ಜನನ ಕ್ರಿ.ಶ. 780 (ಹಿ.ಶ. 164) ಮರಣ ಕ್ರಿ.ಶ. 855 (ಹಿ.ಶ. 241)
ವಿಶೇಷತೆಗಳು:
ನಾಲ್ಕು ಮಹಾನ್ ಇಮಾಂಗಳಲ್ಲಿ ನಾಲ್ಕನೆಯವರು.
ಇಮಾಮುಸ್ಸುನ್ನ ಎಂಬ ಹೆಸರಲ್ಲಿ ಖ್ಯಾತರಾದವರು.
ಮುಸ್ನದ್ ಅಹ್ಮದ್ ಎಂಬ ಪ್ರಸಿದ್ಧ ಹದೀಸ್ ಗ್ರಂಥದ ಲೇಖಕರು.
ವಂಶ:
ತಂದೆ: ಮುಹಮ್ಮದ್ ಬಿನ್ ಹಂಬಲ್ ಬಿನ್ ಹಿಲಾಲ್ ಬಿನ್ ಅಸದ್
ತಾಯಿ: ಸಫಿಯಾ ಬಿನ್ತ್ ಮೈಮೂನಾ ಬಿನ್ತ್ ಅಬ್ದುಲ್ ಮಲಿಕ್
ಜನನ ಮತ್ತು ಬೆಳವಣಿಗೆ:
ಇಮಾಂ ಅಹ್ಮದ್ ಬಿನ್ ಹಂಬಲ್(ರ) ಹಿ.ಶ. 164 ರಬೀಉಲ್-ಅವ್ವಲ್ ತಿಂಗಳಲ್ಲಿ ಜನಿಸಿದರು. ಅವರ ಜನ್ಮಸ್ಥಳದ ವಿಷಯದಲ್ಲಿ ಇತಿಹಾಸಕಾರರು ಭಿನ್ನಮತದಲ್ಲಿದ್ದಾರೆ. ಅವರು ಈಗ ತುರ್ಕಮೆನಿಸ್ತಾನದಲ್ಲಿರುವ ಖುರಾಸಾನ್ನ ಮರ್ವ್ ಎಂಬ ಸ್ಥಳದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಅಲ್ಲಿ ಅವರ ತಂದೆ ಮತ್ತು ಅಜ್ಜ ಕೆಲಸ ಮಾಡುತ್ತಿದ್ದರು. ಅವರ ತಾಯಿ ಮರ್ವನಿಂದ ಗರ್ಭಿಣಿಯಾಗಿ ಬಾಗ್ದಾದ್ಗೆ ಬಂದು ಅಲ್ಲಿ ಅವರಿಗೆ ಜನ್ಮ ನೀಡಿದರೆಂದು ಹೇಳಲಾಗುತ್ತದೆ.
ಅಹ್ಮದ್ ಬಿನ್ ಹಂಬಲ್ ಚಿಕ್ಕ ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡು ಅನಾಥರಾದರು. ಅವರು ಹೇಳುತ್ತಿದ್ದರು: “ನಾನು ನನ್ನ ಅಜ್ಜ ಅಥವಾ ತಂದೆಯನ್ನು ನೋಡಿಲ್ಲ.” ಸರಿಯಾದ ಅಭಿಪ್ರಾಯ ಪ್ರಕಾರ ಅವರು ಹುಟ್ಟಿದ ನಂತರ ತಂದೆ ನಿಧನರಾದರು. ಆಗ ಅವರು ಚಿಕ್ಕ ಮಗುವಾಗಿದ್ದ ಕಾರಣ ತಂದೆಯನ್ನು ನೋಡಿದ ನೆನಪಿರಲಿಲ್ಲ. ಅವರ ತಂದೆ ಬಾಗ್ದಾದ್ನಲ್ಲಿ ಒಂದು ಸಣ್ಣ ತುಂಡು ಭೂಮಿಯನ್ನು ಮತ್ತು ಸಣ್ಣ ಇಳುವರಿಯನ್ನು ಬಿಟ್ಟುಹೋಗಿದ್ದರು. ಅದು ಅವರ ಜೀವನೋಪಾಯಕ್ಕೆ ಸಾಕಾಗುತ್ತಿತ್ತು.
