ಆಯಿಶ(ರ) ರವರ ವಂಶಾವಳಿಯು ಎಂಟನೇ ಪಿತಾಮಹ ಮುರ್ರರಲ್ಲಿ ಪ್ರವಾದಿ(ಸ) ರೊಂದಿಗೆ ಸಂಧಿಸುತ್ತದೆ.
ಜನನ:
ಆಯಿಶ(ರ) ಮಕ್ಕಾದಲ್ಲಿ ಕುರೈಶ್ ಗೋತ್ರದ ಬನೂ ತೈಮ್ ವಂಶದಲ್ಲಿ ಹುಟ್ಟಿದರು. ಅವರು ಮಕ್ಕಾದಲ್ಲೇ ಬೆಳೆದು ದೊಡ್ಡವರಾದರು. ಅವರು ಅತ್ಯಂತ ಬುದ್ಧಿವಂತೆ ಮತ್ತು ತೀಕ್ಷ್ಣ ಜ್ಞಾಪಕಶಕ್ತಿಯುಳ್ಳವರಾಗಿದ್ದರು. ಚಿಕ್ಕಂದಿನಲ್ಲಿ ಜೋಕಾಲಿ ಆಡುವುದು ಮತ್ತು ಗೊಂಬೆಗಳೊಂದಿಗೆ ಆಟವಾಡುವುದು ಅವರ ನೆಚ್ಚಿನ ಹವ್ಯಾಸವಾಗಿತ್ತು.
ಪ್ರವಾದಿ(ಸ)ರೊಂದಿಗೆ ವಿವಾಹ:
ಖದೀಜಾ(ರ) ರವರ ಮರಣದಿಂದ ಪ್ರವಾದಿ(ಸ) ಬಹಳ ದುಃಖಿತರಾಗಿದ್ದರು. ಹೀಗಿರುವಾಗ ಒಮ್ಮೆ ಖೌಲ ಬಿಂತ್ ಹಕೀಮ್(ರ) (ಈಕೆ ಉಸ್ಮಾನ್ ಬಿನ್ ಮನ್(ರ) ರವರ ಪತ್ನಿ) ಪ್ರವಾದಿ(ಸ) ರವರ ಬಳಿಗೆ ಬಂದು ಕೇಳಿದರು- ಓ ಪ್ರವಾದಿಯವರೇ! ತಾವು ಬಹಳ ಖಿನ್ನರಾಗಿದ್ದೀರಿ. ಪ್ರವಾದಿ(ಸ) ಉತ್ತರಿಸಿದರು- ಹೌದು! ಖದೀಜಾರ ಮರಣದಿಂದ ನನಗೆ ಬಹಳ ದುಃಖವಾಗಿದೆ. ಆಕೆ ನನಗೆ ಎಲ್ಲವೂ ಆಗಿದ್ದಳು. ಖೌಲ(ರ) ಕೇಳಿದರು- ಪ್ರವಾದಿಯವರೇ, ತಾವೇಕೆ ಮದುವೆಯಾಗಬಾರದು? ತಾವು ಒಪ್ಪಿದರೆ ನಾನು ತಮಗೆ ಒಬ್ಬ ಕನ್ಯೆ ಮತ್ತು ಒಬ್ಬ ವಿಧವೆಯನ್ನು ನೋಡಿದ್ದೇನೆ. ಪ್ರವಾದಿ(ಸ) ರವರು ಕನ್ಯೆ ಯಾರೆಂದು ಕೇಳಿದಾಗ, ಕನ್ಯೆ ಆಯಿಶ(ರ) ಮತ್ತು ವಿಧವೆ ಯಾರೆಂದು ಕೇಳಿದಾಗ, ವಿಧವೆ ಸೌದ(ರ) ಎಂದು ಖೌಲ(ರ) ಉತ್ತರಿಸಿದರು. ಪ್ರವಾದಿ(ಸ) ಇಬ್ಬರಿಗೂ ವಿವಾಹಪ್ರಸ್ತಾಪ ಕಳುಹಿಸಲು ಹೇಳಿದರು.
