಸಿದ್ದಾನೆ ಮತ್ತು ಮರಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಅವರನ್ನು ಪ್ರವೇಶಗೊಳಿಸುವನು ಮತ್ತು ಅವರು ಅದರಲ್ಲಿ ಸದಾಕಾಲ ವಾಸಿಸುವರು. ಅಲ್ಲಾಹನು ಅವರಿಂದ ಸಂತುಷ್ಟಗೊಂಡಿರುವನು ಮತ್ತು ಅವರು ಅಲ್ಲಾಹನಿಂದ. ಅವರು ಅಲ್ಲಾಹನ ಪಕ್ಷದವರು, ನಿಜವಾಗಿಯೂ, ಅಲ್ಲಾಹನ ಪಕ್ಷದವರೇ ಸಫಲರಾಗುವರು”. [ಸೂರಃ ಅಲ್-ಮುಜಾದಲ: 58:22]
ಅರಿತುಕೊಳ್ಳಿ, ಅಲ್ಲಾಹನು ನಿಮ್ಮನ್ನು ಅವನ ಆಜ್ಞಾಪಾಲನೆಯೆಡೆಗೆ ದಾರಿತೋರಲಿ, ಅಂದರೆ ನೈಜ ಮತ್ತು ನೇರ ಧರ್ಮದೆಡೆಗೆ, ಇಬ್ರಾಹೀಂ(ಅ)ರ ದಾರಿಯೂ ಧರ್ಮವನ್ನು ಪರಿಶುದ್ಧವಾಗಿ ಮತ್ತು ಪ್ರಾಮಾಣಿಕವಾಗಿ ಅಲ್ಲಾಹನಿಗೆ ಮೀಸಲಿಡುವ ಮೂಲಕ ಕೇವಲ ಅವನನ್ನು ಆರಾಧಿಸುವುದಾಗಿರುವುದು. ಇದುವೇ ಅಲ್ಲಾಹನು ಎಲ್ಲ ಮಾನವರಿಗೂ ಆಜ್ಞಾಪಿಸಿರುವುದು ಮತ್ತು ಇದುವೇ ಅವನ ಸೃಷ್ಟಿಯ ಉದ್ದೇಶ.
ಅಲ್ಲಾಹ್, ಅತ್ಯುನ್ನತನು ಹೇಳುತ್ತಾನೆ :
“ನಾನು ಜಿನ್ನ್ಗಳನ್ನೂ ಮಾನವರನ್ನೂ ಸೃಷ್ಟಿಸಿರುವುದು ನನ್ನ ಆರಾಧನೆಗಾಗಿಯೇ ಹೊರತು ಇನ್ನಾವುದೇ ಉದ್ದೇಶದಿಂದಲ್ಲ.” [ಸೂರಃ ಅದ್ದಾರಿಯಾತ್ 51:56]
ಇಲ್ಲಿ ಆರಾಧನೆ(ಇಬಾದತ್) ಎಂಬುದರ ಅರ್ಥ ಎಲ್ಲ ಆರಾಧನೆಗಳಲ್ಲಿ ಅಲ್ಲಾಹನನ್ನು ಅನನ್ಯವಾಗಿಸುವುದು (ತೌಹೀದ್) ಮತ್ತು ಅಲ್ಲಾಹನು ಆಜ್ಞೆಯಿತ್ತಿರುವ ಎಲ್ಲ ಕರ್ಮಗಳಲ್ಲಿ ಅತಿ ಮಹತ್ತರವಾದುದೇ ತೌಹೀದ್, ಎಲ್ಲ ಆರಾಧನೆಗಳಲ್ಲಿ ಅಲ್ಲಾಹನನ್ನು ಅನನ್ಯವಾಗಿಸುವುದು. ಅವನು ನಿಷೇಧಿಸಿರುವುದರಲ್ಲಿ ಅತ್ಯಂತ ಗಂಭೀರವಾದುದು ಶಿರ್ಕ್. ಅರ್ಥಾತ್, ಅವನ ಹೊರತು ಅಥವಾ ಅವನೊಂದಿಗೆ ಇತರರನ್ನು ಪ್ರಾರ್ಥಿಸುವುದು. ಆಧಾರವೆಂದರೆ ಅಲ್ಲಾಹ್, ಅತ್ಯುನ್ನತನು ಹೇಳುತ್ತಾನೆ:
“ಸಕಲ ಆರಾಧನೆಯನ್ನೂ ಅಲ್ಲಾಹನಿಗೇ ಸೀಮಿತವಾಗಿರಿಸುತ್ತ ಕೇವಲ ಅವನನ್ನೇ ಆರಾಧಿಸಿರಿ ಮತ್ತು ಆರಾಧನೆಯಲ್ಲಿ ಅವನೊಂದಿಗೆ ಇನ್ನಾರನ್ನೂ ಸಹಭಾಗಿಗಳನ್ನಾಗಿಸದಿರಿ.’’ [ಸೂರಃ ಅನ್ನಿಸಾ 4:36]
ಆದ್ದರಿಂದ, ಯಾರಾದರೂ ನಿಮ್ಮನ್ನು ಕೇಳಿದರೆ, “ಮಾನವನು ಅರಿತಿರಬೇಕಾದ ಮೂರು ಮೂಲತತ್ವಗಳು ಯಾವುವು? ಎಂದು, ಹೇಳಿರಿ: “ತನ್ನ ಪ್ರಭುವಿನ ಬಗ್ಗೆ ಮತ್ತು ತನ್ನ ಧರ್ಮದ ಬಗ್ಗೆ ಮತ್ತು ಅವನ ಪೈಗಂಬರ್ ಮುಹಮ್ಮದ್(ಸ)ರ ಬಗ್ಗೆ ದಾಸನಲ್ಲಿರುವ ಜ್ಞಾನ’’ ಎಂದು.
ಮೊದಲನೆಯ ಮೂಲತತ್ವ:
“ನಿಮ್ಮ ಪ್ರಭು ಯಾರು?’’ ಎಂದು ನಿಮ್ಮನ್ನು ಪ್ರಶ್ನಿಸಲಾದರೆ, ಹೇಳಿರಿ:
“ನನ್ನ ಪ್ರಭುವು ಅಲ್ಲಾಹನು, ನನ್ನನ್ನು ಮತ್ತು ಎಲ್ಲ ಸೃಷ್ಟಿಗಳನ್ನೂ ತನ್ನ ದಯೆ ಮತ್ತು ಅನುಗ್ರಹಗಳಡಿಯಲ್ಲಿ ಪೋಷಿಸಿರುವವನು, ಅವನನ್ನೇ ನಾನು ಆರಾಧಿಸುವುದು ಮತ್ತು ಅವನ ಹೊರತು ಇನ್ನಾರನ್ನೂ ನಾನು ಆರಾಧಿಸುವುದಿಲ್ಲ’’ ಎಂದು ಇದಕ್ಕೆ ಆಧಾರವೆಂದರೆ, ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಸರ್ವಸ್ತುತಿಯೂ ಅಲ್ಲಾಹನಿಗೆ, ಅವನು ಸಕಲ ವಿಶ್ವದ ಪ್ರಭು.’’ [ಸೂರಃ ಫಾತಿಹಾ 1:1]
ಹಾಗೆಯೇ, ನಿಮ್ಮ ಪ್ರಭುವಿನ ಬಗೆಗಿನ ಜ್ಞಾನವು ನಿಮಗೆ ಹೇಗೆ ಲಭಿಸಿತು? ಎಂದು ಪ್ರಶ್ನಿಸಿದರೆ, ಅವನ ನಿದರ್ಶನಗಳು ಮತ್ತು ಅವನು ಸೃಷ್ಟಿಸಿರುವವುಗಳಿಂದ, ಮತ್ತು ರಾತ್ರಿ-ಹಗಲುಗಳು, ಸೂರ್ಯ ಹಾಗು ಚಂದ್ರ ಇವೆಲ್ಲವೂ ಅವನ ನಿದರ್ಶನಗಳೇ; ಮತ್ತು ಏಳು ಆಕಾಶಗಳು ಹಾಗು ಏಳು ಭೂಮಿಯನ್ನು ಹಾಗು ಅವುಗಳಲ್ಲಿರುವ ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ಸೃಷ್ಟಿಸಿರುವಂಥ ನಿದರ್ಶನಗಳಿಂದ” ಎಂದು ಹೇಳಿರಿ. ಆಧಾರವೆಂದರೆ ಅಲ್ಲಾಹ್ ಅತ್ಯುನ್ನತನ ಹೇಳಿಕೆ:
“ರಾತ್ರಿ ಮತ್ತು ಹಗಲು, ಸೂರ್ಯ ಮತ್ತು ಚಂದ್ರ ಅಲ್ಲಾಹನ ನಿದರ್ಶನಗಳಲ್ಲಾಗಿವೆ. ಸೂರ್ಯನಿಗಾಗಲಿ, ಚಂದ್ರನಿಗಾಗಲಿ, ಶರಣಾಗಬೇಡಿರಿ. ಆದರೆ ಅವುಗಳನ್ನು ಸೃಷ್ಟಿಸಿರುವ ಅಲ್ಲಾಹನಿಗೆ ಶರಣಾಗಿರಿ, ನೀವು ನಿಜವಾಗಿಯೂ ಅವನನ್ನೇ ಆರಾಧಿಸುವವರಾಗಿದ್ದರೆ.” [ಸೂರಃ ಪುಸ್ಸೀಲತ್ 41:37]
ಮತ್ತು ಅವನ ಹೇಳಿಕೆ :
“ನಿಮ್ಮ ಪ್ರಭುವು ಅಲ್ಲಾಹನು, ಆಕಾಶ ಮತ್ತು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿ, ತರುವಾಯ ಅರ್ಶ್ (ವಿಶ್ವಸಿಂಹಾಸನ)ವನ್ನೇರಿದವನು. ಅವನೇ ರಾತ್ರಿಯು ಹಗಲನ್ನು ಆವರ್ತಿಸುವಂತೆ ಮತ್ತು ಆತುರಾತುರದಲ್ಲಿ ಹಗಲೂ ಅದನ್ನು ಅನುವರ್ತಿಸುವಂತೆ ಮಾಡುವನು; ಮತ್ತು ಸೂರ್ಯ, ಚಂದ್ರ ಹಾಗು ನಕ್ಷತ್ರಗಳು ಅಲ್ಲಾಹನಿಗೇ ಅಧೀನವಾಗಿವೆ ಮತ್ತು ಅವನ ಆಜ್ಞೆಗೆ ಬದ್ಧವಾಗಿವೆ. ನಿಸ್ಸಂಶಯವಾಗಿ, ಸೃಷ್ಟಿ ಹಾಗು ಆಜ್ಞೆಗಳು ಕೇವಲ ಅವನದ್ದೇ ಆಗಿವೆ.” [ಸೂರಃ ಅಲ್-ಅರಾಫ್ 7:54]
ಯಾರನ್ನು ಆರಾಧಿಸಲ್ಪಡಲಾಗುವುದೋ ಅವನೇ ಪ್ರಭು. ಆಧಾರವೆಂದರೆ ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಓ ಜನರೇ, ಎಲ್ಲ ಆರಾಧನೆಗಳಲ್ಲೂ ನಿಮ್ಮ ಪ್ರಭುವನ್ನು ಅನನ್ಯವಾಗಿಸಿರಿ. ಅವನೇ ನಿಮ್ಮನ್ನು ಮತ್ತು ನಿಮ್ಮ ಪೂರ್ವಿಕರನ್ನು ಸೃಷ್ಟಿಸಿರುವನು. ತನ್ಮೂಲಕ ನೀವು ಅಲ್ಲಾಹನ ಕ್ರೋಧ ಮತ್ತು ಶಿಕ್ಷೆಯಿಂದ ಅಭಯ ಕೋರುವವರಲ್ಲಾಗಲೆಂದು ಮತ್ತು ಅಲ್ಲಾಹನು ಸಂತುಷ್ಟಗೊಂಡಿರುವವರಲ್ಲಾಗಲೆಂದು. ಅವನೇ ನಿಮಗೆ ಭೂಮಿಯನ್ನು ಹಾಸನ್ನಾಗಿ ಹಾಸಿದನು; ಆಕಾಶದ ಮೇಲ್ಛಾವಣಿಯನ್ನು ಮಾಡಿದನು ಮತ್ತು ಆಕಾಶದಿಂದ ಮಳೆಯನ್ನು ಸುರಿಸಿದನು ಮತ್ತು ಆ ಮೂಲಕ ತರತರದ ಬೆಳೆಗಳನ್ನು ಹಾಗು ಫಲಗಳನ್ನು ಭೂಮಿಯಿಂದ ಉತ್ಪಾದಿಸಿ ನಿಮಗೆ ಆಹಾರ ಒದಗಿಸಿದನು. ಆದ್ದರಿಂದ ನಿಮ್ಮ ಪ್ರಭುವು ಅಲ್ಲಾಹನ ಹೊರತು ಇನ್ನಾರೂ ಇಲ್ಲವೆಂಬುದನ್ನು ಅರಿತಿರುತ್ತ ಅವನೊಂದಿಗೆ ಇತರರನ್ನು ಪ್ರತಿಸ್ಪರ್ಧಿಗಳನ್ನಾಗಿಸದಿರಿ.” [ಸೂರಃ ಅಲ್-ಬಕರಃ 2:21-22]