ಅಹ್ಮದ್ ಬಿನ್ ಹಂಬಲ್ ಬಗ್ದಾದ್ನಲ್ಲಿ ಬೆಳೆದು ಅಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ಅಂದು ಬಾಗ್ದಾದ್ ವಿಭಿನ್ನ ನಿಲುವುಗಳು ಮತ್ತು ಉದ್ದೇಶಗಳನ್ನು ಹೊಂದಿದ್ದ ಜನರಿಂದ ತುಂಬಿತ್ತು. ಅದು ಎಲ್ಲಾ ರೀತಿಯ ಜ್ಞಾನ ಮತ್ತು ಕಲೆಗಳ ಆಸ್ಥಾನವಾಗಿತ್ತು. ಅಲ್ಲಿ ಕುರ್ಆನ್ ಪಾರಾಯಣ ಶಾಸ್ತ್ರಜ್ಞರು, ಹದೀಸ್ ಶಾಸ್ತ್ರಜ್ಞರು, ಸೂಫಿಗಳು, ಭಾಷಾಶಾಸ್ತ್ರಜ್ಞರು, ದಾರ್ಶನಿಕರು ಮತ್ತು ಯುಕ್ತಿವಾದಿಗಳಿದ್ದರು. ಅದು ಇಸ್ಲಾಮಿಕ್ ಜಗತ್ತಿನ ಮಹಾನಗರವೆಂಬ ಪ್ರಸಿದ್ಧಿಯನ್ನು ಪಡೆದಿತ್ತು.
ವಿದ್ಯಾಭ್ಯಾಸ:
ಕುರ್ಆನ್, ಹದೀಸ್, ಭಾಷಾಶಾಸ್ತ್ರ, ಸಹಾಬಿಗಳು ಮತ್ತು ತಾಬಿಊನ್ಗಳ ಚರಿತ್ರೆ, ಪ್ರವಾದಿ ಮುಹಮ್ಮದ್(ಸ) ರವರ ಸ್ಥಿತಿಗತಿಗಳು ಮತ್ತು ಅವರ ಜೀವನಚರಿತ್ರೆ ಸೇರಿದಂತೆ ಕಲಿಯಲು ಸಾಧ್ಯವಾಗುವ ಎಲ್ಲಾ ವಿಷಯಗಳಲ್ಲೂ ಇಮಾಂ ಅಹ್ಮದ್(ರ) ಪಾರಂಗತರಾಗಬೇಕೆಂದು ಅವರ ತಾಯಿ ಬಯಸಿದ್ದರು. ಈ ಶಿಕ್ಷಣ ಅಥವಾ ಈ ನಿರ್ದೇಶನವು ಇಮಾಂ ಅಹ್ಮದ್ರ ಮಾನಸಿಕ ಒಲವಿಗೆ ಅನುಗುಣವಾಗಿತ್ತು. ಅವರು ಮಗುವಾಗಿರುವಾಗಲೇ ಅವರಿಗೆ ಕುರ್ಆನ್ ಕಲಿಸಿದರು. ಆದ್ದರಿಂದ ಅವರು ಚಿಕ್ಕಂದಿನಲ್ಲೇ ಕುರ್ಆನ್ ಕಂಠಪಾಠ ಮಾಡಿದರು. ಕುರ್ಆನ್ ಕಂಠಪಾಠ ಮಾಡಿ, ಭಾಷಾಜ್ಞಾನವನ್ನು ಸಂಪಾದಿಸಿದ ನಂತರ ಅವರು ಇತರ ವಿದ್ಯೆಗಳ ಕಡೆಗೆ ಗಮನ ಹರಿಸಿದರು.
ಇಮಾಂ ಅಹ್ಮದ್ ತನ್ನ ಜೀವನದ ಆರಂಭದಲ್ಲಿ ಹದೀಸ್ ಮತ್ತು ಅವರ ಕ್ಷೇತ್ರವನ್ನು ಆರಿಸಿಕೊಂಡರು. ಅವರು ಹದೀಸ್ ಕ್ಷೇತ್ರವನ್ನು ಆರಿಸುವುದಕ್ಕೆ ಮೊದಲು, ಕರ್ಮಶಾಸ್ತ್ರಜ್ಞರ ಮಾರ್ಗವನ್ನು ಅನುಸರಿಸಿದ್ದರು ಮತ್ತು ಅವರು ಮೊತ್ತಮೊದಲು ಅಬೂ ಹನೀಫರ ಶಿಷ್ಯರಾಗಿದ್ದ ಅಬೂ ಯೂಸುಫ್ರಿಂದ ಹದೀಸ್ ವರದಿ ಮಾಡಿದರೆಂದು ಹೇಳಲಾಗುತ್ತದೆ. ಅವರು ಹೇಳುತ್ತಿದ್ದರು: “ನಾನು ಮೊತ್ತಮೊದಲು ಹದೀಸ್ ಬರೆದದ್ದು ಅಬೂ ಯೂಸುಫ್ರಿಂದ.”