ಖೌಲ(ರ) ಆಯಿಶ(ರ) ರವರ ತಾಯಿ ಉಮ್ಮು ರೂಮಾನ್ ಬಳಿಗೆ ಹೋಗಿ ವಿಷಯ ತಿಳಿಸಿದರು. ಆದರೆ ಮುತ್ಇಮ್ ಬಿನ್ ಅದೀ ತನ್ನ ಮನೆಗೆ ಆಯಿಶ(ರ) ರನ್ನು ಸೊಸೆಯಾಗಿ ತರಲು ಬಯಸಿದ್ದರು. ಅವರು ಈ ಬಗ್ಗೆ ಅಬೂಬಕರ್(ರ) ರೊಡನೆ ಮಾತುಕತೆ ನಡೆಸಿದ್ದರು ಮತ್ತು ಅಬೂಬಕರ್(ರ) ಮಾತು ಕೊಟ್ಟಿದ್ದರು. ಪ್ರವಾದಿ(ಸ) ಆಯಿಶ(ರ) ರಿಗೆ ವಿವಾಹ ಪ್ರಸ್ತಾಪ ಕಳುಹಿಸಿದ್ದಾರೆಂಬ ವಿಷಯ ತಿಳಿದು ಅಬೂಬಕರ್ ಮುತ್ಇನ್ ಬಳಿಗೆ ಹೋದರು. ನನ್ನ ಮಗ ನಿನ್ನ ಮಗಳನ್ನು ಮಧುವೆಯಾದರೆ ಅವನು ನಿನ್ನ ಧರ್ಮಕ್ಕೆ ಹೋಗುವ ಅಪಾಯವಿದೆ, ನನಗೆ ಈ ಸಂಬಂಧ ಬೇಡ ಎಂದು ಮುತ್ಇಮ್ರ ಪತ್ನಿ ಕಡ್ಡಿ ಮುರಿದಂತೆ ಹೇಳಿ ನಿರಾಕರಿಸಿದರು. ಮುತ್ಇಮ್ ಕೂಡ ಇದೇ ಮಾತನ್ನು ಹೇಳಿದರು. ನಂತರ ಅಬೂಬಕರ್(ರ) ತಮ್ಮ ಮಗಳನ್ನು ಪ್ರವಾದಿ(ಸ) ರಿಗೆ ವಿವಾಹ ಮಾಡಿಕೊಟ್ಟರು.
ಆಕಸ್ಮಿಕ ವಿವಾಹವಲ್ಲ:
ಪ್ರವಾದಿ(ಸ) ರವರು ಆಯಿಶ(ರ) ರನ್ನು ವಿವಾಹವಾಗುವ ಮೊದಲೇ ಅಲ್ಲಾಹು ಅವರನ್ನು ಪ್ರವಾದಿ(ಸ) ರಿಗೆ ಕನಸಿನಲ್ಲಿ ಮೂರು ಬಾರಿ ತೋರಿಸಿದ್ದನು. ದೇವದೂತರು ಆಯಿಶ(ರ) ರವರ ಚಿತ್ರವನ್ನು ರೇಷ್ಮೆ ಬಟ್ಟೆಯಿಂದ ಮುಚ್ಚಿ ಪ್ರವಾದಿ(ಸ) ರವರ ಬಳಿ ತಂದು ಇದು ನಿಮ್ಮ ಪತ್ನಿ ಎಂದಿದ್ದರು. ಪ್ರವಾದಿ(ಸ) ಆ ಬಟ್ಟೆಯನ್ನು ಸರಿಸಿದಾಗ ಅದು ಆಯಿಶ(ರ) ಚಿತ್ರವಾಗಿತ್ತು. ಇದು ಅಲ್ಲಾಹನ ನಿರ್ಧಾರವಾಗಿದ್ದರೆ ಅದು ಜಾರಿಯಾಗಿಯೇ ತೀರುವುದು ಎಂದು ಪ್ರವಾದಿ(ಸ) ಹೇಳುತ್ತಿದ್ದರು.
ಮದೀನಕ್ಕೆ ಹಿಜ್ರ:
ಪ್ರವಾದಿ(ಸ) ಮತ್ತು ಅಬೂಬಕರ್(ರ) ರವರು ಮದೀನಕ್ಕೆ ಹಿಜ್ರ ಮಾಡಿದ ಬಳಿಕ ಆಯಿಶ(ರ) ರವರು, ತಲ್ಹಾ ಬಿನ್ ಉಬೈದುಲ್ಲಾ ಸಹೋದರ ಅಬ್ದುರ್ರಹ್ಮಾನ್, ತಾಯಿ ಉಮ್ಮು ರೂಮಾನ್, ಸಹೋದರಿ ಅಸ್ಮಾ, ಝೈದ್ ಬಿನ್ ಹಾರಿಸ್, ಉಮ್ಮು ಕುಲ್ಸೂಮ್, ಫಾತಿಮ, ಸೌದ, ಉಮ್ಮು ಐಮನ್, ಉಸಾಮ ಬಿನ್ ಝೈದ್ ಮುಂತಾದವರೊಡನೆ ಹಿಜ್ರ ಮಾಡಿದರು. ಬದ್ರ್ ಯುದ್ಧದ ಬಳಿಕ ಹಿಜರಿ ಶಕೆ 2 ಶದ್ವಾಲ್ ತಿಂಗಳಲ್ಲಿ ಪ್ರವಾದಿ(ಸ) ರವರು ಆಯಿಶ(ರ) ರೊಡನೆ ದಾಂಪತ್ಯ ಜೀವನವನ್ನು ಆರಂಭಿಸಿದರು.