ಇಬ್ನ್ ಕಸೀರ್, ರಹೀಮಉಲ್ಲಾಹ್, ಹೇಳುತ್ತಾರೆ: ಇವೆಲ್ಲವುಗಳ ಸೃಷ್ಟಿಕರ್ತನೇ ಆರಾಧನೆಗೆ ಅರ್ಹನು.” ಅಲ್ಲಾಹನು ಆಜ್ಞಾಪಿಸಿರುವ ಎಲ್ಲ ರೀತಿಯ ಆರಾಧನೆಗಳೂ, ಉದಾ: ಇಸ್ಲಾಮ್ (ಶರಣಾಗತಿ ಹಾಗು ಆಜ್ಞಾಪಾಲನೆ ಕೇವಲ ಅಲ್ಲಾಹನಿಗೆ), ಈಮಾನ್ (ಸತ್ಯವಿಶ್ವಾಸ-ಅಂತರಾತ್ಮದ ವಿಶ್ವಾಸ, ನಾಲಗೆಯ ಉಚ್ಛಾರ ಮತ್ತು ದೇಹದ ವರ್ತನೆ) ಮತ್ತು ಇಹ್ಸಾನ್ (ಆರಾದನೆಯಲ್ಲಿ ಸಮಗ್ರತೆ) ಮತ್ತು ಅದರಲ್ಲಿ ಪ್ರಾರ್ಥನೆ(ದುಆ), ಭಯ(ಖೌಫ್), ನಿರೀಕ್ಷೆ ಮತ್ತು ಹಾರೈಕೆ (ರಝಾ), ವಿಶ್ವಾಸ ಮತ್ತು ಭರವಸೆ (ತವಕ್ಕುಲ್), ಉತ್ಸುಕತೆ (ರಘ್ಬಾಹ್), ಭಯ-ಭಕ್ತಿ(ರಹ್ಬಾಹ್), ಪೂಜ್ಯಭಾವ ಹಾಗು ನಮೃತೆ(ಖುಶೂ), ಭಯಾದರ(ಖಶ್ಯಾಹ್), ಪಶ್ಚಾತ್ತಾಪಭಾವದೊಂದಿಗೆ ಮರಳುವುದು (ಇನಾಬಾಹ್), ನೆರವು ಹಾಗು ಸಹಾಯ (ಇಸ್ತಿಯಾನಾಹ್), ಅಭಯವನ್ನು ಯಾಚಿಸುವುದು (ಇಸ್ತಿಆದಃ), ವಿಮೋಚನೆ ಹಾಗು ರಕ್ಷಣೆಗಾಗಿ ಮೊರೆಯಿಡುವುದು (ಇಸ್ತಿಘಾಸ:), ಬಲಿದಾನ (ಝಬಾಹ್), ಪ್ರಮಾಣ(ನಝ್ರ್) ಮತ್ತು ಅಲ್ಲಾಹನು ಆಜ್ಞಾಪಿಸಿರುವ ಇನ್ನುಳಿದೆಲ್ಲ ರೀತಿಯ ಆರಾಧನೆಗಳು, ಎಲ್ಲವೂ ಏಕಮಾತ್ರವಾಗಿ ಅಲ್ಲಾಹ್, ಅತ್ಯುನ್ನತನಿಗಾಗಿಯೇ ಮಾಡತಕ್ಕದ್ದು. ಆಧಾರವೆಂದರೆ ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಮತ್ತು ಆರಾಧನಾ ಸ್ಥಳಗಳು ಕೇವಲ ಅಲ್ಲಾಹನಿಗೇ ಮೀಸಲು ಆದ್ದರಿಂದ ಅವರ ಹೊರತು ಇನ್ನಾರನ್ನೂ ಪ್ರಾರ್ಥಿಸದಿರಿ”. [ಸೂರಃ ಅಲ್-ಜಿನ್ನ್ 72:18]
ಯಾರಾದರೂ, ಇವುಗಳಲ್ಲಿ ಯಾವುದಾದರೊಂದನ್ನು ಅಲ್ಲಾಹನ ಹೊರತು ಇನ್ನಾರಿಗಾದರೂ ನಿರ್ದೆಶಿಸಿದರೆ ಅವನೇ ಮುಶ್ರಿಕ್ (ಸಹಭಾಗಿಯನ್ನಾಗಿಸಿದವನು) ಹಾಗು ಕಾಫಿರ್ (ಸತ್ಯನಿಷೇಧಿ) ಮತ್ತು ಇದಕ್ಕೆ ಆಧಾರವೆಂದರೆ, ಅಲ್ಲಾಹ್ ಅತ್ಯುನ್ನತನ ಹೇಳಿಕೆ:
“ಮತ್ತು ಯಾರಾದರೂ ಅಲ್ಲಾಹನ ಜೊತೆಗೆ ಆಧಾರ ಪ್ರಮಾಣಿಗಳಿಲ್ಲದ ಯಾವುದಾದರೂ ಆರಾಧ್ಯ ವಸ್ತುವನ್ನು ಆರಾಧಿಸಿದಲ್ಲಿ ಅವನ ಲೆಕ್ಕಾಚಾರವು ಅವನ ಪ್ರಭುವಿನ ಬಳಿಯಲ್ಲಿರುವುದು. ನಿಜವಾಗಿಯೂ, ಸತ್ಯನಿಷೇಧಿಗಳು ಎಂದಿಗೂ ಯಶಸ್ವೀಯಾಗಲಾರರು”. [ಸೂರಃ ಅಲ್-ಮೊಮಿನೂನ್ 23:117]
ಒಂದು ಹದೀಸ್ನಲ್ಲಿಯ ವರದಿಯಂತೆ: “ಪ್ರಾರ್ಥಿಸುವುದು ಆರಾಧನೆಯ ಜೀವಾಳವಾಗಿರುವುದು”. ಇದಕ್ಕೆ ಆಧಾರವೆಂದರೆ ಅಲ್ಲಾಹ್ ಅತ್ಯುನ್ನತನ ಹೇಳಿಕೆ:
“ನಿಮ್ಮ ಪ್ರಭು ಹೇಳುತ್ತಾನೆ : ಓ ಜನರೇ, ಪ್ರಾಮಾಣಿಕವಾಗಿ ನನ್ನನ್ನು ಮಾತ್ರ ಆರಾಧಿಸುವ ಮೂಲಕ ನನ್ನಿಂದ ಬೇಡಿರಿ ಮತ್ತು ನನ್ನನ್ನು ಪ್ರಾರ್ಥಿಸಿರಿ, ನಾನು ನಿಮ್ಮ ಪ್ರಾರ್ಥನೆಗಳಿಗೆ ಉತ್ತರಿಸುವೆನು ಮತ್ತು ನಿಮ್ಮನ್ನು ಕ್ಷಮಿಸುವೆನು ಮತ್ತು ನಿಮ್ಮ ಮೇಲೆ ಕರುಣೆಯಿರಿಸುವೆನು. ಖಂಡಿತವಾಗಿಯೂ ನನ್ನನ್ನು ಮಾತ್ರವಾಗಿ ಆರಾಧಿಸಲು ವಿಮುಖರಾಗುವವರು ಅಪಮಾನಿತರಾಗಿ ನರಕಾಗ್ನಿಯನ್ನು ಪ್ರವೇಶಿಸುವರು”. [ಸೂರಃ ಘಾಫಿರ್40:60]
ಭಯ ಪಡುವುದಕ್ಕೆ (ಖೌಫ್) ಆಧಾರವೆಂದರೆ ಅಲ್ಲಾಹ್ ಅತ್ಯುನ್ನತನ ಹೇಳಿಕೆ:
“ಆದ್ದರಿಂದ ಅವರನ್ನು ಭಯಪಡದಿರಿ, ನನ್ನನ್ನು ಭಯಪಡಿರಿ ಮತ್ತು ಎಚ್ಚರಿಕೆ! ನನ್ನ ಆಜ್ಞೆಯನ್ನು ಉಲ್ಲಂಘಿಸದಿರಿ, ನೀವು ಸತ್ಯವಿಶ್ವಾಸಿಗಳಾಗಿದ್ದರೆ.” [ಸೂರಃ ಆಲಿ-ಇಮ್ರಾನ್ 3:175]
ನಿರೀಕ್ಷೆ ಮತ್ತು ಹಾರೈಕೆ (ಅರ್-ರಝಾ) ಎಂಬುದಕ್ಕೆ ಆಧಾರವೆಂದರೆ, ಅಲ್ಲಾಹ್ ಅತ್ಯುನ್ನತನ ಹೇಳಿಕೆ:
“ಆದ್ದರಿಂದ ಅಲ್ಲಾಹನನ್ನು ಕಾಣುವ ಹಾಗು ಅವನಿಂದ ಪ್ರತಿಫಲವನ್ನು ಪಡೆಯುವ ನಿರೀಕ್ಷೆಯುಳ್ಳವನು ತನ್ನ ಆರಾಧನಾ ಕ್ರಮವನ್ನು ಸರಿಪಡಿಸಿಕೊಳ್ಳಲಿ ಮತ್ತು ಅದನ್ನು ಪರಿಶುದ್ಧವಾಗಿ ಹಾಗು ಪ್ರಾಮಾಣಿಕವಾಗಿ ಅವನಿಗೇ ಮೀಸಲಿರಿಸಲಿ ಮತ್ತು ಆರಾಧನೆಯಲ್ಲಿ ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿಸದಿರಲಿ”. [ಸೂರಃ ಅಲ್-ಕಹ್ಫ್ 18:110]
ವಿಶ್ವಾಸ ಹಾಗು ಭರವಸೆಗಳಿಗೆ ಆಧಾರ, ಅಲ್ಲಾಹ್ ಅತ್ಯುನ್ನತನ ಹೇಳಿಕೆ:
“ಮತ್ತು ಅಲ್ಲಾಹನಲ್ಲಿಯೇ ನಿಮ್ಮ ವಿಶ್ವಾಸ ಮತ್ತು ಭರವಸೆಯನ್ನಿಡಿರಿ, ನೀವು ಸತ್ಯವಿಶ್ವಾಸಿಗಳಾಗಿದ್ದರೆ”. [ಸೂರಃ ಅಲ್-ಮಾಇದಃ 5:23]
ಮತ್ತು ಅವನು ಹೇಳುತ್ತಾನೆ:
“ಯಾರು ಅಲ್ಲಾಹನಲ್ಲಿ ತನ್ನ ವಿಶ್ವಾಸ ಮತ್ತು ಭರವಸೆಯನ್ನಿಟ್ಟಿರುವನೋ ಆತನಿಗೆ ಅಲ್ಲಾಹನೇ ಸಾಕು”. [ಸೂರಃ ಅತ್-ತಲಾಕ್ 65:3]
ಉತ್ಸುಕತೆ (ಅರ್ ರಘ್ಬಾಹ್), ಭಯ-ಭಕ್ತಿ (ಅರ್ ರಹ್ಬಾಹ್), ಮತ್ತು ಪೂಜ್ಯಭಾವ ಹಾಗು ನಮ್ರತೆ (ಅಲ್-ಖುಶೂ)ಗಳಿಗೆ ಆಧಾರವೆಂದರೆ, ಅಲ್ಲಾಹ್ ಅತ್ಯುನ್ನತನ ಹೇಳಿಕೆ:
“ಅಲ್ಲಾಹನ ಧರ್ಮನಿಷ್ಠೆಯ ಮತ್ತು ಆಜ್ಞಾನುಸರಣೆಯ ಕಾರ್ಯಗಳನ್ನು ಮಾಡುವುದರಲ್ಲಿ ಅವರು ತ್ವರೆ ಮಾಡುತ್ತಿದ್ದರು. ಅವರು ಅಲ್ಲಾಹನನ್ನು ಪ್ರೀತಿ ಮತ್ತು ಆಶಾಭಾವದೊಂದಿಗೆ ಮತ್ತು ಭಯಭಕ್ತಿಯೊಂದಿಗೆ ಆರಾಧಿಸುತ್ತಿದ್ದರು ಮತ್ತು ಅಲ್ಲಾಹನೆದುರು ನಮ್ರತೆ ಹಾಗು ದೀನಭಾವವನ್ನು ತೋರುತ್ತಿದ್ದರು”. [ಸೂರಃ ಅಲ್-ಅಂಬಿಯಾ 21:90]