ಹಿ. 179 ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಇಮಾಂ ಅಹ್ಮದ್ ಬಗ್ದಾದಿನ ಹದೀಸ್ ವಿದ್ವಾಂಸರಾದ ಹುಶೈಮ್ ಬಿನ್ ಬಶೀರ್ ಬಿನ್ ಅಬೂ ಹಾಝಿಮ್ ಅಲ್ವಾಸಿತಿಯವರ ಬಳಿ ಹದೀಸ್ ಕಲಿಯಲು ಆರಂಭಿಸಿದರು. ಹಿ. 183 ರಲ್ಲಿ ಅವರು ನಿಧನರಾಗುವ ತನಕ ಇಮಾಂ ಅಹ್ಮದ್ ಅವರಲ್ಲಿಯೇ ಹದೀಸ್ ಕಲಿತರು. ನಂತರ ಹಿ. 186 ರ ತನಕ ಹದೀಸ್ಗಳನ್ನು ಹುಡುಕುತ್ತಾ ಇರಾಕಿನ ವಿವಿಧ ಪ್ರದೇಶಗಳಲ್ಲಿ ಸಂಚರಿಸಿದರು.
ಹಿ. 186 ರಿಂದ ಅವರು ಹದೀಸ್ ಹುಡುಕುವ ಪ್ರಯಾಣ ಆರಂಭವಾಯಿತು. ಅವರು ಹಿಜಾಝ್, ಬಸ್ರ, ಯಮನ್, ತಿಹಾಮ ಮುಂತಾದ ಎಲ್ಲ ಪ್ರದೇಶಗಳಿಗೂ ಸಂಚರಿಸಿದರು. ಹಿ. 187 ರಲ್ಲಿ ಹದೀಸ್ ಹುಡುಕುತ್ತಾ ಅವರು ಹಿಜಾಝ್ಗೆ ಹೋದಾಗ ಅಲ್ಲಿ ಇಮಾಂ ಶಾಫಿಈಯವರನ್ನು ಭೇಟಿಯಾಗಿ ಅವರ ಶಿಷ್ಯತ್ವವನ್ನು ಪಡೆದಿದ್ದರು. ಅವರ ಕೂಫಾ ಪ್ರಯಾಣವು ಅತ್ಯಂತ ದುರ್ಗಮವಾಗಿತ್ತು. ಅವರು ಹೇಳುತ್ತಿದ್ದರು: “ನನ್ನಲ್ಲಿ 90 ದೀನಾರ್ ಇದ್ದಿದ್ದರೆ ನಾನು ರಯ್ಯ್ಗೆ ಹೋಗಿ ಜರೀರ್ ಬಿನ್ ಅಬ್ದುಲ್ ಹಮೀದ್ರಿಂದ ಹದೀಸ್ ಸಂಗ್ರಹಿಸುತ್ತಿದ್ದೆ. ನನ್ನ ಸಹಪಾಠಿಗಳೆಲ್ಲಾ ಅಲ್ಲಿಗೆ ಹೋಗಿದ್ದರು. ಆದರೆ ನನ್ನಲ್ಲಿ ಹಣವಿರಲಿಲ್ಲ.” ಅವರು ಹೇಳುತ್ತಿದ್ದರು: “ನಾನು ಐದು ಸಲ ಹಜ್ಜ್ ನಿರ್ವಹಿಸಿದ್ದೇನೆ. ಅದರಲ್ಲಿ ಮೂರು ಸಲ ನಡೆದುಕೊಂಡೇ ಹೋಗಿದ್ದೇನೆ. ಕೆಲವು ಸಲ ದಾರಿ ತಪ್ಪಿ ನಾನು ಎಲ್ಲೆಲ್ಲಿಗೋ ಹೋಗಿದ್ದೂ ಇದೆ.”