ಕಪಟವಿಶ್ವಾಸಿಗಳ ಸುಳ್ಳಾರೋಪ:
ಒಮ್ಮೆ ಪ್ರವಾದಿ(ಸ) ಮತ್ತು ಸಹಾಬಿಗಳು ಬನೂ ಮುಸ್ತಲಕ್ ಯುದ್ಧದಿಂದ ಹಿಂದಿರುಗಿ ಬರುತ್ತಿದ್ದರು. ಆಯಿಶ(ರ) ಕೂಡ ಅವರ ಜೊತೆಗಿದ್ದರು. ದಾರಿ ಮಧ್ಯೆ ಅವರು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾಗ ಬಹಿರ್ದೆಸೆಗಾಗಿ ಆಯಿಶ(ರ) ಒಂಟೆಯಿಂದ ಇಳಿದು ದೂರ ಹೋದರು. ದಾರಿಯಲ್ಲಿ ಆಕೆಯ ಸರ ಕಳೆದುಹೋಯಿತು. ಆಕೆ ಸರವನ್ನು ಹುಡುಕಿ ತರುವಷ್ಟರಲ್ಲಿ ಪ್ರವಾದಿ(ಸ) ಮತ್ತು ಸಹಾಬಿಗಳು ಅಲ್ಲಿಂದ ತೆರಳಿದ್ದರು. ಆಕೆಯ ಪಲ್ಲಕ್ಕಿಯನ್ನು ಹೊತ್ತಿರುವ ಒಂಟೆ ಕೂಡ ಅವರೊಡನೆ ಹೊರಟಿತ್ತು. ಆಯಿಶ(ರ) ಪಲ್ಲಕ್ಕಿಯಲ್ಲೇ ಇದ್ದಾರೆಂದು ಅವರೆಲ್ಲವೂ ಭಾವಿಸಿದ್ದರು. ತಾವು ವಿಶ್ರಾಂತಿ ಪಡೆಯುವ ಸ್ಥಳಗಳಲ್ಲೆಲ್ಲಾ ಏನಾದರೂ ಬಿಟ್ಟುಹೋಗಿರಬಹುದೇ ಎಂದು ಬಹಳ ಹಿಂದಿನಿಂದ ಹಿಂಬಾಲಿಸುತ್ತಾ ಬರಲು ಪ್ರವಾದಿ) ರವರ ಸಫ್ವಾನ್ ಬಿನ್ ಮುಅತ್ತಲ್(ರ) ರನ್ನು ನೇಮಿಸಿದ್ದರು. ಬೆಳಗಾದಾಗ ಅವರು ಆ ಸ್ಥಳಕ್ಕೆ ತಲುಪಿದರು. ಅಲ್ಲಿ ಒಬ್ಬ ಮಹಿಳೆ ಪರದೆ ಹೊದ್ದು ಕುಳಿತಿರುವುದನ್ನು ಕಂಡರು. ಸಫ್ವಾನ್(ರ) ಇನ್ನಾ ಲಿಲ್ಲಾಹಿ ವಇನ್ನಾ ಇಲೈಹಿ ರಾಜಿಊನ್ ಎಂದು ಹೇಳುತ್ತಾ ಒಂಟೆಯಿಂದ ಇಳಿದರು. ಆಯಿಶ(ರ) ಒಂಟೆಯೇರಿದಾಗ ಅವರು ಅದರ ಕಡಿವಾಣವನ್ನು ಹಿಡಿದು ಮುಂದಿನಿಂದ ಸಾಗಿದರು. ಆಯಿಶ(ರ) ಸಪ್ವಾನ್(ರ) ರೊಂದಿಗೆ ಬರುವುದನ್ನು ಕಂಡಾಗ ಅಬ್ದುಲ್ಲಾ ಬಿನ್ ಉಬೈನ ಮುಖಂಡತ್ವದಲ್ಲಿ ಕಪಟವಿಶ್ವಾಸಿಗಳು ರೋಚಕ ಕಥೆ ಕಟ್ಟಿ ಅಪಪ್ರಚಾರ ಮಾಡಿದರು. ಮಿಸ್ತಹ್ ಬಿನ್ ಅಸಾಸರಂತಹ ಸಹಾಬಿಗಳು ಕೂಡ ಕಪಟವಿಶ್ವಾಸಿಗಳ ಮಾತನ್ನು ನಂಬಿದರು. ವಿಷಯ ತಿಳಿದಾಗ ಆಯಿಶ(ರ) ಆಘಾತಕ್ಕೊಳಗಾದರು.