ಭಯಾದರ(ಅಲ್-ಖಶ್ಯಾಹ)ಕ್ಕೆ ಆಧಾರವೆಂದರೆ, ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಆದ್ದರಿಂದ ನೀವು ಅವರನ್ನು ಭಯಪಡಬೇಡಿರಿ, ನನ್ನನ್ನು ಭಯಪಡಿರಿ.” [ಸೂರಃ ಅಲ್-ಮಾಇದ 5:3]
ಪಶ್ಚಾತ್ತಾಪಭಾವದೊಂದಿಗೆ ಮರಳುವುದಕ್ಕೆ(ಅಲ್-ಇಬಾನಾಹ್) ಆಧಾರವೆಂದರೆ ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಆದ್ದರಿಂದ ಓ ಜನರೇ, ಪಶ್ಚಾತ್ತಾಪಭಾವದೊಂದಿಗೆ ಮತ್ತು ಆಜ್ಞಾನುಸಾರಕರಾಗಿ ನಿಮ್ಮ ಪ್ರಭುವಿನೆಡೆಗೆ ಮರಳಿರಿ ಮತ್ತು ವಿಧೇಯರಾಗಿ ಅವನಿಗೆ ಶರಣಾಗಿರಿ.” [ಸೂರಃ ಅಝ್ಝಮರ್ 39:54]
ನೆರವು ಹಾಗು ಸಹಾಯಕ್ಕೆ (ಅಲ್-ಇಸ್ತಿಆನಃ) ಆಧಾರವು ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಓ ಅಲ್ಲಾಹ್, ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ ಮತ್ತು ನಿನ್ನೋರ್ವನಲ್ಲೇ ಸಹಾಯವನ್ನು ಯಾಚಿಸುತ್ತೇವೆ.” [ಸೂರಃ ಫಾತಿಹಾ 1:5]
ಮತ್ತು ಹದೀಸ್ನಲ್ಲಿರುವಂತೆ, “ನೀವು ನೆರವು ಯಾಚಿಸುವುದಿದ್ದಲ್ಲಿ ಅಲ್ಲಾಹನ ನೆರವನ್ನು ಯಾಚಿಸಿರಿ.” [ವರದಿ-ಅತ್-ತಿರ್ಮಿದಿ ಮತ್ತು ಶೇಖ್ ಅಲ್-ಅಲ್ಬಾನಿ, ಅಲ್-ಮಿಶ್ಕಾತ್”(ನಂ.5302) ನಲ್ಲಿ “ಸಹೀಹ್” ಎಂದು ಪರಿಗಣಿಸಿದ್ದಾರೆ]
ಅಭಯವನ್ನು ಯಾಚಿಸುವುದರ (ಅಲ್-ಇಸ್ತಿಆದಃ) ಬಗ್ಗೆ ಆಧಾರವೆಂದರೆ, ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಹೇಳಿರಿ: ನಾನು ಮುಂಜಾವಿನ ಪ್ರಭುವಿನ ಅಭಯವನ್ನು ಯಾಚಿಸುತ್ತೇನೆ.” [ಸೂರಃ ಅಲ್-ಫಲಕ್ 113:1]
ಮತ್ತು “ಹೇಳಿರಿ: ನಾನು ಮಾನವರ ಪ್ರಭುವಿನ ಅಭಯವನ್ನು ಯಾಚಿಸುತ್ತೇನೆ.” [ಸೂರಃ ಅನ್-ನಾಸ್ 114:1]
ರಕ್ಷಣೆ ಮತ್ತು ವಿಮೋಚನೆಗಾಗಿ ಮೊರೆಯಿಡುವುದಕ್ಕೆ (ಅಲ್-ಇಸ್ತಿಘಾಸಃ) ಆಧಾರವೆಂದರೆ, ಅಲ್ಲಾಹ್ ಅತ್ಯುನ್ನತನ ಹೇಳಿಕೆ:
“ನೀವು ನಿಮ್ಮ ಪ್ರಭುವಿನೊಡನೆ ನೆರವಿಗಾಗಿ ಮತ್ತು ವಿಮೋಚನೆಗಾಗಿ ಮೊರೆಯಿಡುತ್ತಲಿದ್ದಿರಿ ಮತ್ತು ಅವನು ಅವುಗಳಿಗೆ ಉತ್ತರಿಸಿದನು”. [ಸೂರಃ ಅನ್-ಫಾಲ್ 8:9]
ಬಲಿದಾನಗಳಿಗೆ (ಅಝ್-ಝಬಾಹ್) ಆಧಾರವೆಂದರೆ ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಹೇಳಿರಿ [ಓ ಮುಹಮ್ಮದ(ಸ)] ಖಂಡಿತವಾಗಿಯೂ ನನ್ನ ಆರಾಧನಾ ವಿಧಿಗಳು, ನನ್ನ ಬಲಿದಾನ, ನನ್ನ ಜೀವನ ಮತ್ತು ನನ್ನ ಮರಣ ಎಲ್ಲವೂ ಪರಿಶುದ್ಧವಾಗಿ ಮತ್ತು ಏಕಮಾತ್ರವಾಗಿ ಸರ್ವಲೋಕಾಧಿಪತಿಯಾದ ಅಲ್ಲಾಹನಿಗೆ ಮೀಸಲು”. [ಸೂರಃ ಅಲ್-ಅನ್ಆಮ್ 6:162-163]
ಅಲ್ಲದೇ ಮುಹಮ್ಮದ್(ಸ) ಕೂಡ ಹೇಳಿರುವರು: “ಅಲ್ಲಾಹೇತರರಿಗೆ ಬಲಿಯನ್ನರ್ಪಿಸುವವನ ಮೇಲೆ ಅಲ್ಲಾಹನು ಶಾಪವಿತ್ತಿರುತ್ತಾನೆ”. [ವರದಿ: ಮುಸ್ಲಿಂ, ಇಂಗ್ಲೀಷ್ ಭಾಷಾಂತರ 3/1093-1094/ನಂ. 4876]
ಪ್ರಮಾಣ ಸ್ವೀಕರಿಸುವ (ಅನ್-ನಝ್ರ್) ಬಗ್ಗೆ ಆಧಾರವೆಂದರೆ ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಅವರು ತಮ್ಮ ಪ್ರಮಾಣವನ್ನು ಪೂರ್ತಿಕರಿಸುವರು ಮತ್ತು ಎಲ್ಲೆಡೆಗಳಲ್ಲೂ ಕೆಡುಕು ಹರಡಿರುವ ಆ ಸುಧೀರ್ಘ ದಿನವನ್ನು ಭಯಪಡುವರು”. [ಸೂರಃ ಅಲ್-ಇನ್ಸಾನ್ 76-7]
ಎರಡನೆಯ ಮೂಲತತ್ವ :
ಆಧಾರಸಹಿತವಾಗಿ ಇಸ್ಲಾಮ್ ಎಂಬ ಧರ್ಮ(ದೀನ್)ದ ಜ್ಞಾನ. ಅದುವೇ ತನ್ನನ್ನು ಅಲ್ಲಾಹನಿಗೆ, ತೌಹೀದ್ನೊಂದಿಗೆ (ಏಕದೇವತ್ವದೊಂದಿಗೆ) ಶರಣಾಗಿಸುವುದು ಮತ್ತು ವಿಧೇಯನಾಗಿ ಅವನ ವಶಕ್ಕೊಪ್ಪಿಸುವುದು ಮತ್ತು ಶಿರ್ಕ್ (ದೇವಸಹಭಾಗಿತ್ವ) ಹಾಗು ಶಿರ್ಕ್ನ ಜನರಿಂದ ತನ್ನನ್ನು ಮುಕ್ತವಾಗಿಸುವುದು ಹಾಗು ಶಿರ್ಕ್ನಿಂದ ಸಂಪರ್ಕವನ್ನು ಕಡಿದುಕೊಳ್ಳುವುದು ಮತ್ತು ಇದರಲ್ಲಿ ಮೂರು ಹಂತಗಳಿವೆ.
ಇಸ್ಲಾಂ (ಅಲ್ಲಾಹನಿಗೆ ಶರಣಾಗುವುದು ಮತ್ತು ಆಜ್ಞಾಪಾಲನೆ ಮಾಡುವುದು), ಈಮಾನ್ (ಸತ್ಯವಿಶ್ವಾಸ-ಅಂತರಾತ್ಮದ ವಿಶ್ವಾಸ, ನಾಲಗೆಯಿಂದ ಉಚ್ಛರಿಸುವುದು ಮತ್ತು ಅಂಗಾಂಗಗಳಿಂದ ವರ್ತಿಸುವುದು) ಮತ್ತು ಇಹ್ಸಾನ್ (ಆರಾಧನೆಯಲ್ಲಿ ಸಮಗ್ರತೆ). ಪ್ರತಿಯೊಂದು ಹಂತವೂ ತನ್ನದೇ ಆದ ಆಧಾರಸ್ತಂಭಗಳನ್ನು ಹೊಂದಿವೆ.
ಪ್ರಥಮ ಹಂತ : ಇಸ್ಲಾಮಿನ ಆಧಾರಸ್ತಂಭಗಳು ಐದು :
* ಅಲ್ಲಾಹನ ಹೊರತು ಆರಾಧನೆಗೆ ಯೋಗ್ಯರು ಯಾರೂ ಇಲ್ಲವೆಂದು ಮತ್ತು ಮುಹಮ್ಮದ(ಸ) ಅಲ್ಲಾಹನ
ಸಂದೇಶವಾಹಕರೆಂದು ಪ್ರಮಾಣೀಕರಿಸುವುದು.
* ನಮಾಝ್ ಸಂಸ್ಥಾಪಿಸುವುದು.
* ರಮಝಾನ್ ಉಪವಾಸವೃತ ಆಚರಿಸುವುದು.
* ಅಲ್ಲಾಹನ ಪವಿತ್ರಭವನಕ್ಕೆ ಹಜ್ಜ್ ಯಾತ್ರೆ ಕೈಗೊಳ್ಳುವುದು.
ಪ್ರಮಾಣೀಕರಿಸಲು ಆಧಾರವೆಂದರೆ ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಅಲ್ಲಾಹನು ಸಾಕ್ಷ್ಯವಹಿಸುತ್ತಾನೆ, ಅವನ ಹೊರತು ಆರಾಧನೆಗೆ ಅರ್ಹರು ಇನ್ನಾರೂ ಇಲ್ಲವೆಂದು. ಅಂತೆಯೇ ದೇವದೂತರೂ ಹಾಗು ಜ್ಞಾನವಂತರೂ ಕೂಡ ಸಾಕ್ಷ್ಯವಹಿಸುತ್ತಾರೆ. ಅವನು ನ್ಯಾಯ ಪರಿಪಾಲಕನು. ಅವನ ಹೊರತು ಇನ್ನಾರೂ ಆರಾಧನೆಗೆ ಅರ್ಹರಿರುವುದಿಲ್ಲ. ಅವನು ಸರ್ವಶ್ರೇಷ್ಠನೂ, ಯುಕ್ತಿಪೂರ್ಣನೂ ಆಗಿರುವನು”. [ಸೂರಃ ಆಲಿ-ಇಮ್ರಾನ್ 3:18]
ಇದರ ಅರ್ಥವೇನೆಂದರೆ, ‘ಅಲ್ಲಾಹನ ಹೊರತು ಇನ್ನಾರೂ ಆರಾಧನೆಗೆ ಅರ್ಹರಿಲ್ಲ’: “ಲಾ ಇಲಾಹ (ಆರಾಧನೆಗೆ ಅರ್ಹವು ಯಾವುದೂ ಇಲ್ಲ) ಮತ್ತು ಇಲ್ಲಲ್ಲಾಹ (ಅಲ್ಲಾಹನ ಹೊರತು)” ಎಂಬುದು ಕೇವಲ ಅಲ್ಲಾಹನನ್ನು ಆರಾಧಿಸುವುದನ್ನು ದೃಢಪಡಿಸುತ್ತದೆ, ಮತ್ತು ಅವನ ಆಳ್ವಿಕೆ ಹಾಗು ಅಧಿಪತ್ಯದಲ್ಲಿ ಇನ್ನಾರಿಗೂ ಯಾವುದೇ ಪಾಲನ್ನೂ ನೀಡಕೂಡದು.