ಅಗ್ನಿಪರೀಕ್ಷೆ:
ಇಮಾಂ ಅಹ್ಮದ್ ಬಿನ್ ಹಂಬಲ್(ರ) ರನ್ನು ಅಗ್ನಿಪರೀಕ್ಷೆಗೆ ತಳ್ಳಿದ ವಿಷಯ ಕುರ್ಆನ್ ಸೃಷ್ಟಿಯೋ ಅಲ್ಲವೋ ಎಂಬ ವಿಷಯದಲ್ಲಿರುವ ತರ್ಕವಾಗಿತ್ತು. ಖಲೀಫ ಮಅ್-ಮೂನ್ ಮತ್ತು ಅವರ ಸಂಗಡಿಗರು ಮುಅತಝಿಲಿಗಳಾಗಿದ್ದು ಕುರ್ಆನ್ ಸೃಷ್ಟಿಯೆಂದು ವಾದಿಸುತ್ತಿದ್ದರು. ತಮ್ಮ ಈ ಅಭಿಪ್ರಾಯವನ್ನು ಎಲ್ಲರೂ ಅಂಗೀಕರಿಸಬೇಕೆಂದು ಅವರು ರಾಜಾಜ್ಞೆ ಹೊರಡಿಸಿದರು. ಆದರೆ ಅಹ್ಮದ್ ಬಿನ್ ಹಂಬಲ್ ಈ ಅಭಿಪ್ರಾಯವನ್ನು ಒಪ್ಪಲಿಲ್ಲ. ಬದಲಾಗಿ ಅವರು ಕುರ್ಆನ್ ಅಲ್ಲಾಹನ ವಚನವಾಗಿದ್ದು ಅದು ಸೃಷ್ಟಿಯಲ್ಲ ಎಂದು ಬಲವಾಗಿ ವಾದಿಸಿದರು. ಇದರಿಂದ ಅವರು ಖಲೀಫರಿಂದ ತೀವ್ರ ರೀತಿಯ ಹಿಂಸೆಯನ್ನು ಅನುಭವಿಸಿದರು. ಈ ಅಗ್ನಿಪರೀಕ್ಷೆಯು ಮಅಮೂನ್ರ ಕಾಲದಿಂದ ತೊಡಗಿ ನಂತರ ಮುಅತಸಿಮ್ ಹಾಗೂ ವಾಸಿಕ್ರವರ ಕಾಲದಲ್ಲೂ ಮುಂದುವರಿಯಿತು. ಅವರು ಇಪ್ಪತ್ತೆಂಟು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದರು.
ಮಅಮೂನ್ ಖಲೀಫ ಆಗಿ ಅಧಿಕಾರ ಸ್ವೀಕರಿಸಿದಾಗ, ಮುಅತಝಿಲಗಳು ಅವರನ್ನು ಸುತ್ತುವರಿದರು. ಅವರ ಆಪ್ತರಲ್ಲಿ ಹೆಚ್ಚಿನವರು ಅವರೇ ಆಗಿದ್ದರು. ಖಲೀಫರು ಮುಅತಝಿಲಿ ನಾಯಕರಾದ ಅಬುಲ್ ಹುಝೈಲ್ ಅಲ್-ಅಲ್ಲಾಫ್ ರವರ ವಿದ್ಯಾರ್ಥಿಯಾಗಿದ್ದದ್ದು ಇದಕ್ಕೆ ಕಾರಣವೆಂದು ಹೇಳಲಾಗುತ್ತದೆ. ಖಲೀಫರ ಆಸ್ಥಾನದಲ್ಲಿ ಯಾವುದೇ ಚರ್ಚೆ ನಡೆಯುವಾಗಲೂ ಮುತಝಿಲಿಗಳು ಮುಂದೆ ನಿಂತು ವಾದಿಸುತ್ತಿದ್ದರು. ಅವರು ತಮ್ಮ ತರ್ಕದಲ್ಲಿ ಹೆಚ್ಚಾಗಿ ಬುದ್ಧಿಗೆ ಪ್ರಾಮುಖ್ಯತೆ ನೀಡುತ್ತಿದ್ದರು ಮತ್ತು ಬುದ್ಧಿಯ ಆಧಾರದಲ್ಲಿ ವಾದಿಸುವುದರಲ್ಲಿ ಪರಿಣತರಾಗಿದ್ದರು. ಇದು ಖಲೀಫರ ಮೇಲೆ ಬಹಳ ಪ್ರಭಾವ ಬೀರಿತ್ತು. ಖಲೀಫ ಅವರೊಡನೆ ಎಷ್ಟು ಆತ್ಮೀಯರಾದರೆಂದರೆ ಅವರನ್ನೇ ತನ್ನ ಮಂತ್ರಿಗಳನ್ನಾಗಿ ಮತ್ತು ಆಪ್ತರನ್ನಾಗಿ ಮಾಡಿಕೊಂಡು ಅವರ ಮಾತಿನಂತೆಯೇ ನಡೆಯುತ್ತಿದ್ದರು.