ಅವರು ಇಂತಹ ಕೃತ್ಯವನ್ನು ಕನಸು-ಮನಸಿನಲ್ಲೂ ಊಹಿಸಿದವರಲ್ಲ. ಪ್ರವಾದಿ(ಸ) ರಿಗೂ ಸತ್ಯವೇನೆಂದು ತಿಳಿದಿರಲಿಲ್ಲ. ತಪ್ಪು ಮಾಡಿದ್ದರೆ ಅಲ್ಲಾಹನಲ್ಲಿ ಕ್ಷಮೆ ಕೇಳಲು ಪ್ರವಾದಿ(ಸ) ರವರು ಸಲಹೆ ನೀಡಿದರು. ಆದರೆ ಆಯಿಶ(ರ) ರಿಗೆ ಅಲ್ಲಾಹನಲ್ಲಿ ಅಪಾರ ಭರವಸೆಯಿತ್ತು. ತನ್ನ ನಿರಪರಾಧಿತನವನ್ನು ಅಲ್ಲಾಹು ಬಹಿರಂಗಪಡಿಸಿಯೇ ತೀರುತ್ತಾನೆಂದು ಅವರು ಬಲವಾಗಿ ನಂಬಿದ್ದರು. ಕೊನೆಗೆ ಅಲ್ಲಾಹು ಕುರ್ಆನ್ ಸೂಕ್ತಿಯನ್ನು ಅವತೀರ್ಣಗೊಳಿಸುವ ಮೂಲಕ ಅವರ ನಿರಪರಾಧಿತನವನ್ನು ಘೋಷಿಸಿದನು.
ತಯಮ್ಮುಮ್:
ಒಮ್ಮೆ ಒಂದು ದಂಡಯಾತ್ರೆಯಿಂದ ಹಿಂದಿರುಗುತ್ತಿದ್ದಾಗ ಪ್ರವಾದಿ(ಸ) ಮತ್ತು ಸಹಾಬಿಗಳು ಒಂದು ಕಡೆ ವಿಶ್ರಾಂತಿಗಾಗಿ ತಂಗಿದರು. ಆಗ ಆಯಿಶ(ರ) ತನ್ನ ಸರವನ್ನು ಕಳೆದುಕೊಂಡರು. ಪ್ರವಾದಿ(ಸ) ರವರು ಸಹಾಬಿಗಳೊಂದಿಗೆ ಸರವನ್ನು ಹುಡುಕಲು ಹೇಳಿದರು. ದೀರ್ಘ ಹುಡುಕಾಟದ ನಂತರ ಸರ ಸಿಕ್ಕಿತು. ಆದರೆ ಆಗಲೇ ತಡವಾಗಿತ್ತು. ಫಜ್ರ್ ನಮಾಝಿನ ಸಮಯವಾಯಿತು. ಸಹಾಬಿಗಳ ಬಳಿ ನೀರಿರಲಿಲ್ಲ. ನಮಾಝ್ ಕಝಾ ಆಗಬಹುದೋ ಎಂದು ಸಹಾಬಿಗಳು ಗಾಬರಿಯಾದರು. ಇಷ್ಟೆಲ್ಲಾ ಆದದ್ದು ಆಯಿಶ(ರ) ರಿಂದ ಎಂದು ಅಬೂಬಕರ್(ರ) ಮಗಳನ್ನು ಗದರಿಸಿದರು. ಆಗ ಅಲ್ಲಾಹು ನೀರು ಸಿಗದಿದ್ದರೆ ತಯಮ್ಮುಮ್ ಮಾಡುವ ಆಯತನ್ನು ಅವತೀರ್ಣಗೊಳಿಸಿದನು. ಅಬೂಬಕರ್(ರ) ರವರ ಕುಟುಂಬದ ಕಾರಣದಿಂದ ಮುಸ್ಲಿಮರಿಗೆ ಬಹಳ ಉಪಕಾರವಾಗಿದೆಯೆಂದು ಉಸೈದ್ ಬಿನ್ ಹುದೈರ್(ರ) ಹೇಳುತ್ತಿದ್ದರು.