ಇದರ ಅರ್ಥವಿವರಣೆಯು ಅಲ್ಲಾಹ್, ಅತ್ಯುನ್ನತನ ಹೇಳಿಕೆಯೊಂದಿಗೆ ಸ್ಪಷ್ಟವಾಗುವುದು:
“ಮತ್ತು ಇಬ್ರಾಹೀಮರು ತನ್ನ ತಂದೆಯೊಡನೆ ಹಾಗು ತನ್ನ ಜನಾಂಗದೊಡನೆ, ‘ನಾನು ನನ್ನನ್ನು ಸೃಷ್ಟಿಸಿದವನ ಹೊರತು ನೀವು ಆರಾಧಿಸುತ್ತಿರುವ ಎಲ್ಲದರಿಂದಲೂ ಸಂಪೂರ್ಣ ಮುಕ್ತನಾಗಿರುವೆನು. ಅವನೇ ನನಗೆ ನೈಜಧರ್ಮದೆಡೆಗೆ ಹಾಗು ಸತ್ಪಥದೆಡೆಗೆ ಮಾರ್ಗದರ್ಶನವನ್ನೀಯುವನು’. ಎಂದು ಹೇಳಿದ್ದ ಸಂದರ್ಭವನ್ನು ಸ್ಮರಿಸಿರಿ ಮತ್ತು ಅಲ್ಲಾಹನು, “ಅಲ್ಲಾಹನ ಹೊರತು ಇನ್ನಾರೂ ಆರಾಧನೆಗೆ ಅರ್ಹರಿಲ್ಲ” ಎಂಬ ಹೇಳಿಕೆಯನ್ನು ಇಬ್ರಾಹೀಮರ ಸಂತತಿಗಳಲ್ಲಿ ಜೀವಂತವಾಗಿರಿಸಿದನು. ತನ್ಮೂಲಕ ಅವರು ಸ್ಮರಿಸಲೆಂದು ಹಾಗು ತಮ್ಮ ಪ್ರಭುವಿನ ಆಜ್ಞಾನುಸರಣೆಯೆಡೆಗೆ ಮರಳಲೆಂದು ಹಾಗು ಅವನನ್ನು ಮಾತ್ರ ಆರಾಧಿಸಲೆಂದು ಹಾಗು ತಮ್ಮ ಸತ್ಯನಿಷೇಧ ನೀತಿ ಹಾಗು ಪಾಪದ ಬಗ್ಗೆ ಪಶ್ಚಾತ್ತಾಪ ಪಡಲೆಂದು”. [ಸೂರಃ ಅಝ್-ಝುಖ್ರುಫ್ 43:26-28]
ಮತ್ತು ಅವನ ಹೇಳಿಕೆ:
“ಹೇಳಿರಿ: ಓ ಗ್ರಂಥದ ಜನರೇ, ನಮ್ಮ ನಿಮ್ಮ ನಡುವಿನ ನ್ಯಾಯಪೂರಿತ ಪದಗಳೆಡೆಗೆ ಬನ್ನಿರಿ. ಅವುಗಳೆಂದರೆ, ಎಲ್ಲ ಆರಾಧನೆಗಳಲ್ಲಿ ನಾವು ಅಲ್ಲಾಹನನ್ನು ಅನನ್ಯವಾಗಿಸುತ್ತೇವೆ ಮತ್ತು ಅವನ ಹೊರತು ಇನ್ನೇನನ್ನೂ ಆರಾಧಿಸೆವು ಮತ್ತು ಅವನ ಹೊರತು ಆರಾಧಿಸಲ್ಪಡುವಂಥ ಎಲ್ಲವುಗಳಿಂದ ನಾವು ಮುಕ್ತರಾಗಿರುವೆವು ಮತ್ತು ಅಲ್ಲಾಹನಿಗೆ ಅವಿಧೇಯತೆಯನ್ನು ತೋರುವ ಕಾರ್ಯದಲ್ಲಿ ಒಬ್ಬರನ್ನೊಬ್ಬರು ಅನುಸರಿಸುವತ್ತ ಅಲ್ಲಾಹನ ಹೊರತು ಅನ್ಯರನ್ನು ತಮ್ಮ ಪ್ರಭುವಾಗಿಸುವುದನ್ನು ನಾವು ಸ್ವೀಕರಿಸೆವು ಎಂಬುದರಲ್ಲಿ. ಆದರೆ ಇದರಿಂದ ಅವರ ಹಿಂಜರಿದರೆ, ಹೇಳಿರಿ: ನಾವು ಮುಸ್ಲಿಮರು ಎಂದು ಸಾಕ್ಷ್ಯವಹಿಸುತ್ತೇವೆ, ಅಲ್ಲಾಹನಿಗೆ ಶರಣಾಗುವವರು ಮತ್ತು ನಮ್ಮ ಆರಾಧನೆಯನ್ನು ಪರಿಶುದ್ಧವಾಗಿ ಹಾಗು ಪ್ರಾಮಾಣಿಕವಾಗಿ ಅವನಿಗೇ ಮೀಸಲಿರಿಸುವವರು ಹಾಗು ಅವನ ಹೊರತು ಇನ್ನೇನನ್ನೂ ಆರಾಧಿಸುವವರಲ್ಲ ಎಂದು.” [ಸೂರಃ ಆಲಿ-ಇಮ್ರಾನ್ 3:64]
ಮುಹಮ್ಮದ(ಸ) ಅಲ್ಲಾಹನ ಸಂದೇಶವಾಹಕರೆಂದು ಪ್ರಮಾಣೀಕರಿಸಲು ಆಧಾರವೆಂದರೆ ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ನಿಜವಾಗಿಯೂ ಅಲ್ಲಾಹನ ಸಂದೇಶವಾಹಕರು ನಿಮ್ಮಿಂದಲೇ ಮತ್ತು ನಿಮ್ಮ ಪರಿಚಯದವರಿಂದಲೇ ಬಂದಿರುವರು. ನೀವು ನಷ್ಟಹೊಂದುವುದು ಅವರನ್ನು ಘಾಸಿಗೊಳಿಸುತ್ತದೆ. ಅವರು ನಿಮ್ಮಲ್ಲಿ ದಾರಿತಪ್ಪಿದವರ ಮಾರ್ಗದರ್ಶನಕ್ಕಾಗಿ ಹಂಬಲಿಸುವವರೂ ಹಾಗು ತವಕ ಪಡುವವರೂ ಆಗಿರುವರು ಮತ್ತು ಆ ಮೂಲಕ ಅವರು ಪಶ್ಚಾತ್ತಾಪ ಪಟ್ಟು ಸತ್ಯದೆಡೆಗೆ ಮರಳಲೆಂದು ಮತ್ತು ಅವರು(ಸ) ಸತ್ಯವಿಶ್ವಾಸಿಗಳಿಗೆ ವತ್ಸಲರೂ ಹಾಗು ಕರುಣಾಳುವೂ ಆಗಿರುವರು.” [ಸೂರಃ ಅತ್-ತೌಬಃ 9:128]
ಮುಹಮ್ಮದ(ಸ) ಅಲ್ಲಾಹನ ಸಂದೇಶವಾಹಕರೆಂದು ಪ್ರಮಾಣೀಕರಿಸುವುದರ ಅರ್ಥ:
ಅವರು ಏನೇ ಆದೇಶ ನೀಡಿದರೂ ಅದನ್ನು ಪಾಲಿಸುವುದು; ಅವರು ತಿಳಿಸಿರುವ ಎಲ್ಲವುಗಳ ಮೇಲೆ ವಿಶ್ವಸವಿರಿಸುವುದು ಮತ್ತು ಅವುಗಳ ಸತ್ಯತೆಯನ್ನು ಪ್ರಮಾಣೀಕರಿಸುವುದು; ಅವರು ವಿರೋಧಿಸಿರುವ ಮತ್ತು ನಿಷೇಧಿಸಿರುವ ಎಲ್ಲವನ್ನೂ ತ್ಯಜಿಸುವುದು; ಮತ್ತು ಅವರು ಸೂಚಿಸಿರುವ ರೀತಿಯಲ್ಲಿ ಕೇವಲ ಅಲ್ಲಾಹನನ್ನು ಆರಾಧಿಸುವುದು.
ಆರಾಧನೆ(ಅಸ್-ಸಲಾತ್) ಮತ್ತು ಝಕಾತ್ ಮತ್ತು ತೌಹೀದ್ನ ವಿವರಣೆಗಳಿಗೆ ಆಧಾರವೆಂದರೆ, ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಅವರು ಕೇವಲ ಅಲ್ಲಾಹನನ್ನೇ ಆರಾಧಿಸಬೇಕು, ಅವರ ಆರಾಧನೆ ಮತ್ತು ಆಜ್ಞಾಪಾಲನೆ ಪರಿಶುದ್ಧವಾಗಿ ಅವನಿಗೇ ಮೀಸಲಿರಬೇಕು, ನೈಜ್ಯಧರ್ಮದಲ್ಲಿರಬೇಕು ಮತ್ತು ಶಿರ್ಕ್ನಿಂದ ಮುಕ್ತವಾಗಿರಬೇಕು ಮತ್ತು ಅವರು ನಮಾಝನ್ನು ಸಂಸ್ಧಾಪಿಸಬೇಕು ಮತ್ತು ಝಕಾತ ನೀಡಬೇಕು-ಎಂಬುದರ ಹೊರತು ಇನ್ನೇನನ್ನೂ ಆಜ್ಞಾಪಿಸಲಾಗಿರಲಿಲ್ಲ ಮತ್ತು ಅದುವೆ ನೇರ ಮತ್ತು ನೈಜಧರ್ಮ.” [ಸೂರಃ ಅಲ್-ಬಯ್ಯಿನಃ 98:5]
ಉಪವಾಸ ವೃತದ (ಸಿಯಾಮ್) ಬಗ್ಗೆ ಆಧಾರವೆಂದರೆ ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಓ ಸತ್ಯವಿಶ್ವಾಸಿಗಳೇ, ನಿಮಗೂ ಮುಂಚೆ ಗತಿಸಿಹೋದ ಜನಗಳಿಗೆ ಕಡ್ಡಾಯಗೊಳಿಸಿದ್ದಂತೆ ಉಪವಾಸವೃತವನ್ನು ನಿಮ್ಮ ಮೇಲೂ ಕಡ್ಡಾಯಗೊಳಿಸಲಾಗಿದೆ, ತನ್ಮೂಲಕ ನೀವು ತಕ್ವಾ(ಅಲ್ಲಾಹನ ಆಜ್ಞಾಪಾಲನೆ ಹಾಗು ಅವನು ನಿಷೇಧಿಸಿರುವುದನ್ನು ತ್ಯಜಿಸಿವುದು) ಸಾಧಿಸಲೆಂದು.” [ಸೂರಃ ಅಲ್-ಬಕರಃ 2:183]
ಹಜ್ಜ್ನ ಬಗ್ಗೆ ಆಧಾರವು ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಸಾಧ್ಯವಿರುವವರಿಗೆ ಅಲ್ಲಾಹನು ಪವಿತ್ರಭವನದ ಹಜ್ಜ್ ಯಾತ್ರೆಯನ್ನು ಕಡ್ಡಾಯಗೊಳಿಸಲಾಗಿದೆ ಮತ್ತು ಯಾರಾದರೂ ಅಲ್ಲಾಹನ ಭವನಕ್ಕೆ ಕಡ್ಡಾಯವಾದ ಹಜ್ಜ್ ಯಾತ್ರೆಯನ್ನು ತಿರಸ್ಕರಿಸಿದಲ್ಲಿ ಹಾಗು ನಿರಾಕರಿಸಿದಲ್ಲಿ ಅಲ್ಲಾಹನಿಗೆ ಅವನ ಅಥವಾ ಯಾವುದೇ ಸೃಷ್ಟಿಯ ಅಗತ್ಯವೂ ಇರುವುದಿಲ.್ಲ” [ಸೂರಃ ಆಲಿ-ಇಮ್ರಾನ್ 3:97]
ಎರಡನೆಯ ಹಂತ: ಈಮಾನ್
ಈಮಾನ್- ಇದರಲ್ಲಿ ಎಪ್ಪತ್ತಕ್ಕೂ ಅಧಿಕ ಶಾಖೆಗಳಿವೆ, ಅವುಗಳಲ್ಲಿ ಶ್ರೇಷ್ಠವಾಗಿರುವುದು “ಅಲ್ಲಾಹನ ಹೊರತು ಆರಾಧನೆಗೆ ಅರ್ಹರು ಯಾರು ಇಲ್ಲ” (ಲಾ ಇಲಾಹ ಇಲ್ಲಲ್ಲಾಹ) ಎಂಬುದು ಮತ್ತು ಕೊನೆಯಲ್ಲಿರುವುದು ಮಾರ್ಗ ಮಧ್ಯೆ ಇರುವ ಉಪದ್ರವಕಾರಿ ವಸ್ತುಗಳನ್ನು ತೆಗೆದುಹಾಕುವುದು, ಮತ್ತು ಲಜ್ಜಾಭಾವನೆಯೂ (ಅಲ್-ಹಯಾ) ಈಮಾನಿನ ಒಂದು ಶಾಖೆಯಾಗಿರುವುದು. ಇದರ ಆಧಾರಸ್ತಂಭಗಳು ಆರು: ಸತ್ಯನಿಷ್ಠೆಯಿಂದ ಅಲ್ಲಾಹನಲ್ಲಿ ವಿಶ್ವಾಸವಿಡುವುದು, ಆತನ ದೇವದೂತರಲ್ಲಿ, ಆತನ ಗ್ರಂಥಗಳಲ್ಲಿ, ಆತನ ಸಂದೇಶವಾಹಕರಲ್ಲಿ, ಅಂತಿಮದಿನದಲ್ಲಿ ಮತ್ತು ಆಗುವುದೆಲ್ಲವೂ, ಒಳ್ಳೆಯದಾಗಲಿ ಅಥವಾ ಕೆಟ್ಟದ್ದಾಗಲಿ, ವಿಧಿಲಿಖಿತದಂತೆ(ಅಲ್-ಕದ್ರ್) ಎಂದು ಸತ್ಯನಿಷ್ಠೆಯಿಂದ ವಿಶ್ವಾಸವಿರಿಸುವುದು. ಈ ಆರು ಆಧಾರಸ್ತಂಭಗಳಿಗೆ ಆಧಾರವೆಂದರೆ, ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ನಿಮ್ಮ ಮುಖವನ್ನು ಪೂರ್ವದಿಕ್ಕಿಗೋ ಅಥವಾ ಪಶ್ಚಿಮ ದಿಕ್ಕಿಗೋ ತಿರುಗಿಸಿಕೊಳ್ಳುವುದು ದರ್ಮಶೀಲತೆಯಲ್ಲ, ಬದಲಾಗಿ ಧರ್ಮಶೀಲತೆಯು ಅಲ್ಲಾಹನಲ್ಲಿ ಮತ್ತು ಅಂತಿಮದಿನದಲ್ಲಿ ಮತ್ತು ದೇವದೂತರಲ್ಲಿ ಮತ್ತು ಗ್ರಂಥಗಳಲ್ಲಿ ಮತ್ತು ಸಂದೇಶವಾಹಕರಲ್ಲಿ ಸತ್ಯನಿಷ್ಠೆಯಿಂದ ವಿಶ್ವಾಸವಿಡುವವನ ಧರ್ಮಶೀಲತೆಯಾಗಿರುತ್ತದೆ.” [ಸೂರಃ ಅಲ್-ಬಕರಃ 2:177]