ಖಲೀಫರ ಬಳಿ ತಮಗಿರುವ ಸ್ಥಾನಮಾನವನ್ನು ಅರ್ಥಮಾಡಿಕೊಂಡ ಮುಅತಝಿಲಿಗಳು ಜನರ ಮಧ್ಯೆ ತಮ್ಮ ಸಿದ್ಧಾಂತವನ್ನು ಹರಡಲು ಇದೇ ತಕ್ಕ ಸಮಯವೆಂದು ಚಿಂತಿಸಿ ಅದಕ್ಕೆ ಕುರ್ಆನ್ ಸೃಷ್ಟಿಯೆಂಬ ತಮ್ಮ ವಾದವನ್ನು ಬಳಸಿಕೊಂಡರು. ಹಿ. 212 ರಲ್ಲಿ ಅವರು ಈ ವಾದವನ್ನು ಬಹಿರಂಗಪಡಿಸಿ ಅದನ್ನು ವಿರೋಧಿಸುವವರೊಂದಿಗೆ ಆಸ್ಥಾನದಲ್ಲೇ ವಾದಿಸಲು ಪ್ರಾರಂಭಿಸಿದರು. ಆದರೆ ಆಗ ಈ ವಾದವನ್ನು ಜನರ ಮೇಲೆ ಬಲವಂತವಾಗಿ ಹೇರಲಾಗಿರಲಿಲ್ಲ. ಇಷ್ಟವಿದ್ದವರು ಈ ವಾದವನ್ನು ಸ್ವೀಕರಿಸಬಹುದು. ಇಷ್ಟವಿಲ್ಲದವರು ಬಿಡಬಹುದು ಎಂಬ ವಾತಾವರಣವಿತ್ತು. ಆದರೆ ಖಲೀಫ ಮಅಮೂನ್ ನಿಧನರಾದ ಹಿ. 218 ನೇ ವರ್ಷದಲ್ಲಿ ಕುರ್ಆನ್ ಸೃಷ್ಟಿಯೆಂಬ ವಾದವನ್ನು ಸ್ವೀಕರಿಸಲು ಜನರನ್ನು ಬಲವಂತಪಡಿಸುವ ಪ್ರಕ್ರಿಯೆ ಆರಂಭವಾಯಿತು. ಈಗಿನ ಸಿರಿಯಾದ ರಕ್ಕದಲ್ಲಿರುವ ತನ್ನ ಆಸ್ಥಾನದಿಂದ ಖಲೀಫ ಈ ಸುತ್ತೋಲೆಯನ್ನು ಬಗ್ದಾದಿನ ತನ್ನ ರಾಯಭಾರಿ ಇಸ್ಹಾಕ್ ಬಿನ್ ಇಬ್ರಾಹೀಂರಿಗೆ ಕಳುಹಿಸಿದರು.
ಇಸ್ಹಾಕ್ ಬಗ್ದಾದಿನ ನ್ಯಾಯಾಧೀಶರು ಮತ್ತು ವಿದ್ವಾಂಸರನ್ನು ಕರೆಸಿ ಅವರೊಡನೆ ಕುರ್ಆನ್ನ ಬಗ್ಗೆ ಅಭಿಪ್ರಾಯ ಕೇಳಿದರು. ಅದು ಸೃಷ್ಟಿಯೋ ಅಲ್ಲವೋ ಎಂದು ಹೇಳುವಂತೆ ಆದೇಶಿಸಿದರು. ಅವರು ನೀಡಿದ ಉತ್ತರಗಳನ್ನು ಖಲೀಫ ಮಅಮೂನ್ಗೆ ಕಳುಹಿಸಲಾಯಿತು. ತನ್ನ ವಾದವನ್ನು ಸ್ವೀಕರಿಸದವರನ್ನು ಬಲವಂತವಾಗಿ ಸ್ವೀಕರಿಸುವಂತೆ ಮಾಡಲು ಮತ್ತು ವಿರೋಧಿಸಿದರೆ ಚಿತ್ರಹಿಂಸೆ ನೀಡಲು ಖಲೀಫ ಆದೇಶಿಸಿದರು. ಅದರಂತೆ ಅಹ್ಮದ್ ಬಿನ್ ಹಂಬಲ್ ಸೇರಿದಂತೆ ಹದೀಸ್ ವಿದ್ವಾಂಸರು, ಕರ್ಮಶಾಸ್ತ್ರಜ್ಞರು ಮತ್ತು ಮುಜ್ಜಿಗಳನ್ನು ಆಸ್ಥಾನಕ್ಕೆ ಕರೆಸಲಾಗಿ ಅವರೊಡನೆ ಎರಡನೇ ಬಾರಿ ಅಭಿಪ್ರಾಯ ಕೇಳಲಾಯಿತು. ಖಲೀಫರ ವಾದವನ್ನು ಅಂಗೀಕರಿಸದಿದ್ದರೆ ಕಠಿಣ ಶಿಕ್ಷೆ ಮತ್ತು ಹಿಂಸೆಯ ಬಗ್ಗೆ ಎಚ್ಚರಿಕೆ ನೀಡಲಾಯಿತು. ಆಗ ಅವರಲ್ಲಿ ನಾಲ್ವರನ್ನು ಹೊರತುಪಡಿಸಿ ಉಳಿದವರೆಲ್ಲವೂ ಖಲೀಫರ ವಾದವನ್ನು ಒಪ್ಪಿಕೊಂಡರು.