ಸುಮಧುರ ದಾಂಪತ್ಯ:
ಪ್ರವಾದಿ(ಸ) ಮತ್ತು ಆಯಿಶ(ರ) ರವರ ದಾಂಪತ್ಯವು ಅತ್ಯಂತ ಸುಮಧುರವೂ ಯಶಸ್ವಿಯೂ ಆಗಿತ್ತು. ಪ್ರವಾದಿ(ಸ) ರವರು ತಮ್ಮೆಲ್ಲಾ ಪತ್ನಿಯರಿಗಿಂತಲೂ ಆಯಿಶ(ರ) ರನ್ನು ಅತಿ ಹೆಚ್ಚು ಪ್ರೀತಿಸುತ್ತಿದ್ದರು. ಒಮ್ಮೆ ಅಮ್ರ್ ಬಿನ್ ಆಸ್(ರ) ಅವರೊಡನೆ, ನೀವು ಅತಿಹೆಚ್ಚು ಪ್ರೀತಿಸುವ ವ್ಯಕ್ತಿ ಯಾರೆಂದು ಕೇಳಿದಾಗ, ಅವರು(ಸ) ಆಯಿಶ ಎಂದು ಉತ್ತರಿಸಿದ್ದರು. ಒಮ್ಮೆ ಪ್ರವಾದಿ(ಸ) ರವರು ಸಂತೋಷವಾಗಿದ್ದಾಗ, ತನಗಾಗಿ ಪ್ರಾರ್ಥಿಸಬೇಕೆಂದು ಆಯಿಶ(ರ) ವಿನಂತಿಸಿದರು. ಪ್ರವಾದಿ(ಸ) ರವರು ಪ್ರಾರ್ಥಿಸಿದರು- ಓ ಅಲ್ಲಾಹ್! ಆಯಿಶ ಈಗಾಗಲೇ ಮಾಡಿದ, ಮುಂದೆ ಮಾಡಲಿರುವ, ಬಹಿರಂಗವಾಗಿ ಮಾಡಿದ ಮತ್ತು ಗುಟ್ಟಾಗಿ ಮಾಡಿದ ಎಲ್ಲಾ ತಪ್ಪುಗಳನ್ನೂ ಕ್ಷಮಿಸು. ಇದನ್ನು ಕೇಳಿ ಆಯಿಶ(ರ) ತಲೆ ಮಡಿಲಿಗೆ ಬೀಳುವವರೆಗೂ ನಗುತ್ತಿದ್ದರು. ಪ್ರವಾದಿ(ಸ) ಕೇಳಿದರು- ಆಯಿಶ ನನ್ನ ಪ್ರಾರ್ಥನೆ ನಿನಗೆ ಇಷ್ಟವಾಯಿತೇ? ಆಯಿಶ(ರ) ಉತ್ತರಿಸಿದರು- ನಿಮ್ಮ ಪ್ರಾರ್ಥನೆ ನನಗೆ ಇಷ್ಟವಾಗದಿರುವುದಾದರೂ ಹೇಗೆ? ಆಯಿಶ(ರ) ಪ್ರವಾದಿ(ಸ) ರನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಒಂದು ಕ್ಷಣ ಕೂಡ ಅವರಿಂದ ದೂರವಾಗಲು ಇಷ್ಟಪಡುತ್ತಿರಲ್ಲಿಲ್ಲ. ಕೆಲವೊಮ್ಮೆ ಅವರು ಪ್ರವಾದಿ(ಸ) ರನ್ನು ಪ್ರೀತಿಯಿಂದ ನಯವಾಗಿ ಕೆಣಕುತ್ತಲೂ ಇದ್ದರು. ತನ್ನ ಮುಂದೆ ಇತರ ಪತ್ನಿಯರ ಪ್ರಶಂಸೆ ಮಾಡುವುದು ಅವರಿಗೆ ಇಷ್ಟವಿರಲಿಲ್ಲ. ಒಮ್ಮೆ ಪ್ರವಾದಿ(ಸ) ಖದೀಜಾ(ರ) ರನ್ನು ಹೊಗಳಿದಾಗ ಆಯಿಶ(ರ) ಆಕ್ಷೇಪ ಮಾಡಿದ್ದರು. ನಂತರ ಪ್ರವಾದಿ(ಸ) ರವರು ಕಾರಣವನ್ನು ತಿಳಿಸಿದಾಗ ಇನ್ನು ಮುಂದೆ ಹಾಗೆ ಮಾಡುವುದಿಲ್ಲವೆಂದು ಹೇಳಿದ್ದರು. ಒಮ್ಮೆ ಪ್ರವಾದಿ(ಸ) ರವರು ಆಯಿಶ(ರ) ರೊಂದಿಗೆ ಓಟದ ಸ್ಪರ್ಧೆ ಮಾಡೋಣ ಎಂದರು. ಆಯಿಶ(ರ) ಒಪ್ಪಿದರು. ಆಯಿಶ(ರ) ಆಗ ಹೆಚ್ಚು ದಪ್ಪಗಿರಲಿಲ್ಲ. ಓಟದಲ್ಲಿ ಅವರೇ ಗೆದ್ದರು. ಇನ್ನೊಂದು ಸಲ ಪ್ರವಾದಿ(ಸ) ರವರು ಆಯಿಶ(ರ) ರನ್ನು ಓಟದ ಸ್ಪರ್ಧೆಗೆ ಕರೆದರು. ಆಗ ಆಯಿಶ(ರ) ದಪ್ಪಗಾಗಿದ್ದರು. ಸ್ಪರ್ಧೆಯಲ್ಲಿ ಸೋತರು. ಆಗ ಪ್ರವಾದಿ(ಸ) ಹೇಳಿದರು, ಇದು ಅಂದಿನ ಸೋಲಿಗೆ ಪ್ರತೀಕಾರ. ಆಯಿಶ(ರ) ಹೇಳುತ್ತಿದ್ದರು. ಪ್ರವಾದಿ(ಸ) ರವರ ಪತ್ನಿಯರಲ್ಲಿ ನನಗಿಂತಲೂ ಹೆಚ್ಚು ಅದೃಷ್ಟವಂತರು ಯಾರೂ ಇಲ್ಲ. ಒಮ್ಮೆ ಒಬ್ಬ ಯಹೂದಿ ಪ್ರವಾದಿ(ಸ) ರವರ ಬಳಿಗೆ ಬಂದು ಅಸ್ಸಾಮು ಅಲೈಕುಂ (ನಿಮಗೆ ಮರಣ ಉಂಟಾಗಲಿ) ಎಂದನು. ಇದನ್ನು ಕೇಳಿದಾಗ ಆಯಿಶ(ರ) ಕೋಪೋದ್ರಿಕ್ತರಾದರು. ಅವರು ಬಹಳ ಖಾರವಾಗಿಯೇ ಪ್ರತಿಕ್ರಿಯಿಸಿದರು.