ವಿಧಿಲಿಖಿತದ ಬಗ್ಗೆ ಆಧಾರವು, ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ನಾವು ಎಲ್ಲವನ್ನೂ ಒಂದು ವಿಧಿನಿಯಮಕ್ಕನುಸಾರವಾಗಿ ಸೃಷ್ಠಿಸಿರುವೆವು.” [ಸೂರಃ ಅಲ್-ಕಮರ್ 54:49]
ಮೂರನೆಯ ಹಂತ: ಅಲ್-ಇಹ್ಸಾನ್ (ಪರಿಪಕ್ವತೆಯೊಂದಿಗೆ ಪೂರೈಸುವುದು)
ಇದರಲ್ಲಿ ಏಕೈಕ ಆಧಾರಸ್ತಂಭವಿರುವುದು. ಅದೆಂದರೆ: ನೀವು ಅಲ್ಲಾಹನನ್ನು ಕಾಣುತ್ತಿರುವಿರೋ ಎಂಬಂತೆ ಆರಾಧಿಸಿರಿ, ನೀವು ಅವನನ್ನು ಕಾಣದೇ ಇದ್ದರೂ ವಾಸ್ತವದಲ್ಲಿ ಅವನು ನಿಮ್ಮನ್ನು ಕಾಣುವನು, ಆಧಾರವು ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಅವನನ್ನು ಭಯಪಡುವದರೊಂದಿಗೆ ಮತ್ತು ಅವನು ನಿಷೇಧಿಸಿರುವವುಗಳಿಂದ ದೂರವಿರುವವರೊಂದಿಗೆ ಅಲ್ಲಾಹನು ಇರುವನು ಮತ್ತು ಇಹ್ಸಾನ ಪಾಲಿಸುವವರು ಅಲ್ಲಾಹನು ಕಡ್ಡಾಯಗೊಳಿಸಿರುವವುಗಳನ್ನು ಪಾಲಿಸುವಲ್ಲಿ, ಅಲ್ಲಾಹನ ಹಕ್ಕುಗಳನ್ನು ಜವಾಬ್ದಾರಿಯುತವಾಗಿ ಪೂರೈಸುವಲ್ಲಿ ಮತ್ತು ಅವನ ಆಜ್ಞಾಪಾಲನೆಯಲ್ಲಿ ಸ್ಥಿರವಾಗಿರುವುದರಲ್ಲಿ, ಯಾರು ಉತ್ತಮನೋ ಅಲ್ಲಾಹನು ಅವನಿಗೆ ಸಹಕರಿಸುವನು. ಮಾರ್ಗದರ್ಶನ-ವನ್ನೀಯುವನು ಮತ್ತು ಸಹಾಯ ಒದಗಿಸುವನು.” [ಸೂರಃ ಅನ್-ನಹ್ಲ್ 16:128]
ಮತ್ತು ಅವನ ಹೇಳಿಕೆ:
“ಓ ಮುಹಮ್ಮದ್(ಸ), ಸರ್ವಶಕ್ತನಲ್ಲಿ, ಕರುಣೆಗಳನ್ನು ಅನುಗ್ರಹಿಸುವವನಲ್ಲಿ ಭರವಸೆಯನ್ನಿಡಿರಿ. ನೀವು ಆರಾಧನೆಯಲ್ಲಿ ಸ್ಥಿರರಾದಾಗ ಅವನು ನಿಮ್ಮನ್ನು ನೋಡುತ್ತಲಿರುವನು ಮತ್ತು ಆರಾಧನೆಯಲ್ಲಿ ನೀವು ನಿಂತಾಗ, ಬಾಗಿದಾಗ, ಸಾಷ್ಠಾಂಗವೆರಗಿದಾಗ ಹಾಗು ಕುಳಿತಾಗ ನಿಮ್ಮನ್ನು ಅನುಸರಿಸುವವರೊಂದಿಗೆ ಅವನು ನಿಮ್ಮ ಚಲನವಲನಗಳನ್ನು ವೀಕ್ಷಿಸುತ್ತಿರುವನು. ನೀವು ಆರಾಧನೆಯಲ್ಲಿ ಪಠಿಸುವುದನ್ನು ಹಾಗು ಪ್ರಸ್ತಾಪಿಸುವುದನ್ನೆಲ್ಲಾ ಅವನು ಆಲಿಸುವನು. ಹಾಗು ಆರಾಧನೆಯಲ್ಲಿ ನೀವು ಮತ್ತು ನಿಮ್ಮನ್ನು ಅನುಸರಿಸುವವರು ಮಾಡುವುದನ್ನೆಲ್ಲಾ ಅವನು ಅರಿಯುವನು. ಆದ್ದರಿಂದ ಆರಾಧನೆಯಲ್ಲಿ ಕುರ್ಆನನ್ನು ಪಠಿಸಿರಿ ಮತ್ತು ಅದನ್ನು ಯಥಾರ್ಥವಾಗಿ ನಿರ್ವಹಿಸಿರಿ. ಏಕೆಂದರೆ ನಿಮ್ಮ ಪ್ರಭುವು ನಿಮ್ಮನ್ನು ಕಾಣುತ್ತಿರುವನು ಮತ್ತು ಕೇಳುತ್ತಿರುವನು.” [ಸೂರಃ ಅಶ್ಯುಅರಾ 26:217-220]
ಮತ್ತು ಅವನ ಹೇಳಿಕೆ:
“ಓ ಮುಹಮ್ಮದ್(ಸ), ನೀವು ತೊಡಗಿಸಿಕೊಂಡಿರುವ ವಿಷಯ, ನೀವು ಅಲ್ಲಾಹನ ಗ್ರಂಥವನ್ನು ಪಠಿಸುತ್ತಿರುವುದು ಓ ಜನರೇ – ನೀವು ಮಾಡುತ್ತಿರುವದೆಲ್ಲವೂ, ಅದು ಕೆಟ್ಟದ್ದಾಗಿರಲಿ ಅಥವಾ ಒಳ್ಳೆಯದಾಗಿರಲಿ,
ನೀವು ನಿಮ್ಮ ಕೆಲಸ-ಕಾರ್ಯಗಳನ್ನು ಮಾಡುತ್ತಿರುವುದೆಲ್ಲವೂ ನಮ್ಮ ವೀಕ್ಷಣೆಯಲ್ಲಿ/ರದೇ ಇಲ್ಲ.” [ಸೂರಃ ಯೂನುಸ್ 10:61]
ಸುನ್ನಾಃ (ಪ್ರವಾದಿಚರ್ಯೆ)ಗೆ ಆಧಾರವೆಂದರೆ, ಜಿಬ್ರಾಈಲ್(ಅ)ರ ಪ್ರಸಿದ್ಧ ಹದೀಸ್, ಉಮರ್ (ರದಿಯಲ್ಲಾಹುಅನ್ಹು)ರಿಂದ ವರದಿ, ಅವರು ಹೇಳಿದರು: “ಒಮ್ಮೆ ನಾವು ಅಲ್ಲಾಹನ ಸಂದೇಶವಾಹಕ (ಸಲ್ಲಲ್ಲಾಹು ಅಲೈಹಿವಸಲ್ಲಂ)ರ ಉಪಸ್ಥಿತಿಯಲ್ಲಿ ಕುಳಿತಿದ್ದಾಗ ಬೆಳ್ಳನೆಯ ಬಟ್ಟೆ ಧರಿಸಿದ್ದು, ಅತಿ ಕಪ್ಪು ಕೂದಲಿನೊಂದಿಗೆ ಒಬ್ಬ ವ್ಯಕ್ತಿಯು ಹಾಜರಾದನು. ಅವನಲ್ಲಿ ಪ್ರಯಾಣಿಸಿರುವ ಯಾವೊಂದು ಲಕ್ಷಣವೂ ಕಾಣುತ್ತಿರಲಿಲ್ಲ ಮತ್ತು ನಮ್ಮಲ್ಲಿ ಯಾರೂ ಅವನನ್ನು ಪರಿಚಯಿಸುತ್ತಿರಲೂ ಇಲ್ಲ. ಹೀಗೆ, ಅವನು ಬಂದು ಪ್ರವಾದಿ(ಸ)ರ ಬಳಿ ಕೆಳಗೆ ಕುಳಿತುಕೊಂಡನು ಮತ್ತು ತನ್ನ ಮೊಣಕಾಲನ್ನು ಅವರ ಮೊಣಕಾಲಿಗೆ ಎದುರಾಗಿರಿಸಿದನು ಮತ್ತು ತನ್ನ ಹಸ್ತವನ್ನು ಅವರ ತೊಡೆಯ ಮೇಲಿರಿಸಿದನು ಮತ್ತು ಹೇಳಿದನು. “ ಓ ಮುಹಮ್ಮದ್, ನನಗೆ ಇಸ್ಲಾಮಿನ ಬಗ್ಗೆ ತಿಳಿಸಿರಿ” ಅದಕ್ಕೆ ಅಲ್ಲಾಹನ ಸಂದೇಶವಾಹಕ(ಸ) ಹೇಳಿದರು: “ಇಸ್ಲಾಮ್ ಎಂದರೆ, ನೀವು ಅಲ್ಲಾಹನ ಹೊರತು ಅನ್ಯರಾರೂ ಆರಾಧನೆಗೆ ಯೋಗ್ಯರಿಲ್ಲವೆಂದು ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರೆಂದು ಪ್ರಮಾಣೀಕರಿಸುವುದು; ನಮಾಝನ್ನು ಸಂಸ್ಥಾಪಿಸುವುದು; ಝಕಾತ್ ನೀಡುವುದು, ರಮಝಾನ್ ಉಪವಾಸವಿರುವುದು, ಹಾಗು ನೀವು ಶಕ್ತರಿದ್ದಲ್ಲಿ ಪವಿತ್ರ ಕಾಬಾ ಭವನಕ್ಕೆ ಹಜ್ಜ್ ಯಾತ್ರೆಯನ್ನು ನಿರ್ವಹಿಸುವುದು”. ಅವನು ಹೇಳಿದನು, “ನೀವು ಸತ್ಯವನ್ನೇ ನುಡಿದಿರಿ”. ಅವನು ಸ್ವತಃ ಪ್ರಶ್ನೆಯನ್ನೂ ಕೇಳುವನು ಮತ್ತು ನಂತರ ನೀವು ಸತ್ಯವನ್ನೇ ನುಡಿದಿರಿ, ಎಂದೂ ಹೇಳುವುದನ್ನು ಕಂಡು ನಾವು ಚಕಿತರಾದೆವು. ಅವನು ಹೇಳಿದನು, “ಈಗ ಈಮಾನ್ ಬಗ್ಗೆ ನನಗೆ ತಿಳಿಸಿರಿ”. ಅವರು(ಸ) ಹೇಳಿದರು : “ಅದೆಂದರೆ ನೀವು ನಿಜವಾಗಿಯೂ ಅಲ್ಲಾಹನಲ್ಲಿ, ಅವನ ದೇವಚರರಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರಲ್ಲಿ, ಅಂತಿಮ ದಿನದಲ್ಲಿ ಮತ್ತು ಆಗುವುದೆಲ್ಲವೂ, ಒಳ್ಳೆಯದಾಗಲಿ ಅಥವಾ ಕೆಟ್ಟದ್ದಾಗಲಿ, ವಿಧಿನಿಯಮದಂತೆಯೇ ಎಂದು ನಿಷ್ಠೆಯಿಂದ ವಿಶ್ವಾಸವಿರಿಸುವುದು.”
ಅವನು ಹೇಳಿದನು, “ನೀವು ಸತ್ಯವನ್ನೇ ನುಡಿದಿರಿ”. ಅವನು ಹೇಳಿದನು, “ಈಗ ನನಗೆ ಇಹ್ಸಾನ್ ಬಗ್ಗೆ ತಿಳಿಸಿರಿ”. ಅವರು(ಸ) ಹೇಳಿದರು : “ಅದೆಂದರೆ, ನೀವು ಅಲ್ಲಾಹನನ್ನು ಕಾಣುತ್ತಿರುವಿರಿ ಎಂಬಂತೆ ಅವನನ್ನು ಆರಾಧಿಸಿರಿ ಮತ್ತು ನೀವು ಅವನನ್ನು ಕಾಣದಿದ್ದರೂ ನಿಶ್ಚಯವಾಗಿಯೂ ಅವನು ನಿಮ್ಮನ್ನು ಕಾಣುತ್ತಿರುವನು”. ಅವನು ಹೇಳಿದನು, “ಈಗ ನನಗೆ ಅಂತಿಮ ಘಳಿಗೆಯ ಬಗ್ಗೆ ತಿಳಿಸಿರಿ”. ಅವರು(ಸ) ಹೇಳಿದರು :” ಅದರ ಬಗ್ಗೆ ಕೇಳುತ್ತಿರುವವನಿಗಿಂತ ಕೇಳಲ್ಪಡುತ್ತಿರುವವನು ಹೆಚ್ಚಿನದೇನನ್ನೂ ಅರಿಯನು.” ಅವನು ಹೇಳಿದನು, “ಹಾಗಿದ್ದಲ್ಲಿ ನನಗೆ ಅದರ ಸಂಕೇತವನ್ನೇ ತಿಳಿಸಿರಿ”. ಅವರು(ಸ)ರು ಹೇಳಿದರು :”ಅವುಗಳೆಂದರೆ, ದಾಸಿಯು ತನ್ನ ಒಡತಿಗೆ ಜನ್ಮ ನೀಡುವಳು; ಹಾಗು ಬರಿಗಾಲಿನ, ನಗ್ನ ಹಾಗು ನಿರ್ಗತಿಕ ಕುರಿಮೇಯುವವನು ಎತ್ತರದ ಕಟ್ಟಡಗಳನ್ನು ಕಟ್ಟಿಸುವಲ್ಲಿ ಪೈಪೋಟಿ ನಡೆಸುವುದನ್ನು ನೀವು ಕಾಣುವಿರಿ” ಎಂದು. ನಂತರ ಆ ವ್ಯಕ್ತಿಯು ಹೊರಟನು ಮತ್ತು ನಾವು ಕೆಲಕಾಲದವರೆಗೂ ಅಲ್ಲೇ ಇದ್ದೆವು, ಆಗ ಅವರು(ಸ) ಕೇಳಿದರು :”ಓ ಉಮರ್(ರ) ಪ್ರಶ್ನಿಸುತ್ತಿದ್ದವನು ಯಾರೆಂದು ನಿಮಗೆ ತಿಳಿಯಿತೆ?” ನಾನು ಉತ್ತರಿಸಿದೆನು: “ಅಲ್ಲಾಹ್ ಮತ್ತು ಅವನ ಸಂದೇಶವಾಹಕರೇ ಉತ್ತಮವಾಗಿ ಬಲ್ಲರು”. ಅವರು(ಸ) ಹೇಳಿದರು: “ಅದು ಜಿಬ್ರಾಈಲ್(ಅ) ಅವರು ಬಂದಿದ್ದು ನಿಮಗೆ ನಿಮ್ಮ ಧರ್ಮವನ್ನು ಕಲಿಸಿಕೊಡಲು” ಎಂದು.