ಅಹ್ಮದ್ ಬಿನ್ ಹಂಬಲ್, ಮುಹಮ್ಮದ್ ಬಿನ್ ನೂಹ್, ಅಲ್-ಕವಾರೀರಿ ಮತ್ತು ಸಜ್ಜಾದ ಎಂಬ ನಾಲ್ವರು ಖಲೀಫರ ವಾದವನ್ನು ವಿರೋಧಿಸಿದರು. ಅವರನ್ನು ಸಂಕೋಲೆಗಳಿಂದ ಬಿಗಿದು ಚಾವಟಿಯಿಂದ ಬಾರಿಸಿ ಥಳಿಲಾಯಿತು. ಅವರು ನಾಲ್ವರೂ ಸಂಕೋಲೆ ಬಿಗಿದ ಸ್ಥಿತಿಯಲ್ಲೇ ರಾತ್ರಿ ಕಳೆದರು. ಮರುದಿನ ಬೆಳಗ್ಗೆ ಅವರೊಡನೆ ಪುನಃ ಅಭಿಪ್ರಾಯ ಕೇಳಲಾದಾಗ ಸಜ್ಜಾದ ಎಂಬವರು ತಮ್ಮ ವಾದದಿಂದ ಹಿಂದೆ ಸರಿದು ಖಲೀಫರ ವಾದವನ್ನು ಒಪ್ಪಿಕೊಂಡರು. ಅವರನ್ನು ಸ್ವತಂತ್ರಗೊಳಿಸಲಾಯಿತು. ಮರುದಿನ ಅಲ್-ಕವಾರೀರಿ ಎಂಬವರು ಖಲೀಫರ ವಾದವನ್ನು ಒಪ್ಪಿಕೊಂಡಾಗ ಅವರನ್ನೂ ಸ್ವತಂತ್ರಗೊಳಿಸಲಾಯಿತು.
ಆದರೆ ಅಹ್ಮದ್ ಬಿನ್ ಹಂಬಲ್ ಮತ್ತು ಮುಹಮ್ಮದ್ ಬಿನ್ ನೂಹ್ ತಮ್ಮ ಅಭಿಪ್ರಾಯದಲ್ಲೇ ಸ್ಥಿರವಾಗಿ ನಿಂತರು. ಖಲೀಫರ ಆಜ್ಞೆ ಮೇರೆಗೆ ಅವರನ್ನು ತುರ್ಸೂಸ್ನಲ್ಲಿರುವ ಖಲೀಫರ ಆಸ್ಥಾನಕ್ಕೆ ಸಂಕೋಲೆ ಬಿಗಿದ ಸ್ಥಿತಿಯಲ್ಲೇ ನಡೆಸಿಕೊಂಡು ಹೋಗಲಾಯಿತು. ದಾರಿ ಮಧ್ಯೆ ಮುಹಮ್ಮದ್ ಬಿನ್ ನೂಹ್ ಅಸುನೀಗಿದರು. ಖಲೀಫರ ವಾದವನ್ನು ಒಪ್ಪಿಕೊಂಡವರನ್ನೂ ಆಸ್ಥಾನಕ್ಕೆ ಬರುವಂತೆ ಹೇಳಲಾಯಿತು. ಆದರೆ ಅವರು ಆಸ್ಥಾನ ತಲುಪುವಷ್ಟರಲ್ಲಿ ಖಲೀಫ ಮಅಮೂನ್ ನಿಧನರಾದರು.
ಆದರೆ ನಿಧನಕ್ಕೆ ಮುಂಚೆ ಮಅಮೂನ್ ತಮ್ಮ ಸಹೋದರ ಮುಅತಸಿಮ್ರೊಂದಿಗೆ ತನ್ನ ಈ ವಾದಕ್ಕೆ ಅಂಟಿಕೊಳ್ಳುವಂತೆ ಮತ್ತು ಬಲವಂತವಾಗಿ ಜನರನ್ನು ಈ ವಾದಕ್ಕೆ ಕರೆತರುವಂತೆ ವಸಿಯ್ಯತ್ ಮಾಡಿದ್ದರು. ಖಲೀಫರ ವಸಿಯ್ಯತ್ತಿನ ಕಾರಣ ಇಮಾಂ ಅಹ್ಮದ್ರ ಅಗ್ನಿಪರೀಕ್ಷೆ ಮುಂದುವರಿಯಿತು. ಮಾತ್ರವಲ್ಲ, ಅದು ಇನ್ನಷ್ಟು ತೀವ್ರ ಸ್ವರೂಪವನ್ನು ಪಡೆಯಿತು.