ಪ್ರವಾದಿ(ಸ) ರವರು ಆಯಿಶ(ರ) ಸಮಾಧಾನ ಪಡಿಸಿದರು. ಆಯಿಶ(ರ) ಪ್ರವಾದಿ(ಸ) ರೊಂದಿಗೆ ಬಹಳ ಸಲುಗೆಯಿಂದಿದ್ದರು. ಪ್ರವಾದಿ(ಸ) ರವರು ಕೂಡ ಆಕೆಯ ಉಪಸ್ಥಿತಿಯನ್ನು ಬಹಳ ಇಷ್ಟಪಡುತ್ತಿದ್ದರು
ಸರಳ ಜೀವನ:
ಪ್ರವಾದಿ(ಸ) ರವರ ಜೀವನ ಬಹಳ ಸರಳವಾಗಿತ್ತು. ಅವರು ಆಡಂಬರ ಪ್ರಿಯರಾಗಿರಲಿಲ್ಲ. ಆಯಿಶ(ರ) ಕೂಡ ಈ ಜೀವನಕ್ಕೆ ಒಗ್ಗಿಕೊಂಡಿದ್ದರು. ಕೆಲವೊಮ್ಮೆ ಅವರ ಒಲೆಯಲ್ಲಿ ತಿಂಗಳುಗಳ ಕಾಲ ಬೆಂಕಿ ಉರಿಯುತ್ತಿರಲಿಲ್ಲ. ನೀರು ಮತ್ತು ಖರ್ಜೂರ ಸೇವಿಸಿ ಅವರು ಮಲಗುತ್ತಿದ್ದರು. ಯಾರಾದರೂ ಏನಾದರೂ ಕೊಡುಗೆಯಾಗಿ ನೀಡಿದರೆ ಅದನ್ನು ಸೇವಿಸಿ ಹಸಿವು ಇಂಗಿಸಿಕೊಳ್ಳುತ್ತಿದ್ದರು. ಅವರ ಮನೆಯಲ್ಲಿ ದೀಪ ಉರಿಸಲು ಕೂಡ ಎಣ್ಣೆಯಿರುತ್ತಿರಲಿಲ್ಲ. ರಾತ್ರಿಗಳನ್ನು ಕತ್ತಲಲ್ಲಿಯೇ ಕಳೆಯಬೇಕಾಗುತ್ತಿತ್ತು. ಅವರ ಮನೆ ಯಾವುದೇ ಬಡವನ ಮನೆಗಿಂತ ಉತ್ತಮವಾಗಿರಲಿಲ್ಲ. ಒಂದು ಚಾಪೆ, ಒಂದು ತೆಳ್ಳಗಿನ ಚಾದರ, ಖರ್ಜೂರದ ಎಲೆಗಳನ್ನು ತುಂಬಿಸಿ ತಯಾರಿಸಿದ ದಿಂಬು, ಒಂದು ಚರ್ಮದ ಚೀಲ, ಒಂದು ಬಟ್ಟಲು ಮತ್ತು ನೀರು ಕುಡಿಯಲು ಒಂದು ಲೋಟ ಇವುಗಳೇ ಅವರ ಆಸ್ತಿ. ಪ್ರವಾದಿ(ಸ) ರವರ ಮರಣಾನಂತರವೂ ಅವರು ಸರಳವಾಗಿಯೇ ಬದುಕಿದರು. ಅವರು ಅತಿಹೆಚ್ಚು ಉಪವಾಸ ಆಚರಿಸುತ್ತಿದ್ದರು.