ಮೂರನೆಯ ಮೂಲತತ್ವ :
ನಿಮ್ಮ ಪೈಗಂಬರ್ ಮುಹಮ್ಮದ್(ಸ) ಬಗೆಗಿನ ಜ್ಞಾನ, ಮತ್ತು ಅವರು, ಮುಹಮ್ಮದ್ ಇಬ್ನ್ ಅಬ್ದುಲ್ಲಾಹ್ ಇಬ್ನ್ ಅಬ್ದುಲ್ ಮುತ್ತಲಿಬ್ ಇಬ್ನ್ ಹಾಶೀಮ್, ಖುರೈಶ್ ಜನಾಂಗದವರು. ಖುರೈಶರು ಅರಬರು. ಹಾಗು ಅಲ್ಲಾಹನು ತನ್ನ ದಾಸರಲ್ಲಿ ಪ್ರಿಯನಾದವನೆಂದು ಆರಿಸಿದ(ಖಲೀಲ್) ಇಬ್ರಾಹೀಮರ ಪುತ್ರ ಇಸ್ಮಾಯೀಲರ ಪೀಳಿಗೆಯವರೇ ಅರಬರು. ಅತ್ಯುತ್ತಮ ಅನುಗ್ರಹಗಳು ಮತ್ತು ಶಾಂತಿ ಅವರ ಮೇಲೆ ಮತ್ತು ನಮ್ಮ ಪ್ರವಾದಿಯ ಮೇಲೂ ನೆಲೆಸಲಿ. ಅವರು(ಸ) ಅರವತ್ಮೂರು ವರ್ಷಗಳ ಕಾಲ ಬದುಕಿದರು: ನಲವತ್ತು ವರ್ಷ ಪ್ರವಾದಿತ್ವಕ್ಕೂ ಮುಂಚೆ, ಹಾಗು ಇಪ್ಪತ್ಮೂರು ವರ್ಷ ಪ್ರವಾದಿಯಾಗಿ ಮತ್ತು ಸಂದೇಶವಾಹಕರಾಗಿ “ಇಕ್ರ” (ಸೂರಃ ಅಲ್-ಅಲಖ್ನ ಆರಂಭ)ದೊಂದಿಗೆ ಪ್ರವಾದಿಯಾಗಿಯೂ ಮತ್ತು ಸೂರಃ ಮುದಸ್ಸೀರ್ನೊಂದಿಗೆ ಸಂದೇಶವಾಹಕರನ್ನಾಗಿಯೂ ಅವರನ್ನು ಕಳುಹಿಸಲಾಗಿದೆ. ‘ಮಕ್ಕಾ’ ಅವರ ನಾಡು. ಅವರು ಮದೀನಾಕ್ಕೆ ‘ಹಿಜ್ರಾಃ’ (ನಿಗದಿಪಡಿಸಿದ ವಲಸೆ) ನಿರ್ವಹಿಸಿದರು. ಅಲ್ಲಾಹನು ‘ಶಿರ್ಕ್’ನ ವಿರುದ್ಧ ಎಚ್ಚರಿಸಲು ಹಾಗು ‘ತೌಹೀದ್’ನೆಡೆಗೆ ಕರೆಯಲು ಅವರನ್ನು ಕಳುಹಿಸಿದನು.
ಆಧಾರವೆಂದರೆ, ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಓ[ಮುಹಮ್ಮದ್(ಸ)] ಹೊದಿಕೆಯಲ್ಲಿ ಮುದುಡಿಕೊಂಡಿರುವವರೇ, ಎದ್ದೇಳಿರಿ ಮತ್ತು ನಿಮ್ಮ ಜನರನ್ನು ಎಚ್ಚರಿಸಿರಿ; ನಿಮ್ಮ ಪ್ರಭುವನ್ನು ಸ್ತುತಿಸಿರಿ ಮತ್ತು ಆರಾಧಿಸಿರಿ ಮತ್ತು ನಿಮ್ಮನ್ನೂ, ನಿಮ್ಮ ಬಟ್ಟೆಗಳನ್ನೂ ಮತ್ತು ನಿಮ್ಮ ಕಾರ್ಯಗಳನ್ನೂ ಪರಿಶುದ್ಧಗೊಳಿಸಿರಿ. ವಿಗ್ರಹಗಳನ್ನು ದೂರೀಕರಿಸಿರಿ ಮತ್ತು ಹೆಚ್ಚಿನದ್ದನ್ನು
ಪಡೆಯುವದಕ್ಕೋಸ್ಕರ ಏನನ್ನೂ ನೀಡಬೇಡಿರಿ. ನಿಮಗೆ ತೊಂದರೆಗಳು ಬಂದೊದಗಿದಲ್ಲಿ ನಿಮ್ಮ ಪ್ರಭುವಿಗೋಸ್ಕರ ಧೃಡನಿರ್ಧಾರದೊಂದಿಗೆ ಎಲ್ಲವನ್ನೂ ಸಹಿಸಿಕೊಳ್ಳಿ.” [ಸೂರಃ ಮುದ್ದಸ್ಸೀರ್ 74:1-7]
“ಎದ್ದೇಳಿರಿ ಮತ್ತು ನಿಮ್ಮ ಜನರನ್ನು ಎಚ್ಚರಿಸಿರಿ” ಎಂಬುದರ ಅರ್ಥವೇನೆಂದರೆ, ನೀವು ‘ಶಿರ್ಕ್’ನ ವಿರುದ್ಧವಾಗಿ ಎಚ್ಚರಿಸಿರಿ ಮತ್ತು ‘ತೌಹೀದ್’ನೆಡೆಗೆ ಆಹ್ವಾನಿಸಿರಿ ಎಂಬುದು. “ನಿಮ್ಮ ಪ್ರಭುವನ್ನು ಸ್ತುತಿಸಿರಿ ಮತ್ತು ಆರಾಧಿಸಿರಿ” ಎಂಬುದರ ಅರ್ಥ, ‘ತೌಹೀದ್’ನೊಂದಿಗೆ ಗೌರವಿಸಿರಿ ಮತ್ತು ಸ್ತುತಿಸಿರಿ ಎಂದು. “ನಿಮ್ಮನ್ನೂ ನಿಮ್ಮ ಬಟ್ಟೆಗಳನ್ನೂ ಮತ್ತು ನಿಮ್ಮ ಕಾರ್ಯಗಳನ್ನೂ ಪರಿಶುದ್ಧಗೊಳಿಸಿರಿ” ಎಂದರೆ, ನಿಮ್ಮ ನಡುವಳಿಕೆಯನ್ನು ಶಿರ್ಕ್ನಿಂದ ಬೇರ್ಪಡಿಸಿ ಪರಿಶುದ್ಧಗೊಳಿಸಿರಿ ಎಂದರ್ಥ. “ವಿಗ್ರಹಗಳನ್ನು ದೂರೀಕರಿಸಿರಿ,” ‘ಅರ್-ರುಜ್’ ಅಂದರೆ ವಿಗ್ರಹಗಳು ಮತ್ತು “ಹಜ್ರ್” ಎಂದರೆ ಅವುಗಳನ್ನು ದೂರೀಕರಿಸುವುದು ಹಾಗು ಮುಕ್ತಗೊಳ್ಳುವುದು ಮತ್ತು ಅವುಗಳಿಂದ ಹಾಗು ಅವುಗಳ ಜನರಿಂದ ಬೇರ್ಪಡುವುದು.
ಅವರು(ಸ) ಈ ಕಾರ್ಯವನ್ನು ಹತ್ತು ವರ್ಷಗಳ ಕಾಲ ನಿರ್ವಹಿಸಿದರು, ತೌಹೀದ್ನೆಡೆಗೆ ಕರೆದರು. ಮತ್ತು ಹತ್ತು ವರ್ಷಗಳ ನಂತರ ಅವರಿಗೆ ಪರಲೋಕ ದರ್ಶನ ಮಾಡಿಸಲಾಯಿತು. (ಮಿಅರಾಜ್) ಮತ್ತು ಐದು ನಮಾಝಗಳು ಅವರ ಮೇಲೆ ಕಡ್ಡಾಯಗೊಳಿಸಲಾದುವು ಮತ್ತು ಮೂರು ವರ್ಷಗಳ ಕಾಲ ಅವರು ಮಕ್ಕಾದಲ್ಲಿ ಆರಾಧಿಸಿದರು ಮತ್ತು ಅವರಿಗೆ ಆಗ ಅಲ್–ಮದೀನಾಕ್ಕೆ ಹಿಜ್ರಾಃ (ವಿಧಿಸಿದ್ದ ವಲಸೆ) ಕೈಗೊಳ್ಳುವಂತೆ ಆಜ್ಞೆ ನೀಡಲಾಯಿತು.)
“ಹಿಜ್ರಾ” ಎಂದರೆ ಶಿರ್ಕ್ನ ನಾಡಿನಿಂದ, ಇಸ್ಲಾಮ್ನ ನಾಡಿಗೆ ವಲಸೆ ಹೋಗುವುದು. ಈ ಉಮ್ಮಾಹ್ (ಸಮುದಾಯ)ದ ಮೇಲೆ ಶಿರ್ಕ್ನ ನಾಡಿನಿಂದ ಇಸ್ಲಾಮ್ನ ನಾಡಿಗೆ ಹಿಜ್ರಾಃ ನಿರ್ವಹಿಸುವುದು ಕಡ್ಡಾಯವಾಗಿರುವುದು ಮತ್ತು ಅಂತಿಮಕಾಲದವರೆಗೂ ಇದು ಮುಂದುವರಿಯುವುದು ಮತ್ತು ಅದಕ್ಕೆ ಆಧಾರವೆಂದರೆ, ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಅಲ್ಲಾಹನ ಕ್ರೋದಕ್ಕೆ ಪಾತ್ರರಾಗಿರುವ ಸ್ಥಿತಿಯಲ್ಲಿ, ದೇವಚರರು ಪ್ರಾಣವನ್ನು ವಶಪಡಿಸಿಕೊಂಡವರ ವಿಷಯದಲ್ಲಿ, ದೇವಚರರು ಅವರನ್ನು ಕೇಳುವರು: “ನಿಮ್ಮ ಧರ್ಮವನ್ನು ಯಾವ ಸ್ಥಿತಿಯಲ್ಲಿ ಪರಿಗಣಿಸುತ್ತಿದ್ದಿರಿ?” ಎಂದು ಅವರು ಹೇಳುವರು, ‘ನಾವು ನಮ್ಮ ನಾಡಿನ ಬಹುಸಂಖ್ಯಾತ ಹಾಗು ಶಕ್ತಿಯುತ ಶಿರ್ಕ್ನ ಜನರಿಂದ ದುರ್ಬಲಗೊಳಿಸಲ್ಪಟ್ಟೆವು. ಅವರು ನಮ್ಮನ್ನು ಸತ್ಯವಿಶ್ವಾಸದಿಂದ ಮತ್ತು ಸಂದೇಶವಾಹಕರ ಅನುಸರಣೆಯಿಂದ ತಡೆದರು.’ ಅವರು ಉತ್ತರಿಸುವರು” ‘ಶಿರ್ಕ್ನ ಜನರು ಪ್ರಾಬಲ್ಯತೆಯನ್ನು ತೋರುವ ನಿಮ್ಮ ನಾಡು ಮತ್ತು ಮನೆಯನ್ನು ತ್ಯಜಿಸುವಷ್ಟು ಮತ್ತು ಕೇವಲ ಅಲ್ಲಾಹನ ಆರಾಧನೆಯನ್ನು ಮಾಡಬಹುದಾದಂತಹ ಮತ್ತು ಅವನ ಸಂದೇಶವಾಹಕರನ್ನು ಅನುಸರಿಸಬಹುದಾದಂತಹ ನಾಡಿಗೆ ವಲಸೆ ಹೋಗುವಷ್ಟು ಅಲ್ಲಾಹನ ಭೂಮಿಯು ವಿಶಾಲವಾಗಿರಲಿಲ್ಲವೇ?’ ಇಂಥ ಜನರು ನರಕದಲ್ಲಿ ತಮ್ಮ ವಾಸಸ್ಥಾನವನ್ನು ಕಾಣುವರು. ಎಷ್ಟೊಂದು ಕೆಟ್ಟ ವಾಸಸ್ಥಾನವದು. ವಲಸೆ ಹೋಗಲು ಸಾಧ್ಯವಿರದ ಅಥವಾ ಈ ಹಾದಿಯಲ್ಲಿ ದಾರಿ ಕಾಣದ ದುರ್ಬಲ ಪುರುಷರು ಸ್ತ್ರೀಯರು ಹಾಗು ಮಕ್ಕಳು ಇದಕ್ಕೆ ಹೊರತಾಗಿರುವರು. ಅಂತಹವರನ್ನು ಅಲ್ಲಾಹನು ಕ್ಷಮಿಸಲೂಬಹುದು ಮತ್ತು ಅಲ್ಲಾಹನು ಮಹಾಕ್ಷಮಾಶೀಲನೂ, ತನ್ನ ದಾಸರ ಪಾಪವನ್ನು ಮನ್ನಿಸುವಾತನೂ ಆಗಿರುವನು.” [ಸೂರಃ ಅನ್ನಿಸಾ 4:97-99]
ಅಷ್ಟೇ ಅಲ್ಲದೆ, ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ನನ್ನಲ್ಲಿ ಮತ್ತು ನನ್ನ ಸಂದೇಶವಾಹಕ ಮುಹಮ್ಮದ್(ಸ)ರಲ್ಲಿ ವಿಶ್ವಾಸವಿರಿಸುವ ಓ ನನ್ನ ದಾಸರೇ, ನಿಶ್ಚಯವಾಗಿಯೂ ನನ್ನ ಭೂಮಿಯು ವಿಶಾಲವಾಗಿದೆ, ಆದ್ದರಿಂದ ನನ್ನ ದಾಸ್ಯಾನುಸರಣೆಯಿಂದ ಮತ್ತು ನಿಮ್ಮ ಆರಾಧನೆಯನ್ನು ಮತ್ತು ದಾಸಾನುಸರಣೆಯನ್ನು ಪರಿಶುದ್ಧವಾಗಿ ಹಾಗು ಪ್ರಾಮಾಣಿಕವಾಗಿ ನನಗೆ ಮೀಸಲಿರಿಸುವುದನ್ನು ತಡೆಯುವವರಿಂದ ದೂರ ಸಾಗಿರಿ ಮತ್ತು ನನಗೆ ಅವಿಧೇಯನಾಗಿ ಯಾರನ್ನೂ ಅನುಸರಿಸದಿರಿ.” [ಸೂರಃ ಅನ್-ಕಬೂತ್ 29:56]
ಆಲ್-ಬಘ್ವೀ, ರಹೀಮಉಲ್ಲಾಹ್, ಹೇಳುತ್ತಾರೆ: “ಈ ಆಯತ್, ವಲಸೆ ಹೋಗದ ಮಕ್ಕಾದ ಮುಸ್ಲಿಮರನ್ನುದ್ದೇಶಿಸಿ ಇಳಿಸಲಾಗಿದೆ. ಅಲ್ಲಾಹನು ಅವರನ್ನು ‘ಈಮಾನ್’ನ ಶೀರ್ಷಿಕೆಯೊಂದಿಗೆ ಅಭಿಸಂಭೊಧಿಸಿರುವನು.”