ಖಲೀಫ ಮುಅತಸಿಮ್ ಧಾರ್ಮಿಕ ಪಾಂಡಿತ್ಯವುಳ್ಳ ವ್ಯಕ್ತಿಯಾಗಿರಲಿಲ್ಲ. ಬದಲಾಗಿ ನಿರ್ದಯ ಆಡಳಿತಗಾರನಾಗಿದ್ದರು. ಅವರ ಆಡಳಿತಕಾಲದಲ್ಲಿ ಕುರ್ಆನ್ ಸೃಷ್ಟಿಯೆಂಬ ವಾದವನ್ನು ಅಧಿಕಾರ ಬಲದಿಂದ ಜನರ ಮೇಲೆ ಹೇರಲಾಯಿತು. ವಿರೋಧಿಸಿದವರನ್ನು ನಿರ್ದಯವಾಗಿ ದಮನಿಸಲಾಯಿತು. ಈ ವಾದವನ್ನು ವಿರೋಧಿಸಿದ ಇಮಾಂ ಅಹ್ಮದ್ರನ್ನು ಬಗ್ದಾದಿಗೆ ಒಯ್ದು ಸೆರೆಮನೆಗೆ ತಳ್ಳಲಾಯಿತು. ಪ್ರತಿದಿನವೂ ಅವರೊಡನೆ ಅಭಿಪ್ರಾಯ ಕೇಳಲಾಗುತ್ತಿತ್ತು. ಅವರು ತಿರಸ್ಕರಿಸಿದರೆ ಅವರಿಗೆ ಪ್ರಜ್ಞೆ ತಪ್ಪುವ ತನಕ ಚಾವಟಿಯಿಂದ ಬಾರಿಸಲಾಗುತ್ತಿತ್ತು. ಹೀಗೆ 28 ತಿಂಗಳುಗಳ ಕಾಲ ಅವರು ಸೆರೆವಾಸ ಅನುಭವಿಸಿದರು. ಅವರ ಬೆನ್ನು, ಕೈಕಾಲುಗಳು ಗಾಯಗಳಿಂದ ತುಂಬಿದ್ದವು. ವಾದವನ್ನು ಒಪ್ಪಿಕೊಳ್ಳುವಂತೆ ಅವರ ಮುಂದೆ ಆಮಿಷಗಳನ್ನು ಒಡ್ಡಲಾಯಿತು, ಬೆದರಿಕೆಗಳನ್ನು ಹಾಕಲಾಯಿತು. ಆದರೂ ಅವರು ಜಗ್ಗಲಿಲ್ಲ. ಕುರ್ಆನ್ ಸೃಷ್ಟಿಯಲ್ಲ ಎಂಬ ತನ್ನ ಅಭಿಪ್ರಾಯದಲ್ಲಿ ಅವರು ಬಂಡೆಯಂತೆ ಅಚಲವಾಗಿ ನಿಂತರು. ಕೊನೆಗೆ ಅವರು ಬದಲಾಗುವುದಿಲ್ಲ ಎಂದು ಖಾತ್ರಿಯಾದಾಗ ಖಲೀಫ ಅವರನ್ನು ಸೆರೆಯಿಂದ ಬಿಡುಗಡೆ ಮಾಡಿಸಿದರು.
ಇಮಾಂ ಅಹ್ಮದ್ ಮನೆಗೆ ಹಿಂದಿರುಗಿದಾಗ ಅವರಿಗೆ ನಡೆಯಲೂ ಸಾಧ್ಯವಾಗುತ್ತಿರಲಿಲ್ಲ. ತಿಂಗಳುಗಳ ಕಾಲ ಅವರು ಹಾಸಿಗೆಯಲ್ಲೇ ಉಳಿದರು. ಗಾಯಗಳು ಗುಣವಾಗಿ ಆರೋಗ್ಯ ಮರುಕಳಿಸಿದಾಗ ಅವರು ಹದೀಸ್ ತರಗತಿಗಳನ್ನು ಆರಂಭಿಸಿದರು. ಮುಅತಸಿಮ್ ನಿಧನರಾಗುವ ತನಕ ಇದು ಮುಂದುವರಿಯಿತು.