ಕೊಡುಗೈ ದಾನಿ:
ಆಯಿಶ(ರ) ಕೊಡುಗೈ ದಾನಿಯಾಗಿದ್ದರು. ತಮ್ಮ ಬಳಿಯಿದ್ದದ್ದನ್ನೆಲ್ಲಾ ಅವರು ದಾನ ಮಾಡುತ್ತಿದ್ದರು. ಒಮ್ಮೆ ಒಂದೇ ಉಸಿರಿನಲ್ಲಿ ಅವರು 70,000 ದಿರ್ಹಂ ದಾನ ಮಾಡಿದರು. ಇನ್ನೊಮ್ಮೆ ಅವರಿಗೆ ಖಲೀಫ ಮುಆವಿಯ(ರ) ಸಿರಿಯಾದಿಂದ 1,00,000 ದಿರ್ಹಂ ಕಳುಹಿಸಿಕೊಟ್ಟರು. ಆಯಿಶ(ರ) ಅವುಗಳನ್ನೆಲ್ಲಾ ದಾನ ಮಾಡಿಬಿಟ್ಟರು. ಇನ್ನೊಂದು ಸಲ ಅವರ ಸೋದರಿ ಪುತ್ರ ಅಬ್ದುಲ್ಲಾ ಬಿನ್ ಝುಬೈರ್ ಅವರಿಗೆ 1,00,000 ದಿರ್ಹಂ ಕೊಟ್ಟರು. ಆಯಿಶ(ರ) ಒಂದು ನಾಣ್ಯವನ್ನೂ ಇಟ್ಟುಕೊಳ್ಳದೆ ಎಲ್ಲವನ್ನೂ ದಾನ ಮಾಡಿದರು. ಒಮ್ಮೆ ಒಬ್ಬ ಮಹಿಳೆ ಇಬ್ಬರು ಮಕ್ಕಳೊಂದಿಗೆ ಆಯಿಶ(ರ) ರವರ ಬಳಿಗೆ ಬಂದು ತಿನ್ನಲು ಏನಾದರೂ ಕೊಡಬೇಕೆಂದು ಬೇಡಿದಳು. ಆಯಿಶ(ರ) ರವರ ಮನೆಯಲ್ಲಿ ಮೂರು ಖರ್ಜೂರಗಳ ಹೊರತು ಬೇರೇನೂ ಇರಲಿಲ್ಲ. ಆಯಿಶ(ರ) ಆ ಮೂರು ಖರ್ಜೂರಗಳನ್ನು ಆ ಮಹಿಳೆಗೆ ಕೊಟ್ಟರು. ಆಕೆ ಎರಡು ಖರ್ಜೂರಗಳನ್ನು ಮಕ್ಕಳಿಗೆ ಕೊಟ್ಟು ಮೂರನೆಯದನ್ನು ತಿನ್ನಲು ಬಾಯಿಗೆ ಹಾಕುವಾಗ ಮಕ್ಕಳು ಆ ಖರ್ಜೂರ ಬೇಕೆಂದು ಹೇಳಿದರು. ಮಹಿಳೆ ಆ ಖರ್ಜೂರವನ್ನು ಎರಡು ಹೋಳು ಮಾಡಿ ಇಬ್ಬರು ಮಕ್ಕಳಿಗೆ ಕೊಟ್ಟು ಅಲ್ಲಿಂದ ಹೊರಟು ಹೋದರು, ಈ ದೃಶ್ಯವನ್ನು ಕಂಡು ಆಯಿಶ(ರ) ರವರ ಕರುಳು ಹಿಂಡಿದಂತಾಯಿತು.
ಪ್ರವಾದಿ(ಸ) ರವರ ಕೊನೆಯ ದಿನಗಳು:
ಪ್ರವಾದಿ(ಸ) ರವರು ತಮ್ಮ ಕೊನೆಯ ದಿನಗಳನ್ನು ಆಯಿಶ(ರ) ರವರ ಮನೆಯಲ್ಲೇ ಕಳೆದರು. ಆಯಿಶ(ರ) ಹೇಳುತ್ತಾರೆ- ನನ್ನ ಮನೆಯಲ್ಲಿ ನನ್ನ ಸರದಿಯಲ್ಲಿ, ನನ್ನ ಎದೆ ಮತ್ತು ಮಡಿಲಲ್ಲಿ ಮಲಗಿ ಪ್ರವಾದಿ(ಸ) ರವರು ನಿಧನರಾದದ್ದು ಅಲ್ಲಾಹು ನನಗೆ ಕರುಣಿಸಿದ ಅತಿದೊಡ್ಡ ಅನುಗ್ರಹವಾಗಿದೆ.