‘ಹಿಜ್ರಾಃ’ಗೆ ಆಧಾರವನ್ನು ಸುನ್ನಾಹ್ (ಪ್ರವಾದಿಚರ್ಯೆ)ದಲ್ಲಿ ಕಾಣಬಹುದು. ಮುಹಮ್ಮದ್(ಸ) ಹೇಳಿರುವರು : “ಪಶ್ಚಾತ್ತಾಪ ಪಡುವುದನ್ನು ಸ್ಥಗಿತಗೊಳಿಸುವವರೆಗೂ ಹಿಜ್ರಾಃ ಸ್ಥಗಿತಗೊಳ್ಳದು ಮತ್ತು
ಸೂರ್ಯಾಸ್ತದ ಸ್ಥಳದಿಂದ ಸೂರ್ಯನು ಉಗಮಿಸುವವರೆಗೂ ಪಶ್ಚಾತ್ತಾಪ ಪಡುವುದು ಸ್ಥಗಿತಗೊಳ್ಳದು.”
ಅವರು (ಸ) ಮದೀನಾದಲ್ಲಿ ನೆಲೆಸಿದ್ದಾಗ ಇಸ್ಲಾಮ್ನಲ್ಲಿ ವಿಧಿಸಿರುವ ಉಳಿದೆಲ್ಲಾ ಕರ್ತವ್ಯಗಳನ್ನು ಆದೇಶಿಸಿದರು. ಉದಾಹರಣೆಗೆ ಝಕಾತ್, ಆರಾಧನೆ, ಹಜ್ಜ್, ಜಿಹಾದ್, ಅಝಾನ್ ಮತ್ತು ಒಳಿತನ್ನು ಉಪದೇಶಿಸುವುದು ಹಾಗು ಕೆಡುಕಿನಿಂದ ತಡೆಯುವುದು ಮತ್ತು ಉಳಿದೆಲ್ಲ ಇಸ್ಲಾಮ್ನ ವಿಧಿತ ಕರ್ತವ್ಯಗಳು. ಇವುಗಳನ್ನೆಲ್ಲಾ ಸಂಸ್ಥಾಪಿಸುತ್ತ ಅವರು ಹತ್ತು ವರ್ಷ ಕಳೆದರು. ತದನಂತರ ಅವರು ತೀರಿಕೊಂಡರು. ಅಲ್ಲಾಹ್ ಅವರನ್ನು ಶ್ಲಾಘಿಸಲಿ ಮತ್ತು ಶಾಂತಿಭರಿತ ಅನುಗ್ರಹಗಳನ್ನು ಅವರ ಮೇಲಿಳಿಸಲಿ ಮತ್ತು ಅವರ ಧರ್ಮವು ಶಾಶ್ವತವಾಗಿರಲಿ. ಇದುವೇ ಅವರ ಧರ್ಮ: ಅವರು ತನ್ನ ಉಮ್ಮಾಃಗೆ (ಅನುಯಾಯಿಗಳಗೆ) ನಿರ್ದೇಶಿಸಿರುವುದರ ಹೊರತು ಇನ್ನಾವುದೇ ಒಳಿತಿಲ್ಲ ಮತ್ತು ಅವರು ಎಚ್ಚರಿಸಿರುವುದರ ಹೊರತು ಯಾವುದೇ ಕೆಡುಕಿಲ್ಲ. ಅವರು ಯಾವ ಒಳಿತಿನ ಕಡೆಗೆ ಕರೆದಿರುವರೋ ಅದುವೇ ಅತ್-ತೌಹೀದ್. ಅದುವೇ ಅಲ್ಲಾಹನು ಇಷ್ಟಪಡುವ ಮತ್ತು ಸಂತೃಪ್ತನಾಗುವ ಒಳಿತು. ಅವರು ಎಚ್ಚರಿಸಿರುವ ಕೆಡುಕೆಂದರೆ ‘ಅಶ್-ಶಿರ್ಕ್ ಮತ್ತು ಅದನ್ನೇ ಅಲ್ಲಾಹ್ ದ್ವೇಷಿಸುವುದು ಮತ್ತು ತಿರಸ್ಕರಿಸುವುದು. ಅಲ್ಲಾಹನು ಅವರನ್ನು ಎಲ್ಲರಿಗಾಗಿ ಸಂದೇಶವಾಹಕರನ್ನಾಗಿ ಕಳುಹಿಸಿರುವನು ಮತ್ತು ಸಕಲ ಯಕ್ಷಗಳ ಹಾಗು ಮಾನವರ ಮೇಲೆ ಅವರನ್ನನುಸರಿಸುವುದನ್ನು ಕಡ್ಡಾಯಗೊಳಿಸಿರುವನು. ಅದಕ್ಕೆ ಆಧಾರವು ಅಲ್ಲಾಹ್, ಅತ್ಯುನ್ನತನ ಹೇಳಿಕೆ :
“ಓ ಮುಹಮ್ಮದ್, ಎಲ್ಲರಿಗೂ ಹೇಳಿರಿ : ‘ನಿಮಗೆಲ್ಲರಿಗೂ ನಾನು ಅಲ್ಲಾಹನ ಸಂದೇಶವಾಹಕನಾಗಿರುವೆನು.” [ಸೂರಃ ಅಲ್-ಅರಾಫ್ 7:158]
ಅವರ ಮೂಲಕ ಅಲ್ಲಾಹನು ತನ್ನ ಧರ್ಮವನ್ನು ಪರಿಪೂರ್ಣಗೊಳಿಸಿರುವನು ಮತ್ತು ಅದಕ್ಕೆ ಆಧಾರವು ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಇಂದು ನಾನು ನಿಮ್ಮ ಧರ್ಮವನ್ನು ನಿಮಗಾಗಿ ಪರಿಪೂರ್ಣಗೊಳಿಸಿರುವೆನು ಮತ್ತು ನನ್ನ ಅನುಗ್ರಹಗಳನ್ನು ನಿಮ್ಮ ಮೇಲೆ ಸಂಪೂರ್ಣಗೊಳಿಸಿರುವೆನು ಮತ್ತು ನಿಮ್ಮ ಧರ್ಮವೆಂಬ ನೆಲೆಯಲ್ಲಿ ಇಸ್ಲಾಮ್ಅನ್ನು ಅಂಗೀಕರಿಸಿ ಸಂತುಷ್ಟನಾಗಿರುವೆನು.” [ಸೂರಃ ಮಾಇದಃ 5:3]
ಅವರು(ಸ) ತೀರಿಕೊಂಡಿರುವರು ಎಂಬುದಕ್ಕೆ ಆಧಾರ ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಓ ಮುಹಮ್ಮದ(ಸ), ನೀವು ಶೀಘ್ರದಲ್ಲಿಯೇ ಮರಣ ಹೊಂದಲಿರುವಿರಿ ಮತ್ತು ನಿಮ್ಮ ಜನಗಳು ಕೂಡ-ನಿಮ್ಮನ್ನು ವಿರೋಧಿಸುವವರು ಮತ್ತು ನಿಮ್ಮ ಮೇಲೆ ವಿಶ್ವಾಸವಿರಿಸುವವರು. ಆ ಬಳಿಕ ಪುನರುತ್ಥಾನ ದಿನದಂದು ಪೀಡಿತ ವ್ಯಕ್ತಿಗಳೆಲ್ಲರೂ, ತಮ್ಮ ಹಕ್ಕನ್ನು ಪೀಡಿಸಿದವರಿಂದ ಪಡೆದುಕೊಳ್ಳುವವರೆಗೂ ಎಲ್ಲರೂ ಅಲ್ಲಾಹನ ಮುಂದೆ ತೀವ್ರವಾಗಿ ವಾದ ಮಂಡಿಸಲಿರುವಿರಿ ಮತ್ತು ಸತ್ಯದೊಂದಿಗೆ ಅವರ ನಡುವೆ ನ್ಯಾಯ ಸಂಸ್ಥಾಪಿಸಲಾಗುವುದು.” [ಸೂರಃ ಅಝ್-ಝುಮರ್ 39:30-31]
ಮರಣದ ನಂತರ ಜನರು ಪುನಃ ಎಬ್ಬಿಸಲ್ಪಡುವರು ಮತ್ತು ಆಧಾರವು ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಓ ಮಾನವರೇ, ನಾವು ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿರುವೆವು ಮತ್ತು ಮರಣದ ನಂತರ ಅದರೆಡೆಗೇ ನಿಮ್ಮನ್ನು ಮರಳಿಸುವೆವು ಮತ್ತು ಅಲ್ಲಿಂದಲೇ ನಿಮ್ಮನ್ನು ಪುನಃ ಜೀವಿತಗೊಳಿಸಿ ಎಬ್ಬಿಸುವೆವು.” [ಸೂರಃ ತಾಹಾ 20:55]
ಹಾಗು ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಮತ್ತು ಅಲ್ಲಾಹನು ನಿಮ್ಮನ್ನು ಭೂಮಿಯ ಮಣ್ಣಿನಿಂದ ಸೃಷ್ಟಿಸಿದನು, ಆ ಬಳಿಕ ಭೂಮಿಯಲ್ಲಿ ಮಣ್ಣಾಗಿ ಬಿಡುವಂತೆ ನಿಮ್ಮನ್ನು ಮರಳಿಸುವನು. ಆ ನಂತರ ಪುನಃ ಜೀವಿತಗೊಳಿಸುವನು.” [ಸೂರಃ ನೂಹ್ 71:17-18]
ಒಮ್ಮೆ ಎಬ್ಬಿಸಲ್ಪಟ್ಟ ನಂತರ ಜನರನ್ನು ಲೆಕ್ಕಾಚಾರಕ್ಕಾಗಿ ಕರತರಲಾಗುವುದು ಮತ್ತು ಅವರ ಕರ್ಮಗಳಿಗನುಸಾರವಾಗಿ ಅವರನ್ನು ಪುರಸ್ಕರಿಸಲಾಗುವುದು. ಇಲ್ಲವೇ ಶಿಕ್ಷಿಸಲಾಗುವುದು. ಇದಕ್ಕೆ ಆಧಾರವು, ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಪಾಪಕಾರ್ಯಗಳನ್ನು ಮಾಡಿರುವ ಮತ್ತು ಆಜ್ಞಾನುಸರಣೆಯನ್ನು ಧಿಕ್ಕರಿಸಿದವರಿಗೆ ಪ್ರತಿಫಲವನ್ನು ನೀಡಲು ಮತ್ತು ಅವರು ಮಾಡಿರುವ ಕರ್ಮಗಳಿಗನುಸಾರ ಬೆಂಕಿಯಲ್ಲಿ ಅವರನ್ನು ಶಿಕ್ಷಿಸಲು; ಮತ್ತು ಒಳಿತನ್ನು ಪಾಲಿಸಿದ ಹಾಗು ಉತ್ತಮ ಕಾರ್ಯಗಳ ಮೂಲಕ ಅಲ್ಲಾಹನಿಗೆ ಆಜ್ಞಾಪಾಲಕರಾಗಿದ್ದವರನ್ನು ಪುರಸ್ಕರಿಸಲು ಎಂದು.” [ಸೂರಃ ಅನ್-ನಜ್ಮ್ 53:31]
ಅಲ್ಲದೇ ಪುನರುತ್ಥಾನ ದಿನವನ್ನು ತಿರಸ್ಕರಿಸುವವರು ಸತ್ಯನಿಷೆಧಿಗಳು, ಆಧಾರವೆಂದರೆ ಅಲ್ಲಾಹ್, ಅತ್ಯುನ್ನತನ ಹೇಳಿಕೆ :