ಮುಅತಸಿಮ್ರ ಮರಣಾನಂತರ ವಾಸಿಕ್ ಖಲೀಫ ಆದರು. ಇಮಾಂ ಅಹ್ಮದ್ರ ಅಗ್ನಿಪರೀಕ್ಷೆ ಮುಂದುವರಿಯಿತು. ಆದರೆ ಮುಅತಸಿಮ್ ಮಾಡಿದಂತೆ ವಾಸಿಕ್ ಇಮಾಮರನ್ನು ಚಾವಟಿಯಿಂದ ಬಾರಿಸಿ ದಂಡಿಸಲಿಲ್ಲ. ಇದರಿಂದ ಇಮಾಮರ ಬಗ್ಗೆ ಜನರಿಗೆ ಅನುಕಂಪ ಉಂಟಾಗಬಹುದು ಮತ್ತು ಅವರ ಅಭಿಪ್ರಾಯಕ್ಕೆ ಜನಮತ ಸಿಗಬಹುದೆಂದು ಅವರು ಭಯಪಟ್ಟರು. ಆದ್ದರಿಂದ ಅವರು ಇಮಾಂ ಅಹ್ಮದ್ರನ್ನು ಸೆರೆಮನೆಗೆ ತಳ್ಳುವ ಬದಲು ಅವರನ್ನು ಗೃಹಬಂಧನದಲ್ಲಿರಿಸಿದರು. ಅವರು ಮನೆಯಿಂದ ಎಲ್ಲೂ ಹೊರಹೋಗಬಾರದು ಮತ್ತು ಯಾರೂ ಅವರನ್ನು ಭೇಟಿಯಾಗಬಾರದೆಂದು ಆಜ್ಞೆ ಹೊರಡಿಸಿದರು. ಇಮಾಮರೊಂದಿಗೆ ಜನರ ಸಂಪರ್ಕ ಮುರಿದರೆ ಕುರ್ಆನ್ ಸೃಷ್ಟಿಯಲ್ಲವೆಂಬ ಅವರ ವಾದವೂ ನೆಲಕಚ್ಚುತ್ತದೆಯೆಂದು ವಾಸಿಕ್ ಭಾವಿಸಿದರು. ವಾಸಿಕ್ ನಿಧನರಾಗುವ ತನಕ ಇಮಾಮರ ಗೃಹಬಂಧನ ಮುಂದುವರಿಯಿತು. ಅವರನ್ನು ಶುಕ್ರವಾರದ ನಮಾಝಿಗೂ ಕೂಡ ಹೊರಗೆ ಬಿಡಲಾಗುತ್ತಿರಲಿಲ್ಲ.
ವಾಸಿಕ್ರ ಮರಣಾನಂತರ ಹಿ. 232 ರಲ್ಲಿ ಮುತವಕ್ಕಿಲ್ ಖಲೀಫರಾದರು. ಇವರ ಆಡಳಿತಕಾಲದಲ್ಲಿ ಅಗ್ನಿಪರೀಕ್ಷೆ ಕೊನೆಗೊಂಡಿತು. ಮುಅತಝಿಲಗಳ ವಾದ ನೆಲಕಚ್ಚಿ ಕುರ್ಆನ್ ಸೃಷ್ಟಿಯಲ್ಲ ಎಂಬ ಅಹ್ಲುಸ್ಸುನ್ನತ್ತಿನ ವಾದ ರಾರಾಜಿಸಿತು. ಸತ್ಯಕ್ಕೆ ಜಯವಾಯಿತು. ಬಸ್ರದ ನ್ಯಾಯಾಧೀಶರಾದ ಇಬ್ರಾಹಿಂ ಬಿನ್ ಮುಹಮ್ಮದ್ ಅತೈಮಿ ಹೇಳುತ್ತಿದ್ದರು: “ಖಲೀಫರು ಮೂವರು. ಒಬ್ಬರು ಅಬೂಬಕರ್ ಸಿದ್ದೀಕ್. ಅವರು ಧರ್ಮಪರಿತ್ಯಾಗಿಗಳ ವಿರುದ್ಧ ಹೋರಾಡಿದರು. ಇನ್ನೊಬ್ಬರು ಉಮರ್ ಬಿನ್ ಅಬ್ದುಲ್ ಅಝೀಝ್. ಅವರು ಉಮಯ್ಯ ಸಂತತಿಗಳು ಅಕ್ರಮವಾಗಿ ಪಡೆದದ್ದನ್ನು ಹಿಂದಿರುಗಿಸಿದರು. ಮೂರನೆಯವರು ಮುತವಕ್ಕಿಲ್. ಅವರು ಬಿದ್ಅತ್ತನ್ನು ಅಳಿಸಿ ಸುನ್ನತ್ತನ್ನು ಬಹಿರಂಗಪಡಿಸಿದರು.” ಇಬ್ನುಲ್ ಜೌಝಿ ಹೇಳುತ್ತಾರೆ: “ಮುತವಕ್ಕಿಲ್ ಬಿದ್ಅತ್ತಿನ ಬೆಂಕಿಯನ್ನು ಆರಿಸಿ ಸುನ್ನತ್ತಿನ ಬೆಳಕನ್ನು ಬೆಳಗಿಸಿದರು.”
ಮರಣ:
ಹಿ. 241 ರಬೀಉಲ್ ಅವ್ವಲ್ ತಿಂಗಳಲ್ಲಿ ತಮ್ಮ 77 ನೇ ವಯಸ್ಸಿನಲ್ಲಿ ಇಮಾಂ ಅಹ್ಮದ್ ಬಿನ್ ಹಂಬಲ್ ನಿಧನರಾದರು.