ಹಾಗೆಯೇ ಪ್ರವಾದಿ(ಸ) ರವರ ಮರಣಕ್ಕೆ ಮುನ್ನ ಅಲ್ಲಾಹು ನನ್ನ ಮತ್ತು ಅವರ ಜೊಲ್ಲನ್ನು ಒಟ್ಟಿಗೆ ಸೇರಿಸಿದನು. ಅದು ಹೇಗೆಂದರೆ ಅಬ್ದುರ್ರಹ್ಮಾನ್ ನನ್ನ ಮನೆಗೆ ಬಂದರು. ಅವರ ಕೈಯಲ್ಲಿ ಮಿಸ್ವಾಕ್ ಇತ್ತು. ಪ್ರವಾದಿ(ಸ) ನನ್ನ ಮೇಲೆ ಒರಗಿಕೊಂಡು ಆ ಮಿಸ್ವಾಕ್ ಅನ್ನು ನೋಡುತ್ತಿದ್ದರು. ಪ್ರವಾದಿ(ಸ) ರು ಮಿಸ್ವಾಕ್ ಮಾಡಲು ಬಯಸುತ್ತಿದ್ದಾರೆ ಎಂದು ನನಗೆ ಭಾಸವಾಯಿತು. ನಾನು ಅದನ್ನು ಪಡೆದುಕೊಂಡೆ. ಅದು ಒರಟಾಗಿತ್ತು. ನಾನು ಅದನ್ನು ಜಗಿದು ಮೃದುಗೊಳಿಸಿ ಅವರಿಗೆ ಕೊಟ್ಟೆ. ಅವರು ಅದರಿಂದ ಹಲ್ಲು ಉಜ್ಜಿದರು. ಪ್ರವಾದಿ(ಸ) ರವರು ಆಯಿಶ(ರ) ರವರ ಮನೆಯಲ್ಲಿ ಕೊನೆಯುಸಿರೆಳೆದರು. ಅಲ್ಲಿಯೇ ಅವರನ್ನು ದಫನ ಮಾಡಲಾಯಿತು.
ಹದೀಸ್ ವರದಿ:
ಅಬೂಹುರೈರ(ರ) ಮತ್ತು ಅಬ್ದುಲ್ಲಾ ಬಿನ್ ಉಮರ್(ರ) ರನ್ನು ಬಿಟ್ಟರೆ ಅತಿಹೆಚ್ಚು ಹದೀಸ್ ವರದಿ ಮಾಡಿದ ಹೆಗ್ಗಳಿಕೆ ಆಯಿಶ(ರ) ರಿಗೆ ಸಲ್ಲುತ್ತದೆ. ಇವರು ಒಟ್ಟು 2210 ಹದೀಸ್ಗಳನ್ನು ವರದಿ ಮಾಡಿದ್ದಾರೆ. ದಾಂಪತ್ಯ ಜೀವನದ ಅತಿಸೂಕ್ಷ್ಮ ವಿಷಯಗಳ ಕುರಿತು ಆಯಿಶ(ರ) ಹದೀಸ್ಗಳನ್ನು ವರದಿ ಮಾಡಿದ್ದಾರೆ. ಪ್ರವಾದಿ(ಸ) ರವರ ಮರಣಾನಂತರ ಹಿರಿಯ ಸಹಾಬಿಗಳು ಕೂಡ ಆಕೆಯ ಬಳಿ ಸಂಶಯಗಳನ್ನು ನಿವಾರಿಸುತ್ತಿದ್ದರು. ಪ್ರವಾದಿ(ಸ) ರವರ ಸಹಾಬಿಗಳಾದ ನಮಗೆ ಯಾವುದೇ ವಿಷಯದ ಬಗ್ಗೆ ಸಂದೇಹ ಉಂಟಾದರೆ ನಾವು ಅದರ ಬಗ್ಗೆ ಆಯಿಶಾ(ರ) ರಲ್ಲಿ ಕೇಳುತ್ತಿದ್ದೆವು. ಅವರು ಅದರ ಬಗ್ಗೆ ತಿಳಿಸಿಕೊಡುತ್ತಿದ್ದರು ಎಂದು ಅಬೂ ಮೂಸಾ ಅಲ್-ಅಶ್ಅರಿ(ರ) ಹೇಳುತ್ತಿದ್ದರು.
ಮರಣ:
ಹಿಜರಿ ಶಕೆ 58, ರಮದಾನ್ 17ನೇ ದಿನ ತಮ್ಮ 66ನೇ ವಯಸ್ಸಿನಲ್ಲಿ ಆಯಿಶ(ರ) ಇಹಲೋಕಕ್ಕೆ ವಿದಾಯಕೋರಿದರು. ಅವರನ್ನು ಮದೀನದ ಬಕೀಅ್ ಕಬರಸ್ತಾನದಲ್ಲಿ ದಫನ ಮಾಡಲಾಯಿತು.