“ಅಲ್ಲಾಹ್ ಅವರನ್ನು ಮರಣಾನಂತರ ಪುನಃ ಎಬ್ಬಿಸುವುದಿಲ್ಲವೆಂದು ಸತ್ಯನಿಷೇಧಿಗಳು ವಾದಿಸುತ್ತಾರೆ. ಓ ಮುಹಮ್ಮದ್ ಅವರಿಗೆ ಹೇಳಿ, “ನನ್ನ ಪ್ರಭುವಿನಾಣೆ, ನೀವು ನಿಮ್ಮ ಸಮಾಧಿಯಿಂದ ನಿಶ್ಚಯವಾಗಿಯೂ ಎಬ್ಬಿಸಲ್ಪಡುವಿರಿ ಮತ್ತು ಆಗ ನೀವು ಜಗತ್ತಿನಲ್ಲಿ ಮಾಡುತ್ತಿದ್ದ ಕರ್ಮಗಳನ್ನು ನಿಮಗೆ ತೋರಿಸಿ ಕೊಡಲಾಗುವುದು.” [ಸೂರಃ ಅತ್-ತಘಾಬುನ್ 64:7]
ಅಲ್ಲಾಹನು ಎಲ್ಲ ಸಂದೇಶವಾಹಕರನ್ನೂ ಶುಭವಾರ್ತೆಯೊಂದಿಗೆ ಮತ್ತು ಎಚ್ಚರಿಕೆಯೊಂದಿಗೆ ಕಳುಹಿಸಿರುವನು. ಅದಕ್ಕೆ ಆಧಾರವೆಂದರೆ, ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಅಲ್ಲಾಹನ ಆಜ್ಞಾಪಾಲನೆ ಮಾಡುವವರಿಗೆ ಮತ್ತು ಅವನ ಸಂದೇಶವಾಹಕರ ಮೇಲೆ ವಿಶ್ವಾಸ ತಳೆಯುವವರಿಗೆ ಅಲ್ಲಾಹನ ಕೊಡುಗೆಗಳ ಬಗ್ಗೆ ಶುಭವಾರ್ತೆಯನ್ನು ನೀಡುವವರಾಗಿ ಹಾಗು ಅಲ್ಲಾಹನ ಆಜ್ಞಾನುಸರಣೆಯನ್ನು ಧಿಕ್ಕರಿಸುವವರಿಗೆ ಮತ್ತು ಅವನ ಸಂದೇಶವಾಹಕರ ಮೇಲೆ ಅವಿಶ್ವಾಸ ತಳೆಯುವ ಮೂಲಕ ಅಲ್ಲಾಹುವಿನಲ್ಲಿ ಅವಿಶ್ವಾಸ ತಳೆಯುವವರಿಗೆ ಮತ್ತು ಅಲ್ಲಾಹನ ಹೊರತು ಇತರರನ್ನು ಆರಾಧಿಸುವವರಿಗೆ, ಎಚ್ಚರಿಕೆ ನೀಡುವವರಾಗಿ ನಾವು ಸಂದೇಶವಾಹಕರನ್ನು ಕಳುಹಿಸಿರುವೆವು. ಆ ಬಳಿಕ ಅಲ್ಲಾಹನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅವರು ಯಾವುದೇ ನೆಪವೊಡ್ಡದಿರಲಿ ಎಂದು.” [ಸೂರಃ ಅನ್ನಿಸಾ 4:165]
ಅವರಲ್ಲಿ ನೂಹ್(ಅ) ಮೊದಲಿಗರು ಮತ್ತು ಮುಹಮ್ಮದ್(ಸ) ಕೊನೆಯವರು. ನೂಹ(ಅ) ಮೊದಲಿಗರು ಎಂಬುದಕ್ಕೆ ಆಧಾರವೆಂದರೆ, ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಓ ಮುಹಮ್ಮದ್ ನಾವು ನೂಹ್(ಅ) ಮತ್ತು ಅನಂತರದ ಸಂದೇಶವಾಹಕರನ್ನು ದಿವ್ಯವಾಣಿಯೊಂದಿಗೆ ಕಳುಹಿಸಿದ್ದಂತೆಯೇ , ನಿಮ್ಮನ್ನೂ ದಿವ್ಯವಾಣಿಯೊಂದಿಗೆ ಸಂದೇಶವಾಹಕರನ್ನಾಗಿ ಕಳುಹಿಸುತ್ತಿದ್ದೇವೆ.” [ಸೂರಃ ಅನ್ನಿಸಾ 4:163]
ಕೇವಲ ಅಲ್ಲಾಹನನ್ನೇ ಆರಾಧಿಸುವಂತೆ ಮತ್ತು ಅತ್-ತಾಘೂತ್ನ (ಅಲ್ಲಾಹನ ಹೊರತು ಆರಾಧಿಸಲಾಗುವ ಉಳಿದೆಲ್ಲವೂ) ಆರಾಧನೆಯಿಂದ ತಡೆಯುವಂತೆ, ನೂಹ್(ಅ)ರಿಂದ ಹಿಡಿದು ಮುಹಮ್ಮದ್(ಸ)ರವರೆಗೂ ಪ್ರತಿಯೊಂದು ರಾಷ್ಟ್ರಕ್ಕೂ ಅಲ್ಲಾಹನು ಸಂದೇಶವಾಹಕರನ್ನು ಕಳುಹಿಸಿರುವನು. ಆಧಾರವು, ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಕೇವಲ ಅಲ್ಲಾಹನನ್ನೇ ಆರಾಧಿಸುವಂತೆ, ಅವನ ಆಜ್ಞಾಪಾಲನೆಯನ್ನೇ ಮಾಡುವಂತೆ ಮತ್ತು ಆರಾಧನೆಯನ್ನು ಪರಿಶುದ್ಧವಾಗಿ ಅವನಿಗೇ ಸೀಮಿತವಾಗಿರಿಸುವಂತೆ ಮತ್ತು ಅವನ ಹೊರತು ಆರಾಧಿಸುತ್ತಿರುವುದೆಲ್ಲವುಗಳನ್ನು ತೊರೆಯುವಂತೆ ಆದೇಶವಿತ್ತು. ನಾವು ಪ್ರತಿಯೊಂದು ಸಮುದಾಯದಲ್ಲಿಯೂ ಸಂದೇಶವಾಹಕರನ್ನು ಕಳುಹಿಸಿರುವೆವು.” [ಸೂರಃ ಅನ್-ನಹ್ಲ್ 16:36]
‘ಅತ್-ತಾಘೂತ್’ಅನ್ನು ತಿರಸ್ಕರಿಸಿ ಅವುಗಳಲ್ಲಿ ಅವಿಶ್ವಾಸ ತಳೆಯುವುದನ್ನು ಮತ್ತು ಅಲ್ಲಾಹನಲ್ಲಿ ‘ಈಮಾನ್’ ಇರಿಸುವುದನ್ನು ಅಲ್ಲಾಹನು ಎಲ್ಲ ದಾಸರ ಮೇಲೆ ಕಡ್ಡಾಯಗೊಳಿಸಿರುವನು. ಇಬ್ನುಲ್-ಖಯ್ಯಿಮ್, ರಹಿಮಉಲ್ಲಾಹ್, ಹೇಳುತ್ತಾರೆ. “ಅತ್-ತಾಘೂತ್, ಎಂದರೆ ಒಬ್ಬ ದಾಸನು ಯಾರದ್ದಾದರೂ ವಿಷಯದಲ್ಲಿ ತನ್ನ ಪರಿಮಿತಿಯನ್ನು ಮೀರಿ ವರ್ತಿಸುವುದು, ಅದು ಆರಾದಿಸುವುದರಲ್ಲಾಗಲಿ, ಆಜ್ಞಾಪಾಲಿಸುವುದರಲ್ಲಾಗಲಿ ಅಥವಾ ಅನುಸರಿಸುವುದರಲ್ಲಾಗಲಿ.”
ಅತ್-ತಾಘೂತ್ನಲ್ಲಿ ಅನೇಕ ವಿಧಗಳಿವೆ ಮತ್ತು ಅವುಗಳು 5 ಶೀರ್ಷಿಕೆಯಲ್ಲಿ ವಿಂಗಡಿಸಲ್ಪಟ್ಟಿವೆ:
• ಇಬ್ಲೀಸ್ – ಅವನ ಮೇಲೆ ಅಲ್ಲಾಹನ ಶಾಪವಿರಲಿ.
• ಆರಾಧಿಸಲ್ಪಟ್ಟವರು ಮತ್ತು ಅದರಿಂದ ಸಂತುಷ್ಟಗೊಂಡವರು.
• ತನ್ನ ಆರಾಧನೆಗಾಗಿ ಜನರನ್ನು ಕರೆಯುವವನು.
• ಕಣ್ಮರೆಯಾಗಿರುವ ಮತ್ತು ಯಾರಿಂದಲೂ ಕಾಣಲಾಗದಂಥ (ಅಲ್-ಘೈಬ್) ವಿಷಯಗಳ ಜಾÐನವನ್ನು ಪಡೆದಿರುವೆನೆಂದು ವಾದ ಮಾಡುವವನು.
• ಅಲ್ಲಾಹನು ಕಳುಹಿಸಿರುವುದನ್ನು ಬಿಟ್ಟು ನ್ಯಾಯೀಕರಿಸುವವನು.
ಆಧಾರವೆಂದರೆ, ಅಲ್ಲಾಹ್, ಅತ್ಯುನ್ನತನ ಹೇಳಿಕೆ:
“ಧರ್ಮದಲ್ಲಿ ಸೇರ್ಪಡೆಗೊಳ್ಳಲು ಯಾರನ್ನೂ ಬಲವಂತಗೊಳಿಸುವಂತಿಲ್ಲ. ಸನ್ಮಾರ್ಗವನ್ನು ಸ್ಟಷ್ಟಗೊಳಿಸಲಾಗಿದ್ದು, ದುರ್ಮಾರ್ಗದಿಂದ ಬೇರ್ಪಡಿಸಲ್ಪಟ್ಟಿದೆ. ಆದ್ದರಿಂದ ಅತ್-ತಾಘೂತನ್ನು (ಅಲ್ಲಾಹನ ಹೊರತು ಆರಾಧಿಸಲ್ಪಡುವುದೆಲ್ಲವನ್ನು) ನಿರಾಕರಿಸಿದವರು, ಮತ್ತು ನೈಜಾರ್ಥದಲ್ಲಿ, ಅಲ್ಲಾಹನಲ್ಲಿ ವಿಶ್ವಾಸವಿರಿಸಿ, ಅವನೋರ್ವನನ್ನೇ ಆರಾಧಿಸುವವರು, ಎಂದೆಂದಿಗೂ ಮುರಿಯದಂತಹ ಬಲವಾದ ಆಧಾರವನ್ನು ನೆಚ್ಚಿಕೊಂಡಿರುವರು. [ಸೂರಃ ಅಲ್-ಬಕರಃ 2:256]
ಇದುವೇ ‘ಲಾ ಇಲಾಹ ಇಲ್ಲಲ್ಲಾಹ’ನ ಅರ್ಥ [ಅಲ್ಲಾಹನ ಹೊರತು ಆರಾಧನೆಗೆ ಯೋಗ್ಯರು ಯಾರೂ ಇಲ್ಲ.]
ಮತ್ತು ಹದೀಸ್: ‘ಅಲ್-ಇಸ್ಲಾಂ’ ಎಲ್ಲ ಕರ್ಮಗಳಿಗೂ ಮುಖಂಡತ್ವವನ್ನು ಹೊಂದಿದ್ದು, ನಮಾಝ್ ಅದರ ಆಧಾರಸ್ತಂಭವಾಗಿರುವುದು ಮತ್ತು ಅದರ ಪ್ರಮುಖ ಅಂಗವು ಅಲ್ಲಾಹನ ದಾರಿಯಲ್ಲಿ ಜಿಹಾದ್ ಮಾಡುವುದಾಗಿರುತ್ತದೆ.
ಅಲ್ಲಾಹನೇ ಉತ್ತಮವಾಗಿ ಅರಿಯುವವನು. ಅಲ್ಲಾಹನು ಮುಹಮ್ಮದ್(ಸ)ರನ್ನು ಮತ್ತು ಅವರ ನೈಜ ಅನುಯಾಯಿಗಳನ್ನು ಮತ್ತು ಸಂಗಡಿಗರನ್ನು ಉತ್ತುಂಗಕ್ಕೇರಿಸಲಿ ಮತ್ತು ಅವರ ಮೇಲೆ ಶಾಂತಿಭರಿತ ಅನುಗ್ರಹಗಳನ್ನು ದಯಪಾಲಿಸಲಿ.
ಅರಬಿ ಮೂಲ: ಶೇಖ್ ಮುಹಮ್ಮದ್ ಇಬ್ನ್ ಸುಲೈಮನ್ ಅತ್ತಮೀಮಿ
ಅನುವಾದಕರು: ಝುಬೈರ್ ಇಬ್ನ್ ಹಂಝಾ